ಗುಂಡಗುರ್ತಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಸೇರಿಯನ್ ಹೆರಿಗೆಯ ವಿಭಾಗ ಆರಂಭ, ಸದುಪಯೋಗ ಪಡೆದುಕೊಳ್ಳಲು ಕರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಇಚ್ಛಾಶಕ್ತಿಯಂತೆ ತಾಲೂಕಿನ ಗುಂಡಗುರ್ತಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಸಿಸೇರಿಯನ್ ಹೆರಿಗೆ ವಿಭಾಗ ಪ್ರಾರಂಭವಾಗಿದ್ದು ಸುತ್ತಲಿನ ರೋಗಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಗ್ರಾಪಂ ಸದಸ್ಯ ಸುನೀಲ್ ಅಮ್ಮಗೋಳ ಕರೆ ನೀಡಿದ್ದಾರೆ.
ಮೊದಲ ಬಾರಿಗೆ ಸಮುದಾಯ ಆರೋಗ್ಯ ಕೇಂದ್ರ ಸಿಸೇರಿಯನ್ ವಿಭಾಗದ (ಎಲ್ಎಸ್ಸಿಎಸ್) ಆಡಳಿತ ವೈದ್ಯಾಧಿಕಾರಿ ಡಾ.ಇರ್ಫಾನ್ ಇನಾಮದಾರ ಹಾಗೂ ಹಿರಿಯ ವೈದ್ಯ ಡಾ.ವಿದ್ಯಾಸಾಗರ್ ಚಿದಾನಂದ ಇವರ ನೇತೃತ್ವದಲ್ಲಿ ಡಾ.ಶಿಲ್ಪಾರಾಣಿ ಪ್ರಸೂತಿ ತಜ್ಞರು ಡಾ.ಅಜೀಮ್ ಸಕ್ರಿ ಅರವಳಿಕೆ ತಜ್ಞರು ಡಾ.ಪುಷ್ಪಾ ಸ್ತ್ರೀ ರೋಗ ತಜ್ಞರು ಇನ್ನಿತರ ಶುಶ್ರೂಷಾಧಿಕಾರಿಗಳು ಹಾಗೂ ಗ್ರೂಪ್ ಡಿ ನೌಕರರು ಭಾಗಿಯಾಗಿ ಬಾಣಂತಿಗೆ ಹಾಗೂ ಮಗುವಿಗೆ ಏನೂ ಸಮಸ್ಯೆಯಾಗದಂತೆ ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸಿರುತ್ತಾರೆ.
ಈ ಆಸ್ಪತ್ರೆಯಲ್ಲಿ ಎಲ್ಲಾ ತಜ್ಞ ವೈದ್ಯರುಗಳು ಲಭ್ಯವಿರುವುದರಿಂದ ವಿಶೇಷವಾಗಿ ಸಾಧಾರಣ ಹೆರಿಗೆ ಹಾಗೂ ಸಿಸೇರಿಯನ್ ಹೆರಿಗೆ ಉಚಿತವಾಗಿ ಮಾಡಲಾಗುವುದು. ಇದರ ಸದುಪಯೋಗವನ್ನು ಸುತ್ತಮುತ್ತಲಿನ ಗ್ರಾಮದಿಂದ ಹಾಗೂ ತಾಲೂಕಗಳಿಂದ ಬರುವ ರೋಗಿಗಳು ಪಡೆದುಕೊಳ್ಳಬೇಕೆಂದು ಆಡಳಿತ ವೈದ್ಯಾಧಿಕಾರಿ ಡಾ.ಇರ್ಫಾನ್ ಇನಾಮದಾರ ತಿಳಿಸಿದ್ದಾರೆ.