ಚಿತ್ತಾಪುರ ಪಟ್ಟಣ ಗ್ರೀನ್ ಸಿಟಿಯನ್ನಾಗಿ ಮಾಡುವ ಹಂಬಲವಿದೆ: ಜಗದೀಶ್ ಚವ್ಹಾಣ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣವನ್ನು ಗ್ರೀನ್ ಸಿಟಿಯನ್ನಾಗಿ ಮಾಡುವ ಹಂಬಲವಿದೆ ಎಂದು ಪುರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಜಗದೀಶ್ ಚವ್ಹಾಣ ಹೇಳಿದರು.
ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಪದಗ್ರಹಣ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟರಲ್ಲೇ ಓರಿಯಂಟ್ ಸಿಮೆಂಟ್, ವಾಡಿ ಎಸಿಸಿ, ಮಳಖೇಡ ರಾಜೇಶ್ರೀ ಸಿಮೆಂಟ್, ಶ್ರೀ ಸಿಮೆಂಟ್ ಕಂಪನಿಗಳ ಅಧಿಕಾರಿಗಳ ಸಭೆ ಕರೆದು ಅವರಿಗೆ ತಲಾ ಐದೈದು ಸಾವಿರ ಮರಗಳನ್ನು ನೆಟ್ಟು ಬೆಳಸಿ ಪೋಷಿಸುವ ಜವಾಬ್ದಾರಿ ಅವರಿಗೆ ವಹಿಸಲಾಗುವುದು ಎಂದರು.
ಪಟ್ಟಣದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು ಈ ನಿಟ್ಟಿನಲ್ಲಿ ಸ್ಥಾಯಿ ಸಮಿತಿ ಅಧಿಕಾರ ವ್ಯಾಪ್ತಿಯಲ್ಲಿ ಬರುವ ವಿಷಯಗಳ ಬಗ್ಗೆ ಗಮನ ಹರಿಸಿ ಪ್ರಮುಖವಾಗಿ ಶಿಕ್ಷಣ, ಆರೋಗ್ಯ ಕಡೆ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು ಇದಕ್ಕೆ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಸಹಕರಿಸಬೇಕು ಎಂದು ಹೇಳಿದರು.
ಪುರಸಭೆಯ ವಾರ್ಡ್ ನಂ.7 ಕ್ಕೆ ನಡೆದ ಉಪ ಚುನಾವಣೆ ಸಂದರ್ಭದಲ್ಲಿ ನಮ್ಮ ವಾರ್ಡಿನ ಮತದಾರರಿಗೆ ಕಾಂಗ್ರೆಸ್ ಹೈಕಮಾಂಡ್ ಮಾತು ಕೊಟ್ಟಂತೆ ಇಂದು ನನ್ನನ್ನು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಾಡಿರುವುದು ನನಗೆ ಬಹಳ ಹರ್ಷವನ್ನುಂಟು ಮಾಡಿದೆ. ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಲಾಗುವುದು ಎಂದು ಹೇಳಿದರು.