ಅವ್ವಣ್ಣ ಮ್ಯಾಕೇರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ನೀಡವಂತೆ ಕೋಲಿ ಸಮಾಜ ಮುಖಂಡರು ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕೋಲಿ ಸಮಾಜದ ಹಿರಿಯ ಮುಖಂಡರು ಹಾಗೂ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾದ ಅವ್ವಣ್ಣ ಮ್ಯಾಕೇರಿ ಅವರಿಗೆ ಕಲಬುರ್ಗಿ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕು ಎಂದು ಕೋಲಿ ಸಮಾಜದ ಮುಖಂಡರಾದ ಅಂಬು ಹೋಳಿಕಟ್ಟಿ, ತಿಪ್ಪಣ್ಣ ಇವಣಿ, ರಾಜಶೇಖರ ಮೂಲಿಮನಿ ಹೊಸ್ಸುರ್ ಅವರು ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಶನಿಊ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅವ್ವಣ್ಣ ಮ್ಯಾಕೇರಿ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಪಕ್ಷದ ಸಂಘಟನೆಗೆ ಹಗಲಿರಳು ಶ್ರಮಿಸುತ್ತಾ ಬಂದಿರುತ್ತಾರೆ. ಅಲ್ಲದೇ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳು ಸೇರಿದಂತೆ ಅನೇಕ ಚುನಾವಣೆಯಲ್ಲಿ ಸಕ್ರೀಯವಾಗಿ ಶ್ರಮಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣಿಕರ್ತರಾಗಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇಲ್ಲಿವರೆಗೆ ಹಿಂದುಳಿದವರಿಗೆ ಅವಕಾಶ ನೀಡಿಲ್ಲ ಬರೀ ಮೇಲ್ವರ್ಗದವರಿಗೆ ಮಣೆ ಹಾಕಲಾಗಿದೆ ಹೀಗಾಗಿ ಹಿಂದುಳಿದವರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾಧ್ಯಕ್ಷ ಆಯ್ಕೆ ಮಾಡುವಲ್ಲಿ ಅವ್ವಣ್ಣ ಮ್ಯಾಕೇರಿ ಅವರಿಗೆ ಅವಕಾಶ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮುಡ್ ಅವರು ಭರವಸೆಯನ್ನು ನೀಡಿದ್ದರು. ಆದರೆ ಭರವಸೆ ಈಡೇರಿಲ್ಲ ಇದರಿಂದ ಜಿಲ್ಲೆಯ ಕಾರ್ಯಕರ್ತರಿಗೆ ತೀವ್ರ ಬೇಸರವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಸದ್ಯ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಅಶೋಕ ಬಗಲಿ ಇವರನ್ನು ಬದಲಾವಣೆ ಮಾಡಿ ಅವ್ವಣ್ಣ ಮ್ಯಾಕೇರಿ ಇವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಇವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡದೆ ಇದ್ದ ಪಕ್ಷದಲ್ಲಿ ಪಕ್ಷದ ಮುಖಂಡರ ವಿರುದ್ದ ಉಗ್ರಸ್ವರೂಪ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.