ರಾವೂರ ಲಿಂ.ಸಿದ್ದಲಿಂಗ ಮಹಾಸ್ವಾಮಿಗಳ ಐದನೇ ಪುಣ್ಯಸ್ಮರಣೆ, ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ, ಶ್ರೀಗಳ ಶೈಕ್ಷಣಿಕ ಸೇವೆ ಸ್ಮರಣೀಯ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾವೂರ ನಂತಹ ಗ್ರಾಮೀಣ ಗಣಿಗಾರಿಕೆಯ ಪ್ರದೇಶದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡುವ ಮೂಲಕ ನೂರಾರು ಮಕ್ಕಳ ಬಾಳನ್ನು ಬೆಳಗಿದ ಲಿಂ. ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳ ಶೈಕ್ಷಣಿಕ ಸೇವೆ ಸದಾ ಸ್ಮರಣೀಯ ಎಂದು ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು ರಾವೂರ ಗ್ರಾಮದಲ್ಲಿ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಲಿಂ. ಸಿದ್ದಲಿಂಗ ಮಹಾಸ್ವಾಮಿಗಳ ಐದನೇ ಪುಣ್ಯಸ್ಮರಣೆ ಹಾಗೂ ಎನ್.ಜಿ.ಎನ್ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಅನ್ನ. ಆಶ್ರಯ, ಅಕ್ಷರ ದಾಸೋಹದ ಮೂಲಕ ಶಿಕ್ಷಣದ ಅರಿವಿನ ಜ್ಯೋತಿಯನ್ನು ಹೊತ್ತಿಸಿ ಬಸವ ತತ್ವದಡಿಯಲ್ಲಿ ವೈಚಾರಿಕ ಚಿಂತನೆಯನ್ನು ಮುಡಿಸುತ್ತಾ ಭಕ್ತರ ಆರಾದ್ಯ ದೈವವಾಗಿ ಕಾಣಿಸಿಕೊಂಡರು. ಪೂಜ್ಯರು ಹಾಕಿಕೊಟ್ಟ ತತ್ವ ಆದರ್ಶಗಳು, ಅವರ ಮಾರ್ಗದರ್ಶನ, ಅವರ ವೈಚಾರಿಕ ಚಿಂತನೆಗಳು ನಮ್ಮೆಲ್ಲರಿಗೂ ದಾರಿದೀಪವಾಗಿದೆ ಎಂದು ಹೇಳಿದರು. ಎನ್.ಜಿ.ಎನ್ ಫೌಂಡೇಶನ್ ನ ಮುಖ್ಯಸ್ಥ ಡಾ. ಸಂತೋಷ್ ನಾಗಲಾಪುರ ಹಾಗೂ ಪಾಚಾರ್ಯ ಕೆ.ಐ.ಬಡಿಗೇರ್ ಮಾತನಾಡಿದರು.
ವೇದಿಕೆಯ ಮೇಲೆ ಶ್ರೀಮಠದ ಉಪಾಧ್ಯಕ್ಷ ಚೆನ್ನಣ್ಣ ಬಾಳಿ, ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ, ಸಹಕಾರ್ಯದರ್ಶಿ ಈಶ್ವರ ಬಾಳಿ, ಸದಸ್ಯರಾದ ಶಿವಲಿಂಗಪ್ಪ ವಾಡೇದ್, ಅಣ್ಣಾರಾವ ಬಾಳಿ, ಸಿದ್ದಲಿಂಗ ಜ್ಯೋತಿ ಇದ್ದರು.
ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 500 ಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆದುಕೊಂಡರು. 25 ಜನ ನೇತ್ರ ಚಿಕಿತ್ಸೆಗೆ ಆಯ್ಕೆ ಆದರು ಅದರಲ್ಲಿ 19 ಜನರಲ್ಲಿ ಬಸವೇಶ್ವರ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಯಿತು.
ರಕ್ತದಾನ ಶಿಬಿರದಲ್ಲಿ 114 ಜನ ರಕ್ತದಾನ ಮಾಡಿದರು. ಮಠದ ಪೀಠಾಧಿಪತಿಗಳಾದ ಸಿದ್ದಲಿಂಗ ಸ್ವಾಮಿಗಳು ಮೊದಲು ತಾವೇ ರಕ್ತದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾದರು. ರಾವೂರ, ಗಾಂಧೀನಗರ, ಮಾಲಗತ್ತಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡರು.
ಗ್ರಾಮದ ಪ್ರಮುಖರಾದ ಗುರುನಾಥ ಗುದಗಲ್, ತಿಪ್ಪಣ್ಣ ವಗ್ಗರ್, ಮೋಹನ ಸೂರೇ, ಚೆನ್ನಪ್ಪ ಆಳ್ಳೊಳ್ಳಿ, ಸಿದ್ದಪ್ಪ ತೋಟದ, ಭೀಮರಾವ ಪಾಟೀಲ್, ಗುರುರಾಜ ವೈಷ್ಣವ್, ಈರಣ್ಣ ಕಲ್ಯಾಣಿ, ಮಹೇಶ ಬಾಳಿ, ಅಂಬರೀಷ್ ಸಾಂಗ್ಲಿಯಾನ ಸೇರಿದಂತೆ ಹಲವಾರು ಉಪಸ್ಥಿತರಿದ್ದರು. ಬೆಳಿಗ್ಗೆ ಕತೃ ಗದ್ದುಗೆಗೆ ವಿಶೇಷ ಅಲಂಕಾರ ಮತ್ತು ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮವನ್ನು ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ ವಂದಿಸಿದರು.