ಚಿತ್ತಾಪುರದಲ್ಲಿ ರಸಗೊಬ್ಬರ ಕೊರತೆ ರೈತರ ಪರದಾಟ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮುಂಗಾರು ಮಳೆ ಋತುಮಾನಕ್ಕೆ ತಕ್ಕಂತೆ ಆರಂಭವಾಗಿದ್ದು, ಹದಬರಿತವಾದ ಮಳೆಯಾದ ಕಾರಣ ಇಡೀ ರೈತ ಸಮೂಹ ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರಿಗೆ ಸರಿಯಾದ ಸಮಯಕ್ಕೆ ಬೀಜ, ಗೊಬ್ಬರ ವಿತರಣೆ ಮಾಡುವುದು ಅವಶ್ಯವಾಗಿದೆ. ಆದರೆ ತಾಲೂಕಿಗೆ ವಾಡಿಕೆ ಪ್ರಕಾರ ಡಿಎಪಿ ಗೊಬ್ಬರ ಬಂದಿಲ್ಲ. ಹೀಗಾಗಿ ರೈತರು ಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ.
ಕೃಷಿ ಸಹಾಯಕ ನಿರ್ದೇಶಕರು ಮಾರುಕಟ್ಟೆಯಲ್ಲಿ ಡಿಎಪಿ ರಸಗೊಬ್ಬರ ಸ್ಟಾಕ್ ಇದೆ ಎನ್ನುತ್ತಾರೆ ಆದರೆ ರೈತರು ಸ್ಟಾಕ್ ಇಲ್ಲ ಎಂದು ಹೇಳಿದ್ದಾರೆ ಹೀಗಾಗಿ ಈ ಕುರಿತು ಅಧಿಕಾರಿಗಳು ಸ್ವತಃ ರಸಗೊಬ್ಬರ ಅಂಗಡಿಗಳಿಗೆ ಭೇಟಿ ನೀಡಿ ವಾಸ್ತವಾಂಶ ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕಿದೆ.
ಕೆಲವು ಗೊಬ್ಬರ ಅಂಗಡಿ ಮಾಲೀಕರು ಗೊಬ್ಬರ ಇದ್ದರು ಸಹ ಕೃತಕ ಅಭಾವ ತೋರುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಚಿತ್ತಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆ ನಿರಂತರ ಸುರಿಯುತ್ತಿರುವುದರಿಂದ ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಬೇಡಿಕೆ ಇದ್ದಾಗ ಯೂರಿಯಾ ಗೊಬ್ಬರ ಕೊರತೆಯಾಗಿರುವುದರಿಂದ ರೈತ ಕಂಗಾಲಾಗಿದ್ದಾನೆ. ಕೆಲ ರಸಗೊಬ್ಬರ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರವೊಂದನ್ನೇ ಕೇಳಿದರೆ ಸ್ಟಾಕ್ ಇಲ್ಲ ಎಂಬ ಉತ್ತರ ಬರುತ್ತಿದ್ದು, ಯೂರಿಯಾ ಗೊಬ್ಬರ ಜೊತೆಗೆ ಬೇರೆ ಗೊಬ್ಬರ, ಕೀಟನಾಶಕ ಖರೀದಿಸುತ್ತೇನೆಂದರೆ ಮಾತ್ರ ಯೂರಿಯಾ ಗೊಬ್ಬರ ಸಿಗುವಂತಹ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಅಧಿಕಾರಿಗಳು ಹಾಗೂ ವರ್ತಕರನ್ನು ರೈತರು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ.
ಇನ್ನು ಮಾರುಕಟ್ಟೆಯಲ್ಲಿ ನಿಜವಾಗಿಯೂ ಯೂರಿಯಾ ಕೊರತೆ ಇದೆಯೋ ಅಥವಾ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆಯೋ ಎಂಬ ಶಂಕೆ ರೈತ ಸಮೂಹದಲ್ಲಿ ಮೂಡಿದೆ.
“ಚಿತ್ತಾಪುರ ತಾಲೂಕಿನಲ್ಲಿ ಡಿಎಪಿ ರಸಗೊಬ್ಬರ ಕೊರತೆ ಇರುವುದಿಲ್ಲ ಮಾರುಕಟ್ಟೆಯಲ್ಲಿ ಸ್ಟಾಕ್ ಇದೆ, ರೈತರು ಪಡೆಯಬಹುದು ಈ ನಿಟ್ಟಿನಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು”.-ಸಂಜೀವಕುಮಾನರ್ ಮಾನಕರ್ ಕೃಷಿ ಸಹಾಯಕ ನಿರ್ದೇಶಕರು ಚಿತ್ತಾಪುರ.
“ಮುಂಗಾರು ಮಳೆ ಸಕಾಲಕ್ಕೆ ಬಂದಿದ್ದರಿಂದ ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗಿರುವಾಗ ಡಿಎಪಿ ರಸಗೊಬ್ಬರ ಕೊರತೆ ಉಂಟಾಗಿದೆ ಹೀಗಾಗಿ ರೈತರ ಹಿತದೃಷ್ಟಿಯಿಂದ ಡಿಎಪಿ ಕೊರತೆ ಆಗದಂತೆ ಕೃಷಿ ಅಧಿಕಾರಿಗಳು ಗಮನ ಹರಿಸಬೇಕು”.-ಮೌನೇಶ್ ಭಂಕಲಗಿ ರೈತ ಸಂಘದ ತಾಲೂಕು ಅಧ್ಯಕ್ಷರು.