ಚಿತ್ತಾಪುರದಲ್ಲಿ ಉಚಿತ ಯೋಗ ಶಿಬಿರಕ್ಕೆ ಚಾಲನೆ, ಒತ್ತಡ ನಿವಾರಣೆಗೆ ಯೋಗವೇ ಮದ್ದು: ಮಲ್ಲಣ್ಣ ಮುಡಬೂಳ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಇಂದಿನ ಧಾವಂತದ ಬದುಕಿನಲ್ಲಿ, ಸಮಾಜದ ಪ್ರತಿ ರಂಗದಲ್ಲಿ ಕರ್ತವ್ಯ ನಿರ್ವಹಣೆ ಮಾಡಲು ಮಾನಸಿಕ ಹಾಗೂ ದೈಹಿಕ ಆರೋಗ್ಯ ಮುಖ್ಯ. ಅನೇಕ ಒತ್ತಡಗಳ ನಿವಾರಣೆಗಾಗಿ ಯೋಗವೇ ಮದ್ದು ಎಂದು ನಿವೃತ್ತ ಶಿಕ್ಷಕ ಮಲ್ಲಣ್ಣ ಮಾಸ್ಟರ್ ಮುಡಬೂಳ ಹೇಳಿದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಪಟ್ಟಣದ ವಿದ್ಯಾನಿಕೇತನ ಶಾಲಾ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉಚಿತ ಯೋಗ ಶಿಬಿರವನ್ನು ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿಧ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಯೋಗವು ನಮ್ಮನ್ನು ಶಾಂತವಾಗಿರಿಸಲು ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದುರು.
ಯೋಗ ಗುರು ವೀರಣ್ಣ ಶಿಲ್ಪಿ ಅವರು, ಯೋಗದ ವಿವಿಧ ಆಸನಗಳು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ವಿವರಿಸಿದರು. ಶಿಬಿರಾರ್ಥಿಗಳಿಗೆ ಪ್ರಾಯೋಗಿಕವಾಗಿ ಯೋಗಾಭ್ಯಾಸ ಮಾಡಿಸಿದರು.
ಪತಂಜಲಿ ಯೋಗ ಶಿಕ್ಷಕ ಜಗನ್ನಾಥ ಮಂಗಲಗಿ ಮಾತನಾಡಿ, ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂಬರುವ ನಾಲ್ಕು ದಿನಗಳಲ್ಲಿ ಇನ್ನಷ್ಟು ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಉಚಿತ ಯೋಗ ಶಿಬಿರವು ಸಮುದಾಯದಲ್ಲಿ ಯೋಗದ ಬಗ್ಗೆ ಅರಿವು ಮೂಡಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ವಿದ್ಯಾನಿಕೇತನ ಶಾಲೆಯ ಮುಖ್ಯಗುರು ರಮೇಶ್ ಯಾದವಾಡ, ಸುವರ್ಣಾ ಶಿಲ್ಪಿ, ಅಕ್ಕಮಹಾದೇವಿ ದೇಸಾಯಿ, ಮುನಿ ಕಡಬುರ, ರಾಜಶೇಖರ ಶಿರ್ಪಾ, ಮಲ್ಲಿಕಾರ್ಜುನ ಮುಗಳಕರ್ ಸೇರಿದಂತೆ ಶಾಲಾ ಶಿಕ್ಷಕ ವೃಂದದವರು, ಯೋಗ ಅಭ್ಯಾಸಿಗಳು ಮತ್ತು ನೂರಾರು ವಿದ್ಯಾರ್ಥಿಗಳು, ಪಾಲಕರು ಈ ಶಿಬಿರದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.