ರಾವೂರಿನಲ್ಲಿ ಬಸವೇಶ್ವರ ಮೂರ್ತಿ ಅನಾವರಣ, ಬಸವಮೂರ್ತಿ ಜೊತೆಗೆ ತತ್ವವೂ ಎಲ್ಲೆಡೆ ಪಸರಿಸಲಿ: ಬಸವರಾಜ ಪಾಟೀಲ್ ಸೇಡಂ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ವಿಶ್ವಗುರು ಬಸವೇಶ್ವರರ ತತ್ವ ಸಿದ್ಧಾಂತಗಳನ್ನು ಎಲ್ಲೆಡೆ ಪಸರಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕಿದೆ ಎಂದು ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಹೇಳಿದರು.
ತಾಲೂಕಿನ ರಾವೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶ್ವಗುರು ಬಸವೇಶ್ವರರ 892 ನೇ ಜಯಂತ್ಯೋತ್ಸವ ಹಾಗೂ ಬಸವೇಶ್ವರ ಮೂರ್ತಿ ಅನಾವರಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾವೂರ ಗ್ರಾಮದಲ್ಲಿ ಮೂರ್ತಿ ಅನಾವರಣ ಮಾಡಿದ್ದು ಖುಷಿಯ ಸಂಗತಿ. ಆದರ ಜೊತೆಗೆ ಮೂರ್ತಿ ಅನಾವರಣ ಸಮಿತಿಯವರು ನಿತ್ಯವೂ ಈ ಮೂರ್ತಿಯ ಪರಿಸರವನ್ನು ಸ್ವಚ್ಛವಾಗಿಟ್ಟು ಪೂಜೆ ಮಾಡಬೇಕು. ಮಕ್ಕಳಿಗಾಗಿ ವಚನ ಸ್ಪರ್ಧೆಗಳನ್ನು ಹಮ್ಮಿಕೊಳ್ಳಬೇಕು. ವಿಶೇಷ ಉಪನ್ಯಾಸಗಳ ಮೂಲಕ ಶರಣರ ತತ್ವ ಸಿದ್ಧಾಂತಗಳನ್ನು ಜೀವಂತವಾಗಿಡುವ ಕೆಲಸವಾಗಬೇಕು ಎಂದು ಕಿವಿಮಾತು ಹೇಳಿದರು.
ನೇತೃತ್ವ ವಹಿಸಿದ್ದ ಪೂಜ್ಯ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ನಮ್ಮೆಲ್ಲರಿಗೂ ಕಾಯಕವೇ ಕೈಲಾಸವಾಗಬೇಕು. ಯುವಕರು ಪ್ರತಿಯೊಬ್ಬರೂ ಕಾಯಕ ಮಾಡಬೇಕು, ದಾಸೋಹ ಮನೋಭಾವ ರೂಢಿಸಿಕೊಳ್ಳಬೇಕು, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಬಿ. ಜಿ. ಪಾಟೀಲ್, ಮಾಜಿ ಜಿ.ಪಂ ಸದಸ್ಯ ಶಿವಾನಂದ ಪಾಟೀಲ್. ಮುಖಂಡರಾದ ನಾಗರೆಡ್ಡಿ ಪಾಟೀಲ್ ಕರದಾಳ, ಶ್ರೀನಿವಾಸ ಸಗರ ಮಾತನಾಡಿದರು. ತೊಗರಿ ಮಂಡಳಿ ಮಾಜಿ ಅಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ಡಿವೈಎಸ್ಪಿ ಶಂಕರಗೌಡ ಪಾಟೀಲ್ ವೇದಿಕೆ ಮೇಲಿದ್ದರು.
ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದಿಂದ ಬಸವೇಶ್ವರ ವೃತ್ತದ ವರೆಗೆ ಅದ್ದೂರಿ ಮೆರವಣಿಗೆ ನಡೆಯಿತು. ವಾಡಿ ಪಿ ಎಸ್ ಐ ತಿರುಮಲೇಶ್ ಅವರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.
ಪ್ರಮುಖರಾದ ಡಾ. ಗುಂಡಣ್ಣ ಬಾಳಿ, ಶಿವಲಿಂಗಪ್ಪ ವಾಡೆದ್, ಅಣ್ಣಾರಾವ ಬಾಳಿ, ಗುರುನಾಥ ಗುದಗಲ್, ತಿಪ್ಪಣ್ಣ ವಗ್ಗರ್, ಸಾಹೇಬಗೌಡ ತುಮಕೂರ, ಈಶ್ವರ ಬಾಳಿ, ಬಸವರಾಜ ಮಾಕಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಿದ್ದಲಿಂಗ ಬಾಳಿ ನಿರೂಪಿಸಿದರು, ಶರಣು ಜ್ಯೋತಿ ವಂದಿಸಿದರು.