ಒಳಮೀಸಲಾತಿ ಜಾರಿಗಾಗಿ ರಾಜ್ಯಾದ್ಯಂತ ಕ್ರಾಂತಿಕಾರಿ ರಥಯಾತ್ರೆ, ಸರ್ಕಾರಕ್ಕೆ ಜೂನ್ 9 ಗಡುವು: ಭಾಸ್ಕರ್ ಪ್ರಸಾದ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಒಳಮೀಸಲಾತಿ ಜಾರಿಗಾಗಿ ಸರ್ಕಾರಕ್ಕೆ ಜೂನ್ 9 ಗಡುವು ನೀಡಲಾಗಿದೆ ಎಂದು ಕ್ರಾಂತಿಕಾರಿ ಒಳಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಭಾಸ್ಕರ್ ಪ್ರಸಾದ್ ಹೇಳಿದರು.
ಕ್ರಾಂತಿಕಾರಿ ರಥಯಾತ್ರೆಗೆ ಚಿತ್ತಾಪುರ ಪಟ್ಟಣಕ್ಕೆ ಮಾದಿಗ ಸಮಾಜದ ಮುಖಂಡರು ಗುರುವಾರ ಸ್ವಾಗತಿಸಿದರು, ನಂತರ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿಗಾಗಿ ಮಲೈ ಮಹದೇಶ್ವರ ಬೆಟ್ಟದಿಂದ ಪ್ರಾರಂಭವಾದ ಕ್ರಾಂತಿಕಾರಿ ರಥಯಾತ್ರೆ 16 ಜಿಲ್ಲೆಗಳಲ್ಲಿ ಸಂಚರಿಸಿದ್ದು ಬುಧವಾರ ಕಲಬುರಗಿ ಜಿಲ್ಲೆಗೆ ಆಗಮಿಸಿದ್ದು ಇಂದಿಗೆ 60 ದಿನಗಳಾಗಿದೆ. ಜೂನ್ 9 ರಂದು ಬೆಂಗಳೂರು ಬೃಹತ್ ಸಮಾವೇಶ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದು ತಿಳಿಸಿದರು.
ಏಪ್ರಿಲ್ 5 ರಂದು ಬಾಬು ಜಗಜೀವನರಾಮ್ ಜಯಂತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಒಳಮೀಸಲಾತಿ ಜಾರಿ ಮಾಡದೇ ಬಡ್ತಿ ಹಾಗೂ ನೇಮಕಾತಿ ಮಾಡುವುದಿಲ್ಲ ಎಂದು ಹೇಳಿದ್ದರು ಆದರೆ ಇವತ್ತಿಗೆ 25 ದಿನಗಳಲ್ಲಿ ಬಡ್ತಿ ನೇಮಕಾತಿಗಳು ನಡೆಯುತ್ತಿವೆ ಸಿಎಂ ತಮ್ಮ ಮಾತು ತಪ್ಪಿದ್ದಾರೆ ಈ ಮೂಲಕ ಮಾದಿಗ ಸಮಾಜಕ್ಕೆ ಅಪಮಾನ ಮತ್ತು ವಂಚನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಯೋಗದವರಿಗೆ ಕೇಳಿದರೆ ಇದು ನಮ್ಮ ಕೆಲಸವಲ್ಲ ಸರ್ಕಾರದ ಕೆಲಸ, ಸರ್ಕಾರದ ಸಿಎಂ ಅವರಿಗೆ ಕೇಳಿದರೆ ಇದು ಆಯೋಗದ ಕೆಲಸ ನಮ್ಮದು ಏನು ಇಲ್ಲ ಎಂದು ಹಾರಿಕೆ ಹಾಗೂ ದ್ವಂದ್ವ ಹೇಳಿಕೆಗಳು ನೀಡಿದ್ದಾರೆ ಎಂದು ಹೇಳಿದರು. ರಾಜ್ಯದ ಸೊಂಡೂರು, ಚೆನ್ನಪಟ್ಟಣ, ಶಿಗ್ಗಾಂವಿ ಈ ಮೂರು ಕ್ಷೇತ್ರಗಳ ಉಪ ಚುನಾವಣೆಯ ಸಂದರ್ಭದಲ್ಲಿ ಸಮಜಾಯಿಷಿ ನೀಡಿ ಮಾದಿಗರ ಮತಗಳು ಪಡೆದು ಗೆಲುವು ಸಾಧಿಸಿದ್ದರು ಆದರೆ ಇಲ್ಲಿವರೆಗೆ ಚಕಾರವೆತ್ತುತ್ತಿಲ್ಲ ಇದರಿಂದ ನಮ್ಮ ಜೊತೆ ಸರ್ಕಾರ ನಾಟಕವಾಡುತ್ತಿದೆ ಇದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದರು.
ಒಳಮೀಸಲಾತಿ ಜಾರಿಗಾಗಿ ಹೋರಾಟ ಇವತ್ತಿನದಲ್ಲ ಕಳೆದ 35 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮಾದಿಗ ಸಮಾಜಕ್ಕೆ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಮಾದಿಗ ಸಮಾಜದ ಹಿರಿಯ ಮುಖಂಡ ರಾಜು ಮುಕ್ಕಣ್ಣ ಮಾತನಾಡಿ, ಒಳಮೀಸಲಾತಿ ಜಾರಿಯಾಗಬೇಕು ಎಂದು ಕ್ರಾಂತಿಕಾರಿ ಒಳಮೀಸಲಾತಿ ಹೋರಾಟ ಸಮಿತಿ ಅವರು ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಕ್ರಾಂತಿಕಾರಿ ರಥಯಾತ್ರೆಗೆ ಎಲ್ಲರೂ ಪಕ್ಷಬೇಧ ಮರೆತು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಗೂಡೆಮಾರ್ನಳ್ಳಿ ನಾಗರಾಜ, ಸಾಮ್ರಾಟ್ ಉಮೇಶ್, ಎಲಿಯಸ್ ರೆಡ್ಡಿ, ಪುಟ್ಟಣ್ಣ ಮೈಸೂರು, ದೀಪಕ್ ಹೊಸ್ಸುರಕರ್, ಶ್ರೀಕಾಂತ್ ಹೊಸ್ಸಳ್ಳಿಕರ್, ನಾಗೇಶ್ ಹಲಗಿ, ದುರ್ಗೆಶ್ ಹಣಿಕೇರಾ, ಬಸವರಾಜ ಮುಡಬೂಳ, ಜಗದೀಶ್ ವಾಡಿ ಸೇರಿದಂತೆ ಇತರರು ಇದ್ದರು.