ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆಯ 36 ನೇ ವಾರ್ಷಿಕೋತ್ಸವ | ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಿ: ರಾವೂರ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಅದ್ಭುತ ಮಕ್ಕಳಾಗಬೇಕಾದರೆ ತಂದೆತಾಯಿಗಳು ಸ್ವಲ್ಪ ತ್ಯಾಗ ಮಾಡಬೇಕು. ದೇಶದ ಭವ್ಯ ಭವಿಷ್ಯ ಮಕ್ಕಳಲ್ಲಿ ಇದೆ. ಹೀಗಾಗಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ರಾವೂರ ಸಿದ್ದಲಿಂಗೇಶ್ವರ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶ್ರೀಮತಿ ಅಣಿಮ್ಮ ಗೊಬ್ಬುರ ಪ್ರೌಢ ಶಾಲೆಯ 2025-26ನೇ ಸಾಲಿನ 7ನೇ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಹಾಗೂ 36ನೇ ಶಾಲಾ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತಾಯಿಯ ಮಾತಲ್ಲಿ ದೊಡ್ಡ ಶಕ್ತಿ ಮತ್ತು ಸ್ಪೂರ್ತಿ ಇದೆ, ಅಸಾಧ್ಯ ಎನ್ನುವುದು ಈ ಭೂಮಿಯಲ್ಲಿಲ್ಲ ಎಷ್ಟೇ ಕಷ್ಟ ಎದುರಾದರೂ ಸಾಧಿಸುವ ಛಲ ಬಿಡಬಾರದು ಮೊದಲು ಅವಮಾನ, ಅನುಮಾನ ನಂತರ ಸನ್ಮಾನ ಆಗಲಿದೆ ಎಂದು ಆಶೀರ್ವಚನ ನೀಡಿದರು.
ನನ್ನಿಂದ ಸಾಧ್ಯವಿಲ್ಲ ಅನ್ನೋದು ತೆಗೆದು ಹಾಕಬೇಕು, ಜನ ಎನೆಂದು ಅನ್ನುಕೊಳ್ಳುತ್ತಾರೆ ಎನ್ನುವುದು ಬಿಡಬೇಕು ಹಾಗೂ ನನಗೆ ಮೂಡು ಇಲ್ಲ ಅನ್ನುವುದನ್ನು ಈ ಮೂರನ್ನು ಕಸದ ಬುಟ್ಟಿಗೆ ಹಾಕಬೇಕು ಎಂದು ಕಿವಿಮಾತು ಹೇಳಿದರು.
ಇರಾನ್ ಇಸ್ರೆಲ್ ದೇಶಗಳಲ್ಲಿ ಯುದ್ಧ ನಡೆದು ಅಲ್ಲಿ ಭಯಾನಕ ಆತಂಕದ ಪರಿಸ್ಥಿತಿ ಇದೆ ಆದರೆ ವಿಶ್ವದಲ್ಲಿಯೇ ಅತಿ ಸುರಕ್ಷಿತ ಇರುವಂತಹ ದೇಶ ಭಾರತ, ಬಣ್ಣದೋಕುಳಿ ಆಡಿ ಸಂಭ್ರಮಿಸಿದ್ದ ನಮ್ಮ ದೇಶದ ಮಕ್ಕಳು ಎಂದರು.
ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಇಲ್ಲದಿದ್ದರೆ ದೊಡ್ಡವರಾದ ಮೇಲೆ ಮಕ್ಕಳಿಂದಲೇ ಸಮಸ್ಯೆ ತಪ್ಪಿದ್ದಲ್ಲ. ಮಕ್ಕಳನ್ನು ಜನ್ಮ ನೀಡೋದು ಎಷ್ಟು ಮುಖ್ಯವೋ ಅಷ್ಟೇ ಅವರ ಲಾಲನೆ, ಪಾಲನೆ ಮತ್ತು ಪೋಷಣೆ ಮಾಡುವುದು ಅಷ್ಟೇ ಪ್ರಮುಖ ಎಂದು ಒತ್ತಿ ಹೇಳಿದರು. ಶಿಕ್ಷಣ ಕ್ಷೇತ್ರದಲ್ಲಿ ಎಷ್ಟೇ ಪೈಪೋಟಿ ಸ್ಪರ್ಧೆ ಇದ್ದರೂ ಸಹ ಬಸವೇಶ್ವರ ವಿದ್ಯಾ ಸಂಸ್ಥೆ 36 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಹೆಮ್ಮೆ ಪಡುವಂತಹ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಶಿಕ್ಷಣ ಸಂಸ್ಥೆ ಬೆಳವಣಿಗೆಗೆ ಶ್ರಮಿಸಿದ ದಿ.ಚಂದ್ರಶೇಖರ ದಿಗ್ಗಾಂವಕರ್ ಅವರ ಸೇವೆಯನ್ನು ಸ್ಮರಿಸಿದರು.
ಮುಖ್ಯ ಅತಿಥಿಯಾಗಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿದರು. ರಾಘಾಪೂರ ಶ್ರೀ ತಿಪ್ಪಯ್ಯ ಮುತ್ಯಾ ಸಾನಿಧ್ಯ ವಹಿಸಿದ್ದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಚಂದ್ರಶೇಖರ ಅವಂಟಿ, ಶಿಕ್ಷಣ ಸಂಸ್ಥೆಯ ಸದಸ್ಯ ಡಾ.ಚಂದ್ರಶೇಖರ ಕಾಂತಾ, ಪ್ರಾಥಮಿಕ ಶಾಲೆಯ ಮುಖ್ಯಗುರು ದೇವಿಂದ್ರಪ್ಪ ಇಮಡಾಪೂರ, ಪ್ರೌಢಶಾಲೆಯ ಮುಖ್ಯಗುರು ಕಸ್ತೂರಿ ಪಾಟೀಲ, ಶಿಕ್ಷಕರಾದ ಶರಣಬಸಪ್ಪ ಬೊಮ್ನನಳ್ಳಿ, ಮನೋಹರ ಹಡಪದ, ಶೈಲಜಾ ಹರಸೂರ, ಲಲಿತಮ್ಮ ರೇಷ್ಮಿ, ಗೀತಾ ಸೊಲಗಿ, ಚಂದ್ರಶೇಖರ ನಾಲವಾರ, ಬಸವರಾಜ ಬೊಮ್ಮನಳ್ಳಿ, ನಾಗರಾಜ ಕುಲಕರ್ಣಿ, ಅಂಬರೀಷ್ ಬಂಗಾರಶೆಟ್ಟಿ, ಸಲೀಂ, ಶಂಕರ ರಾಠೋಡ, ಕಾಶಿಬಾಯಿ, ಸಾಜೀದಾ, ಕರಬಸಮ್ಮ ಸೇರಿದಂತೆ ಇತರರು ಇದ್ದರು. ಶಿಕ್ಷಕ ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

