ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಮಹಾಂತಪ್ಪ ಸಂಗಾವಿ ತೀವ್ರ ಖಂಡನೆ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಬಳಸುವುದು ಶೋಕಿಯಾಗಿದೆ, ಅವರ ಹೆಸರು ಬದಲಿಗೆ ದೇವರ ಹೆಸರನ್ನು ಹೇಳಿದ್ದರೆ ಏಳು ಜನ್ಮದವರೆಗೂ ಸ್ವರ್ಗ ಲಭ್ಯವಾಗುತ್ತಿತ್ತು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಈ ಮೇಲಿನ ಹೇಳಿಕೆಯಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ ವಿರೋಧಿ ಮನೋಭಾವ ಎದ್ದು ಕಾಣುತ್ತದೆ. ಇಂತಹ ಅಸೂಕ್ಷ್ಮ ಮತ್ತು ಅಭದ್ರ ಹೇಳಿಕೆ ಇಡೀ ದೇಶದ ಶೋಷಿತ ಸಮುದಾಯಗಳ ಸಂಕಷ್ಟ ಮತ್ತು ಅವಮಾನವನ್ನು ಪುನಃ ಒತ್ತಿಹೇಳುತ್ತದೆ. ಅವರ ಈ ಹೇಳಿಕೆಯನ್ನು ಕೆಪಿಸಿಸಿ ಸದಸ್ಯರು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಮಹಾಂತಪ್ಪ ಕೆ. ಸಂಗಾವಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಭಾರತದ ಇತಿಹಾಸದಲ್ಲಿ ಅಸ್ಪೃಶ್ಯರು, ಮಹಿಳೆಯರು ಮತ್ತು ಶೋಷಿತ ವರ್ಗಗಳಿಗೆ ಮಾನವೀಯ ಬದುಕು ನೀಡಿದ ಶಕ್ತಿ ಬಾಬಾಸಾಹೇಬರು ಕೊಟ್ಟ ಸಂವಿಧಾನ ಮತ್ತು ಅವರ ಮಾರ್ಗದರ್ಶಕ ತತ್ವಗಳಿಂದ ಬಂದಿದೆ. ಅಸ್ಪೃಶ್ಯತೆ, ಅಸಮಾನತೆ, ಮತ್ತು ಶೋಷಣೆಯ ವಿರುದ್ಧ ಬಾಬಾಸಾಹೇಬರು ತಮ್ಮ ತ್ಯಾಗ, ಅಧ್ಯಯನ ಮತ್ತು ಬದ್ಧತೆಯ ಮೂಲಕ ಸಮಾಜವನ್ನು ಹತ್ತಿಕ್ಕಿದ ಸತ್ಯವನ್ನು ಮರೆಯುವಂತಿಲ್ಲ ಎಂದು ತಿಳಿಸಿದ್ದಾರೆ.
ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ಆದರ್ಶಗಳು, ಶೋಷಿತ ವರ್ಗಗಳಿಗೆ ಹೊಸ ಬದುಕು ನೀಡಿದ ನಿಜವಾದ ದಾರಿ. ಬಾಬಾಸಾಹೇಬರು ಸ್ಪಷ್ಟವಾಗಿ ಹೇಳಿರುವಂತೆ, ಶಿಕ್ಷಣ, ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆ ಮಾತ್ರವೇ ಸಮಾಜದಲ್ಲಿ ಬದಲಾವಣೆ ತರಬಲ್ಲ ಯೋಗ್ಯ ಮಾರ್ಗ ಎಂದರು.
ಅಮಿತ್ ಶಾ ಅವರಂತಹ ವ್ಯಕ್ತಿಗಳು ಇಂತಹ ಹೀನ ಹೇಳಿಕೆಗಳಿಂದ ದೇಶದ ಜನತೆ ಮುಂದೆ ಕ್ಷಮೆಯಾಚಿಸಬೇಕು ಮತ್ತು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಭಾರತದ ಶೋಷಿತ ಸಮುದಾಯಗಳಿಗೆ ಬದುಕಿನ ನವೋಥಾನ ನೀಡಿದ ಅಂಬೇಡ್ಕರ್ ಅವರ ಮಹತ್ವವನ್ನು ಗೌರವಿಸೋಣ ಮತ್ತು ಅವರ ಸಾಮಾಜಿಕ ನ್ಯಾಯದ ಆದರ್ಶಗಳನ್ನು ಪ್ರತಿ ದಿನ ನೆನಪಿಸಿಕೊಳ್ಳೋಣ ಎಂದು ತಿಳಿಸಿದ್ದಾರೆ.