ತೋನಸನಹಳ್ಳಿ ಗ್ರಾಮದಲ್ಲಿ ಏ. 6 ರಿಂದ 9 ವರೆಗೆ ಜಾತ್ರಾ ಮಹೋತ್ಸವ: ಮಲ್ಲಣಪ್ಪ ಮಹಾಸ್ವಾಮಿ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ತಾಲೂಕಿನ ತೋನಸನಹಳ್ಳಿ ಗ್ರಾಮದ ಹಿಂದೂ-ಮುಸ್ಲಿಂಮರ ಭಾವೈಕ್ಯತೆಯ ಕೇಂದ್ರವಾಗಿರುವ ಸದ್ಗುರು ಮಲ್ಲಣಪ್ಪ ಮಹಾರಾಜರು, ಅಲ್ಲಮಪ್ರಭು ಹಾಗೂ ಸುಲ್ತಾನ ಅಹ್ಮದ ಶಾಹವಲಿ ಯವರ ಜಾತ್ರಾ ಮಹೋತ್ಸವ ಏಪ್ರಿಲ್ 6 ರಿಂದ 9ರ ವರೆಗೆ ವೈಭವದಿಂದ ಜರುಗಲಿದೆ ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅಲ್ಲಮಪ್ರಭು ಸಂಸ್ಥಾನ ಮಠದ ಪೂಜ್ಯರಾದ ಧರ್ಮರತ್ನ ಡಾ. ಮಲ್ಲಣಪ್ಪ ಮಹಾಸ್ವಾಮಿಗಳು ಹೇಳಿದರು.
ತೋನಸನಹಳ್ಳಿ ಅಲ್ಲಮಪ್ರಭು ಸಂಸ್ಥಾನದ ಮಠದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 6 ರಂದು ರಾತ್ರಿ 10.30 ಗಂಟೆಗೆ ಗಂಧೋತ್ಸವ ಕಾರ್ಯಕ್ರಮ ಜರುಗುವದು. ಏ. 7 ರಂದು ಸಾಯಂಕಾಲ 6.30 ಗಂಟೆಗೆ ಭವ್ಯವಾದ ರಥೋತ್ಸವ ಸಾಗುವುದು, 7.30 ಗಂಟೆಗೆ ಸರ್ವ ಧರ್ಮಗಳ ಧರ್ಮ ಸಭೆ ನಡೆಯುವದು ಎಂದು ಮಾಹಿತಿ ನೀಡಿದರು.
ಧರ್ಮ ಸಭೆಯ ದಿವ್ಯಾ ಸಾನಿಧ್ಯವನ್ನು ಸೊನ್ನದ ವಿರಕ್ತ ಮಠದ ಡಾ. ಶಿವಾನಂದ ಮಹಾಸ್ವಾಮಿಗಳು, ಚಿತ್ತಾಪುರ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರರ ಜೊತೆ ಅನೇಕ ಮಠಾಧೀಶರು ಉಪಸ್ಥಿತರಿರುವರು. ಸಭೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಮತ್ತು ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ರವರು ಉದ್ಘಾಟಿಸುವರು.
ಕೆಕೆಆರ್’ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ. ಅಜಯಸಿಂಗ್ ಮತ್ತು ರಾಷ್ಟ್ರೀಯ ಕೋಲಿ ಮಹಾ ಸಂಘದ ಅಧ್ಯಕ್ಷ ರಮೇಶ ದಾದಾ ಪಾಟೀಲ ಕ್ಯಾಲೆಂಡರ್ ಬಿಡುಗಡೆ ಮಾಡುವರು. ಧರ್ಮ ಸಭೆಯ ಅಧ್ಯಕ್ಷತೆಯನ್ನು ಎಂಎಲ್ಸಿ ತಿಪ್ಪಣಪ್ಪ ಕಮಕನೂರ ವಹಿಸಿಕೊಳ್ಳುವರು. ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಿಜಿ ಪಾಟೀಲ, ತೆಲಂಗಾಣ ಶಾಸಕ ವಾಕಟಿ ಶ್ರೀಹರಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಉಪಸ್ಥಿತರಿರುವರು ಎಂದರು.
ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಜನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. ಏ. 8ರ ದಂದು ಕುಸ್ತಿಗಳು ಜರುಗುವವು, ಏ. 9ರ ರಂದು ದೇವರನ್ನು ಮಹಾ ಮನೆಗೆ ಬರಮಾಡಿಕೊಳ್ಳುವ ಕಾರ್ಯಕ್ರಮ ವಿರುತ್ತದೆ ಎಂದು ವಿವರಿಸಿದರು. ಇದೇ ವೇಳೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ನಿಂಗಣ್ಣಗೌಡ ಪೋಲಿಸ ಪಾಟೀಲ, ಮಹಾದೇವ ಬಂದಳ್ಳಿ, ಬಸವರಾಜ ಗೋಳೆದ್, ಮಹಾಲಿಂಗ ಪೂಜಾರಿ, ಬಸವರಾಜ ಮದ್ರಕಿ, ಮಂಜುನಾಥ ಇಟಗಾ, ಮಲ್ಲಿಕಾರ್ಜುನ ನಾಟೀಕಾರ, ಬಸವರಾಜ ಬುಟ್ನಾಳ ಉಪಸ್ಥಿತರಿದ್ದರು.