ಮೇ.27 ರಂದು ಕಾಖಂಡಕಿಯಲ್ಲಿ ಮಲ್ಲಾರಾಧ್ಯರ ಕೋರಿಸಿದ್ಧೇಶ್ವರರ ಜಾತ್ರಾ ಮಹೋತ್ಸವ
ನಾಗಾವಿ ಎಕ್ಸಪ್ರೆಸ್
ಯಡ್ರಾಮಿ: ತಾಲೂಕಿನ ಶ್ರೀಕ್ಷೇತ್ರ ಕಾಖಂಡಕಿ ಗ್ರಾಮದಲ್ಲಿ ಸದ್ಗುರು ಮಲ್ಲಾರಾಧ್ಯರ ಹಾಗೂ ಸದ್ಗುರು ಕೋರಿಸಿದ್ಧೇಶ್ವರರ ಜಾತ್ರಾ ಮಹೋತ್ಸವವು ಇದೇ ಮೇ 27 ಮತ್ತು 28 ರಂದು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ವಕ್ತಾರ ಮಹಾದೇವ ಗಂವಾರ್ ತಿಳಿಸಿದ್ದಾರೆ.
ನಾಲವಾರ ಹಾಗೂ ಕಾಖಂಡಕಿ ಶ್ರೀಮಠಗಳ ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮೇ 27 ರ ಬಾದಾಮಿ ಅಮಾವಾಸ್ಯೆಯ ದಿನದಂದು ಸಂಜೆ ನಾಡಿನ ಅನೇಕ ಪೂಜ್ಯ ಮಠಾಧೀಶರ ಸಮ್ಮುಖದಲ್ಲಿ ಶಿವಾನುಭವ ಸಾಂಸ್ಕೃತಿಕ ಸಂಭ್ರಮ ಹಾಗೂ ಪೂಜ್ಯರ ತುಲಾಭಾರ ಕಾರ್ಯಕ್ರಮ ನಡೆಯಲಿದೆ. ಮಧ್ಯರಾತ್ರಿ ಭಕ್ತರ ಹರಕೆಯ ತನಾರತಿ ಉತ್ಸವ ಕಾರ್ಯಕ್ರಮ ನಡೆಯಲಿದೆ.
ಮರುದಿನ 28 ರಂದು ನಾಡಿನ-ಪರನಾಡಿನ ಸಹಸ್ರಾರು ಸದ್ಭಕ್ತರ ಮಧ್ಯೆ ಸದ್ಗುರು ಮಲ್ಲಾರಾಧ್ಯರ ಹಾಗೂ ಕೋರಿಸಿದ್ಧೇಶ್ವರ ಶಿವಯೋಗಿಗಳ ಭವ್ಯ ರಥೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ.
ರಥೋತ್ಸವದ ಸಂದರ್ಭದಲ್ಲಿ ವಿಶೇಷ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದ್ದು ಹಾಗೂ ವಿವಿಧ ಜಾನಪದ ಕಲಾತಂಡಗಳ ಕಲಾಪ್ರದರ್ಶನ ರಥೋತ್ಸವದ ಮೆರುಗು ಹೆಚ್ಚಿಸಲಿವೆ.
ರಾತ್ರಿ ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭ ಹಾಗೂ ಸದ್ಭಕ್ತರಿಗೆ ಗುರುರಕ್ಷಾ ಪ್ರದಾನ ಸಮಾರಂಭದ ಅಧ್ಯಕ್ಷತೆ ಜೇವರ್ಗಿ ಶಾಸಕ ಮತ್ತು ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ವಹಿಸುವರು. ಅತಿಥಿಗಳಾಗಿ ಕಲಬುರ್ಗಿ ಶಾಸಕ ಅಲ್ಲಂಪ್ರಭು ಪಾಟೀಲ, ಸಿಂದಗಿಯ ಶಾಸಕ ಅಶೋಕ್ ಮನಗೂಳಿ, ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ್, ಮಾಜಿ ಶಾಸಕ ದೊಡ್ಡಪಗೌಡ ನರಿಬೋಳ, ದತ್ತಾತ್ರೇಯ ಪಾಟೀಲ್ ರೇವೂರ, ರಾಜಕುಮಾರ್ ಪಾಟೀಲ್ ತೇಲ್ಕೂರ್ ಪಾಟೀಲ್, ಅಶೋಕ್ ಸಾಹು ಗೋಗಿ, ಶಿವರಾಜ್ ಪಾಟೀಲ್ ರೆದ್ದೇವಾಡಗಿ, ರಾಜಶೇಖರ್ ಸೀರಿ ಜೇವರ್ಗಿ ಸೇರಿದಂತೆ ಅನೇಕರು ಭಾಗವಹಿಸುವರು. ವಿವಿಧ ಕಲಾವಿದರಿಂದ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ.
ಆಗಮಿಸುವ ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಜಾತ್ರೋತ್ಸವದ ಪ್ರಯುಕ್ತ ಈಗಾಗಲೇ ಶ್ರೀಮಠದಲ್ಲಿ ಮಡಿವಾಳಯ್ಯ ಶಾಸ್ತ್ರಿಗಳು ಜೇರಟಗಿ ಅವರಿಂದ ಶ್ರೀ ಕ್ಷೇತ್ರ ನಾಲವಾರ ಪವಾಡ ಪುರುಷ ಸಿದ್ದ ಶಿವಯೋಗಿ ಶ್ರೀ ಕೂರಿಸಿದ್ದೇಶ್ವರರ ಪುರಾಣ ಪ್ರವಚನ, ಸಿದ್ದಯ್ಯ ಸ್ವಾಮಿ ಪಡದಳ್ಳಿ ಹಾಗೂ ರಾಜಶೇಖರ ಗೆಜ್ಜಿ ಅವರಿಂದ ಸಂಗೀತ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕ್ರಿಯೆಗಳು ಕಳೆದ ವಾರದಿಂದ ನಿರಂತರವಾಗಿ ನಡೆಯುತ್ತಿವೆ.
ಜಾತ್ರಾ ಮಹೋತ್ಸವದಲ್ಲಿ ನಾಡಿನ ಹರಗುರು ಚರಮೂರ್ತಿಗಳು, ಸಚಿವರು, ಶಾಸಕರು, ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯ ಸಾಧಕರು ಭಾಗವಹಿಸಲಿದ್ದಾರೆ. ಜಾತ್ರಾ ಮಹೋತ್ಸವಕ್ಕಾಗಿ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಸದ್ಭಕ್ತರು ಪಾದಯಾತ್ರೆಯ ಮೂಲಕ ಆಗಮಿಸುವುದು ಇಲ್ಲಿನ ವಿಶೇಷವಾಗಿದೆ.