ಸಚಿವ ಪ್ರಿಯಾಂಕ್ ಖರ್ಗೆ ಅಭಿವೃದ್ಧಿ, ಬಿಜೆಪಿ ನಾಯಕರಿಗೆ ಹೊಟ್ಟೆಕಿಚ್ಚು: ಸಿದ್ದುಗೌಡ ಅಫಜಲಪೂರಕರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕ್ಷೇತ್ರದ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಾವಿರ ಕೋಟಿಗೂ ಹೆಚ್ಚು ಅನುದಾನ ತಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಬಿಜೆಪಿ ನಾಯಕರಿಗೆ ಸಹಿಸಿಕೊಳ್ಳಲು ಆಗದೆ ಹೊಟ್ಟೆಕಿಚ್ಚಿನಿಂದ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದುಗೌಡ ಅಫಜಲಪೂರಕರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದ 224 ಶಾಸಕರಲ್ಲಿ ಅತೀ ಹೆಚ್ಚು ಅನುದಾನ ತಂದಂಥ ಪ್ರಿಯಾಂಕ್ ಖರ್ಗೆ ಅವರ ಅಭಿವೃದ್ಧಿ ನೋಡಲು ಆಗದೇ ಬಿಜೆಪಿ ನಾಯಕರು ಹತಾಶೆಗೊಂಡು ಏನೇನೋ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಸಚಿವರ ಬಗ್ಗೆ ಮಾತನಾಡುವ ಬಿಜೆಪಿ ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ತಿಳಿಸಿದ್ದಾರೆ.
ಪ್ರಿಯಾಂಕ್ ಖರ್ಗೆಯವರು ಕಾಂಗ್ರೇಸ್ ಕಾರ್ಯಕರ್ತರಿಗೆ ಜೇಬು ತುಂಬುತ್ತಿದ್ದಾರೆ ಎಂಬ ಬಿಜೆಪಿ ಮುಖಂಡರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಸರ್ಕಾರದ ಯಾವುದೇ ಅನುದಾನವನ್ನು ನಿಯಮಾನುಸಾರವಾಗಿ ಕಾರ್ಯರೂಪಕ್ಕೆ ಬರುವಂತಹ ಒಂದು ಪ್ರಕ್ರಿಯೇ, ಅದನ್ನು ಯಾರು ಬದಲಾವಣೆ ಮಾಡುವಂತಿಲ್ಲಾ ಎಂಬ ಸಾಮಾನ್ಯ ಅರಿವು ಬಿಜೆಪಿ ನಾಯಕರಿಗೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆಯವರು ಯಾವತ್ತೂ ಅಭಿವೃದ್ಧಿಯ ವಿಷಯದಲ್ಲಿ ನಾಟಕ ಮಾಡುವುದಿಲ್ಲ, ಯಾವುದು ಹೇಳುತ್ತಾರೆ ಅದು ಮಾಡುತ್ತಾರೆ. ನುಡಿದಂತ ನಡೆಯುವ ಏಕೈಕ ನಾಯಕರು. ಸಾವಿರ ಕೋಟಿ ಅನುದಾನ ತಂದಿರುವುದು ನಾಟಕವಲ್ಲ, ಸಾವಿರಾರು ಜನರ ಸಮ್ಮುಖದಲ್ಲಿ ಡಿಸಿಎಂ ಡಿ.ಕೆ.ಶಿವುಕುಮಾರ್ ಹಾಗೂ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಂದ ಉದ್ಘಾಟನೆ ಮಾಡಿಸಿದ್ದಾರೆ. ಇಷ್ಟು ದೊಡ್ಡ ಮೊತ್ತದ ಅನುದಾನವನ್ನು ತಂದಿರುವುದು ನೋಡಿ ಬಿಜೆಪಿ ಮುಖಂಡರು ದಿಗ್ಭ್ರಮೆಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ತೊಗರಿ ಬೆಳೆ ನೇಟೆರೋಗಕ್ಕೆ ತುತ್ತಾಗಿ ರೈತರು ಕಂಗಾಲಾದಾಗ ಒಬ್ಬ ಬಿಜೆಪಿ ನಾಯಕರು ಧ್ವನಿ ಎತ್ತಲಿಲ್ಲ, ಆಗ ಬಿಜೆಪಿಯ ಸರ್ಕಾರ ಇತ್ತು ಇದನ್ನು ಅರಿತು ಪ್ರಿಯಾಂಕ್ ಖರ್ಗೆ ರೈತಪರ ಹೋರಾಟಕ್ಕಿಳಿದು ಸರ್ಕಾರದ ವಿರುದ್ಧ ಹೋರಾಡಿ ರೈತರಿಗೆ ಬೆಳೆ ಪರಿಹಾರ ಕೊಡಿಸಿದ್ದಾರೆ. ಚಿತ್ತಾಪುರಿನಲ್ಲಿ ಹುಟ್ಟಿ ಬೆಳೆದಂತಹ ಬಿಜೆಪಿ ನಾಯಕರು ಅಲ್ಲಿಯ ಶಾಲಾ-ಕಾಲೇಜುಗಳು ಯಾವ ರೀತಿ ಅಭಿವೃದ್ಧಿ ಹೊಂದಿವೆ ಎಂದು ನೋಡಿಯಾದರೂ ತಿಳಿದುಕೊಂಡು ಹೇಳಿಕೆ ನೀಡಬೇಕು, ಅಭಿವೃದ್ಧಿಯ ಹೆಸರಿನಲ್ಲಿ ಇಂತಹ ಹೇಳಿಕೆಗಳು ಕೊಡುವುದು ನಾಯಕರು ಎನಿಸಿಕೊಂಡವರಿಗೆ ಶೋಭೆ ತರುವಂಥದ್ದಲ್ಲ ಎಂದು ಕಿವಿಮಾತು ಹೇಳಿದ್ದಾರೆ.

