ವಾಡಿಯಲ್ಲಿ ಪಹಲ್ಗಾಮದಲ್ಲಿ ಬಲಿಯಾದವರಿಗೆ ನಮನ, ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದ ಅಜಾದ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡು ಮೇಣದ ಬತ್ತಿಯನ್ನು ಬೆಳಗಿಸುವುದರ ಮೂಲಕ ಪಹಲ್ಗಾಮದಲ್ಲಿ ಉಗ್ರಗಾಮಿಗಳ ದಾಳಿಗೆ ಬಲಿಯಾದವರೆಗೆ ಗೌರವ ನಮನ ಸಲ್ಲಿಸಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ, ಪಹಲ್ಗಾಮದಲ್ಲಿನ ಉಗ್ರಗಾಮಿಗಳು ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ಭೀಕರವಾಗಿ ಹತ್ಯೆ ಮಾಡಿದ್ದಾರೆ. ದಾಳಿ ವೇಳೆ ಉಗ್ರರು ಪ್ರವಾಸಿಗರ ಧರ್ಮ ಯಾವುದು ಎಂದು ಕೇಳಿ ಗುಂಡಿಕ್ಕಿ ಕೊಂದಿರುವುದು ಅತ್ಯಂತ ಹೇಯ ಕೃತ್ಯವಾಗಿದೆ ಎಂದರು.
ದುಷ್ಕರ್ಮಿಗಳು ಧರ್ಮದ ಹೆಸರಿನಲ್ಲಿ ಅಮಾಯಕ ಮುಗ್ಧ ಜನರನ್ನು ಬಲಿ ತೆಗೆದುಕೊಂಡಿದ್ದಾರೆ. ಈ ದುಷ್ಕೃತ್ಯದ ಹಿಂದೆ ಪಾಕಿಸ್ತಾನದ ಸ್ಪಷ್ಟ ಕೈವಾಡದಿಂದ ನಮ್ಮ ದೇಶದಲ್ಲಿ ಭಯೋತ್ಪಾದನೆಗೆ ಕೃತ್ಯಗಳು ನಡೆಯುತ್ತಿರುವುದರಿಂದ ಆ ಪಾಪಿ ದೇಶವನ್ನು ಕೇಂದ್ರ ಸರ್ಕಾರ ತಕ್ಷಣ ಯುದ್ದ ಸಾರಿ ಸದೆಬಡಿಯಬೇಕು ಎಂದು ಆಗ್ರಹಿಸಿದರು. ಅಮಾಯಕ ಜೀವಗಳು ಬಲಿಯಾಗುವುದನ್ನು ತಡೆಯಬೇಕು ಇದಕ್ಕಾಗಿ ಎಲ್ಲರೂ ಒಟ್ಟಾಗಿ ದೇಶದ ಭವಿಷ್ಯಕ್ಕಾಗಿ ಭಯೋತ್ಪಾದಕರ ವಿರುದ್ಧ ಹೋರಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ಹರಿ ಗಲಾಂಡೆ, ರವೀಂದ್ರ ವಾಲ್ಮೀಕ ನಾಯಕ, ಕಿಶನ ಜಾಧವ, ರಾಮು ರಾಠೊಡ, ಸುಭಾಷ ವರ್ಮಾ, ಅಯ್ಯಣ್ಣ ದಂಡೊತಿ, ವಿಶ್ವರಾಧ್ಯ ತಳವಾರ, ಸತೀಶ್ ಸಾವಳಗಿ, ಭೀಮರಾವ ಸುಬೇದಾರ, ಸಂಜಯ ಗಾಯಕವಾಡ, ದತ್ತಾ ಖೈರೆ, ಶಿವಕುಮಾರ ಹೂಗಾರ, ಈರಣ್ಣ ನಾಟೀಕರ, ದೇವೇಂದ್ರ ಬಡಿಗೇರ ಸೇರಿದಂತೆ ನೂರಾರು ಕಾರ್ಯಕರ್ತರು ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದರು.