ಕೋವಿಡ್ ದಿಂದ ನಿಧನರಾಗಿದ್ದ ಗ್ರಾಪಂ ಸಿಬ್ಬಂದಿ ಕುಟುಂಬ ವರ್ಗದವರಿಗೆ ರೂ. 30 ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವ ಪ್ರಿಯಾಂಕ್ ಖರ್ಗೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಕೋವಿಡ್-19 ಸೋಂಕು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಗ್ರಾಮ ಪಂಚಾಯತಿಯಿಂದ ನಿಯೋಜಿಸಿದ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗ ತಗುಲಿ ನಿಧನರಾಗಿದ್ದ ಸರಡಗಿ (ಬಿ) ಗ್ರಾಮ ಪಂಚಾಯತಿಯ ಪಂಪ್ ಆಪರೇಟರ್ ಈರಣ್ಣ ಶರಣಪ್ಪ ದಂಡೋತಿ ಅವರ ಕುಟುಂಬದವರಿಗೆ ರೂ.30 ಲಕ್ಷ ಮೊತ್ತದ ಪರಿಹಾರದ ಚೆಕ್ನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿ ವಿತರಿಸಿದರು.
ಕೋವಿಡ್-19 ಸಾಂಕ್ರಾಮಿಕ ರೋಗ ತಗುಲಿದ್ದ ಈರಣ್ಣನನ್ನು 10 ಮೇ 2021 ರಂದು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೂ, ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದ್ದು, ಇದರ ಬಗ್ಗೆ ಜಿಲ್ಲಾ ವೈದ್ಯಕೀಯ ಮಂಡಳಿ ಜಿಲ್ಲಾ ಆಸ್ಪತ್ರೆ ಕಲಬುರಗಿ ರವರು ಕೋವಿಡ್-19 ರಿಂದ ಮರಣ ಹೊಂದಿದ ಬಗ್ಗೆ ಧೃಢೀಕರಣ ನೀಡಿರುವ ಪ್ರಯುಕ್ತ, ಕಲಬುರಗಿ ಜಿಲ್ಲಾ ಪಂಚಾಯತ ಆಶ್ವಾಸನೆ ನಿಧಿಯಿಂದ ರೂ.30 ಲಕ್ಷಗಳ ಪರಿಹಾರದ ಮೊತ್ತದ ಚೆಕ್ನ್ನು ವಿತರಿಸಿದ ಸಚಿವರು ಕಷ್ಟಕಾಲದಲ್ಲಿ ಕುಟುಂಬದ ನೆರವಿಗೆ ಧಾವಿಸಿದ್ದಾರೆ.
ಮೃತರ ಧರ್ಮಪತ್ನಿ ಶಾಂತಾಬಾಯಿ ಗಂಡ ದಿ.ಈರಣ್ಣ ದಂಡೋತಿ ಸಚಿವರಿಂದ ಚೆಕ್ ಪಡೆದುಕೊಂಡರು. ಈ ಸಂದರ್ಭದಲ್ಲಿ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಹರವಾಳ, ಎಂಡಿ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಜಿಪಂ ಸಿಇಒ ಭಂವರಸಿಂಗ್ ಮೀನಾ, ಮುಖ್ಯ ಲೆಕ್ಕಾಧಿಕಾರಿ ವಿಕಾಸ ಸಜ್ಜನ್ ಹಾಗೂ ಇತರರು ಉಪಸ್ಥಿತರಿದ್ದರು.

