ಚಿತ್ತಾಪುರ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಮಕ್ಕಳು ತಪ್ಪದೆ ಭಾಗವಹಿಸಿ: ನಂದೂರಕರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಎಲ್.ಎಲ್.ಎಫ್ ಸಂಸ್ಥೆಯವರು ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಮಕ್ಕಳು ತಪ್ಪದೆ ಭಾಗವಹಿಸಬೇಕು ಎಂದು ನಿವೃತ್ತ ಶಿಕ್ಷಕ ದೇವಪ್ಪ ನಂದೂರಕರ್ ಹೇಳಿದರು.
ಪಟ್ಟಣದ ಬಸವ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಎಲ್.ಎಫ್ ಸಂಸ್ಥೆಯಿಂದ ಗುರುವಾರ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಕಾರ್ಯಕ್ರಮಕ್ಕೆ ಸಸಿಗೆ ನಿರೂಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಬೇಸಿಗೆ ಶಿಬಿರ ಕಾರ್ಯಕ್ರಮ ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ, ಮಕ್ಕಳು ಬಿಸಿಲಿಗೆ ತಿರುಗಾಡುವುದು ಕಡಿಮೆಯಾಗಿ ಪಾಲಕರಿಗೆ ಒಂದು ತರಹ ಚಿಂತೆ ಕಡಿಮೆಯಾಗುತ್ತದೆ ಮತ್ತು ಈ ಶಿಬಿರ ಮೇ 17 ರವರೆಗೆ ನಡೆಯುತ್ತದೆ ದಿನಾಲೂ ಒಂದೊಂದು ಚಟುವಟಿಕೆಯ ಮುಖಾಂತರ ಮಕ್ಕಳಲ್ಲಿ ಜ್ಞಾನ ಶಕ್ತಿ ಹೆಚ್ಚಿಸುವುದಾಗಿದ್ದು ಮಕ್ಕಳು ದಿನಾಲು ಬೆಳಿಗ್ಗೆ 8 ಗಂಟೆಗೆ ಬಂದು 11 ಗಂಟೆಯವರೆಗೆ ಕಲಿಕೆಯಲ್ಲಿ ತೊಡಗಿಸಿಕೊಂಡು ಶಿಬಿರದ ಉಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದು ಹೇಳಿದರು.
ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರುವ ಹಾಗೆ ನಾನು ಕೂಡ ಓಣಿಯಲ್ಲಿ ಬಂದು ಮಕ್ಕಳ ಪಾಲಕರಿಗೆ ತಿಳಿಸಿ ಹೇಳುವ ಕೆಲಸ ಮಾಡುತ್ತೇನೆ ಎಂದು ಸಂಸ್ಥೆಯ ಆರ್.ಪಿ ಅವರಿಗೆ ಸಹಕಾರ ಸೂಚಿಸಿದರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಎಸ್.ಆರ್.ಪಿ ಸಂಜೀವಕುಮಾರ ಮಾತನಾಡಿ, ನಮ್ಮ ಸಂಸ್ಥೆ ಬೇಸಿಗೆ ಶಿಬಿರಗಳನ್ನು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಾಡಬೇಕು ಎಂಬ ನಿಯಮವಿದ್ದರೂ ಬಸವನಗರ ಶಾಲೆಯನ್ನು ನಾವು ಇಚ್ಛೆ ಪಟ್ಟು ಆಯ್ಕೆ ಮಾಡಿದ್ದೇವೆ ಆದ್ದರಿಂದ ತಾವೆಲ್ಲರೂ ಈ ಶಿಬಿರಕ್ಕೆ ಕೈ ಜೋಡಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಸದಸ್ಯೆ ಸಂಗೀತಾ ಕ್ಷಿರಸಾಗರ್ ಹಿರಿಯ ಶಿಕ್ಷಕಿ ಲಲಿತಾದೇವಿ ಸಜ್ಜಶೆಟ್ಟಿ ಎಲ್.ಎಲ್.ಎಫ್ ಸಂಸ್ಥೆಯ ಆರ್ ಪಿ ಕು.ಮಲ್ಲಮ್ಮ ಕದ್ದರ್ಗಿ, ಕು.ಸುಷ್ಮಾ, ಕು. ಮಂಜುಳಾ ಎನ್. ಯಾದವ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಗುರು ವೀರಸಂಗಪ್ಪ ಸುಲೇಗಾಂವ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರಿಗೂ ಸ್ವಾಗತ ಕೋರಿದರು. ಕು.ಮಂಜುಳಾ ಎನ್ ಯಾದವ ವಂದನಾರ್ಪಣೆ ಮಾಡಿದರು.

