ಸಚಿವ ಪ್ರಿಯಾಂಕ್ ಖರ್ಗೆ ನಾಯಿಗೆ ಹೋಲಿಕೆ ಚಿತ್ತಾಪುರದಲ್ಲಿ ಉದ್ವಿಗ್ನ ವಾತಾವರಣ, ಛಲವಾದಿ ನಾರಾಯಣಸ್ವಾಮಿ ಸರ್ಕಾರಿ ವಾಹನದ ನೀಲಿ ಬಣ್ಣ ಎರಚಿ ಕಾಂಗ್ರೆಸ್ ಮುಖಂಡರಿಂದ ಉಗ್ರ ಪ್ರತಿಭಟನೆ, ಅಂಬಾರಾಯ ಅಷ್ಠಗಿ ಮೇಲೆ ಹಲ್ಲೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಲಬುರಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆನೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಾಯಿಗೆ ಹೋಲಿಕೆ ಮಾಡಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಟ್ಟಣದಲ್ಲಿ ಮಿಂಚಿನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ತಿರಂಗಾ ಯಾತ್ರೆಯಲ್ಲಿ ಭಾಗವಹಿಸಲು ಬುಧವಾರ ಚಿತ್ತಾಪುರ ಪಟ್ಟಣಕ್ಕೆ ಆಗಮಿಸಿದ ಛಲವಾದಿ ನಾರಾಯಣಸ್ವಾಮಿ ಪ್ರವಾಸಿ ಮಂದಿರದಲ್ಲಿ ಇರುವ ವಿಷಯ ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರು ಪ್ರವಾಸಿ ಮಂದಿರಕ್ಕೆ ಮುತ್ತಿಗೆ ಹಾಕಿ ಛಲವಾದಿ ವಿರುದ್ಧ ದಿಕ್ಕಾರ ಕೂಗಿ ತೀವ್ರ ಆಕ್ರೋಶ ಹೊರಹಾಕಿದರು.

ಈ ಮಧ್ಯೆ ಕಾಂಗ್ರೆಸ್ ಮುಖಂಡರು ಪ್ರವಾಸಿ ಮಂದಿರದ ಗೇಟ್ ತೆರೆದು ಒಳನುಗ್ಗಿ ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ವಾಹನದ ಮೇಲೆ ನೀಲಿ ಬಣ್ಣ ಎರಚಿ ಉಗ್ರವಾಗಿ ಪ್ರತಿಭಟಿಸಿದರು. ಈ ವೇಳೆ ಪತ್ರಿಕಾ ವರದಿಗಾರನ ಮೇಲೆಯೂ ಬಣ್ಣ ಬಿದ್ದಾಗ ಹೌಹಾರಿದ ಪ್ರಸಂಗ ನಡೆಯಿತು ಅಲ್ಲದೇ ಪೊಲೀಸ್ ಅಧಿಕಾರಿಗಳು ಸಹ ಆತಂಕಕ್ಕೆ ಈಡಾದರು ಈ ಸಂದರ್ಭದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಆಗ ಪೋಲಿಸ್ ಅಧಿಕಾರಿಗಳು ಛಲವಾದಿ ನಾರಾಯಣಸ್ವಾಮಿ ಅವರಿಗೆ ವಾತಾವರಣ ತಿಳಿಹೇಳಿದಾಗ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆನೆ ಹೋಗುವಾಗ ನಾಯಿ ಬೊಗಳುತ್ತದೆ ಇದೊಂದು ಗಾದೆ ಮಾತು ಇದರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಪ್ಪು ಅಂತ ಎನ್ನಿಸಿದರೆ ನನ್ನ ಮೇಲೆ ಕೇಸ್ ಹಾಕಲಿ ಎಂದು ಸವಾಲ್ ಹಾಕಿದರು. ನಾನಾಡಿದ್ದು ಗಾದೆ ಮಾತು ಕ್ಷಮೆ ಕೇಳುವಂತಹ ತಪ್ಪು ಮಾಡಿಲ್ಲ, ನನಗೂ ಚೆಡ್ಡಿ ಹೊರೊನು ಎಂದರು, ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಿಷ ಸರ್ಪ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಆಗ ನಮಗೂ ನೋವಾಗಿತ್ತು ಅದನ್ನು ನಾವು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದೇವು ರಾಜಕಾರಣದಲ್ಲಿ ಒಂದು ಹೊಗುತ್ತೆ ಒಂದು ಬರುತ್ತದೆ ಎಂದು ಸುಮ್ಮನಾದೇವು ಎಂದು ಹೇಳಿದರು. ಈ ಮಧ್ಯೆ ಪ್ರವಾಸಿ ಮಂದಿರದ ಹೊರಗಡೆ ಕಾಂಗ್ರೆಸ್ ಮುಖಂಡರ ಕಾರ್ಯಕರ್ತರ ಪ್ರತಿಭಟನೆಯ ಕಾವು ಹೆಚ್ಚಾಗತೊಡಗಿತ್ತು. ಹೊರಗೆ ಬಂದು ನಮ್ಮ ಮುಂದೆ ಬಹಿರಂಗವಾಗಿ ಪ್ರಿಯಾಂಕ್ ಖರ್ಗೆ ಅವರ ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದಾಗ ವಾತಾವರಣ ಮತ್ತಷ್ಟು ಬಿಗಡಾಯಿಸಿತು.

ಆಗ ಮತ್ತೊಮ್ಮೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, ಆನೆ ಹೋಗುವಾಗ ನಾಯಿ ಬೊಗಳುತ್ತದೆ ಎನ್ನುವ ಗಾದೆ ಮಾತಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಾಯಿಗೆ ಹೋಲಿಕೆ ಮಾಡಿದ್ದು ವಿಷಾದ ಅವರ ಹೆಸರು ವಾಪಸ್ ಪಡೆಯುತ್ತೇನೆ ಎಂದು ಹೇಳಿದರು. ಈ ಆಡಿಯೋ ಪೊಲೀಸ್ ಅಧಿಕಾರಿಗಳು ಹೊರಗಡೆ ನೆರೆದಿದ್ದ ಕಾಂಗ್ರೆಸ್ ಮುಖಂಡರಿಗೆ ಕೇಳಿಸಿದಾಗ ವಾತಾವರಣ ಸ್ವಲ್ಪ ತಿಳಿಗೊಂಡಿತ್ತು. ಅಷ್ಟರಲ್ಲೇ ಜಿಪಂ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ಅಂಬಾರಾಯ ಅಷ್ಠಗಿ ಪ್ರವಾಸಿ ಮಂದಿರಕ್ಕೆ ಆಗಮಿಸುತ್ತಿದ್ದಂತೆ ಮೊದಲೇ ಆಕ್ರೋಶದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಅಷ್ಠಗಿ ಮೇಲೆ ಹಲ್ಲೆ ಮಾಡಿದ ಪ್ರಸಂಗ ನಡೆಯಿತು ಈ ಸಂದರ್ಭದಲ್ಲಿ ಪೊಲೀಸರು ಅಷ್ಠಗಿಗೆ ರಕ್ಷಣೆ ನೀಡಿ ತಹಸೀಲ್ ಕಚೇರಿಯಲ್ಲಿ ಕೂಡಿಸಿದರು.

ಆಗ ಕಾಂಗ್ರೆಸ್ ಮುಖಂಡರನ್ನು ಮತ್ತು ಕಾರ್ಯಕರ್ತನ್ನು ಪೊಲೀಸರು ಚದುರಿಸಿದರು. ಸ್ವಲ್ಪ ಹೊತ್ತು ಆದ ನಂತರ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಪ್ರವಾಸಿ ಮಂದಿರದಿಂದ ಹೊರಗಡೆ ಕರೆತರುವ ಪ್ರಯತ್ನ ಪೊಲೀಸರು ಮಾಡುತ್ತಿದ್ದಂತೆ ರಸ್ತೆಯಲ್ಲಿ ಮತ್ತೆ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು ಆಗ ಪೊಲೀಸರು ಛಲವಾದಿ ನಾರಾಯಣಸ್ವಾಮಿ ಅವರನ್ನು ವಿರುದ್ಧ ದಿಕ್ಕಿನ ರಸ್ತೆಯಲ್ಲಿ ಕರೆದೊಯ್ಯುವಾಗ ಕೆಲ ಕಾರ್ಯಕರ್ತರು ಅವರು ವಾಹನದ ಮೇಲೆ ಬಾಟಲಿಗಳು ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ, ಅಡಿಷನಲ್ ಎಸ್ಪಿ ಮಹೇಶ್ ಮೇಘಣ್ಣವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐಗಳಾದ ಚಂದ್ರಶೇಖರ ತಿಗಡಿ, ನಟರಾಜ್ ಲಾಡೆ, ಪಿಎಸ್ಐಗಳಾದ ಶ್ರೀಶೈಲ್ ಅಂಬಾಟಿ, ತಿಮ್ಮಯ್ಯ , ಶೀಲಾ ದೇವಿ, ಕಲಾವತಿ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!