ಚಿತ್ತಾಪುರದಲ್ಲಿ ಮೇ.13 ರಂದು ಮಾದಾರ ಚೆನ್ನಯ್ಯ ಜಯಂತೋತ್ಸವ ಅದ್ದೂರಿಯಾಗಿ ಆಚರಣೆಗೆ ನಿರ್ಧಾರ: ಬೊಮ್ಮನಳ್ಳಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದಲ್ಲಿ ಶಿವಶರಣ ಕಾಯಕ ಪ್ರೀಯ ಮಾದಾರ ಚೆನ್ನಯ್ಯ ಜಯಂತೋತ್ಸವ ಕಾರ್ಯಕ್ರಮವನ್ನು ಬರುವ ಮೇ.13 ರಂದು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಯಂತೋತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ ಹೇಳಿದರು.
ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈಗಾಗಲೇ ದಿನಾಂಕ ನೀಡಿದ್ದು ಜಯಂತಿ ಆಚರಣೆಗೆ ಹಸಿರು ನಿಶಾನೆ ನೀಡಿದ್ದಾರೆ. ಹೀಗಾಗಿ ಜಯಂತ್ಯೋತ್ಸವ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಮುಖಂಡರು ಈಗಿನಿಂದಲೇ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಂಘಟಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಜಯಂತಿ ಸಮಾರಂಭಕ್ಕೆ ಸಚಿವರಾದ ಕೆ.ಹೆಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪೂರ್, ಮಾಜಿ ಉಪ ಮುಖ್ಯಮಂತ್ರಿ, ಸಂಸಧ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಎ.ನಾರಾಯಣಸ್ವಾಮಿ, ಎಚ್.ಆಂಜನೇಯ ಅವರು ಭಾಗವಹಿಸಲಿದ್ದಾರೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಮುಖಂಡರು, ಯುವಕರು ಮತ್ತು ಮಹಿಳೆಯರು ಭಾಗವಹಿಸಬೇಕು ಎಂದು ಕೋರಿದ್ದಾರೆ.
ಬಹಳ ದಿನಗಳಿಂದ ಮಾದಾರ ಚೆನ್ನಯ್ಯ ಜಯಂತಿಯನ್ನು ಮಾಡಬೇಕೆಂಬ ಕನಸು ಈಗ ನನಸಾಗುವ ಕಾಲ ಕೂಡಿಬಂದಿದೆ ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಜನರನ್ನು ಸಂಘಟಿಸಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಮಾಡಲಾಗುವುದು. ತಾಲೂಕಿನಲ್ಲಿ ಪ್ರಥಮ ಬಾರಿಗೆ ಜಯಂತಿ ಕಾರ್ಯಕ್ರಮ ನಡೆಯುತ್ತಿದ್ದು ಎಲ್ಲರೂ ಕೈಜೋಡಿಸಿ ಸಹಕಾರ ಮಾಡಬೇಕು ಎಂದು ಮನವಿ ಮಾಡಿದರು.
ಜಯಂತ್ಯೋತ್ಸವ ಸಮಿತಿ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಮಾತನಾಡಿ, ಮಾದಾರ ಚೆನ್ನಯ್ಯ ಜಯಂತಿಯನ್ನು ಪಕ್ಷಾತೀತವಾಗಿ ಆಚರಿಸಲಾಗುತ್ತದೆ ಹೀಗಾಗಿ ಎಲ್ಲಾ ಪಕ್ಷಗಳ ನಾಯಕರು, ಸಮಾಜದ ಎಲ್ಲ ಸಂಘಟನೆಗಳ ಮುಖಂಡರು ಸಕ್ರೀಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಯಂತ್ಯೋತ್ಸವ ಸಮಿತಿಯ ಉಪಾಧ್ಯಕ್ಷ ದೇವಿಂದ್ರಪ್ಪ ಹಾದಿಮನಿ, ಪ್ರಧಾನ ಕಾರ್ಯದರ್ಶಿ ದೀಪಕ್ ಹೊಸ್ಸುರಕರ್, ಸಹ ಕಾರ್ಯದರ್ಶಿ ಬಸವರಾಜ ಮುಡಬೂಳ, ಖಜಾಂಚಿ ಶ್ರೀಕಾಂತ್ ಹೊಸ್ಸಳ್ಳಿಕರ್, ತಾಲೂಕು ಯುವ ಅಧ್ಯಕ್ಷ ರವಿ ಅಳ್ಳೋಳ್ಳಿ, ವಿನ್ನುಕುಮಾರ್ ಜಡಿ ಸೇರಿದಂತೆ ಇತರರು ಇದ್ದರು.