ಡೋಣಗಾಂವ ಗ್ರಾಮದಲ್ಲಿ ಉದ್ದು ಮಿನಿಕಿಟ್ ಬಿತ್ತನೆ ಬೀಜಗಳ ವಿತರಣೆ | ಹವಾಮಾನ ಅನುಗುಣವಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಿ: ಗೊಪಸೇನ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರೈತರು ಹವಾಮಾನ ಅನುಗುಣವಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೊಪಸೇನ್ ಕಿವಿಮಾತು ಹೇಳಿದರು.
ತಾಲೂಕಿನ ಡೋಣಗಾಂವ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ 2026-27 ನೇ ಸಾಲಿನ ದ್ವಿದಳ ದಾನ್ಯಗಳ ಆತ್ಮ ನಿರ್ಭಾರ ಪಲ್ಸ ಅಭಿಯಾನ ಯೋಜನೆ ಅಡಿಯಲ್ಲಿ ಉಚಿತವಾಗಿ ಉದ್ದು ಮಿನಿಕಿಟ್ ಬಿತ್ತನೆ ಬೀಜಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿ ಇಲಾಖೆಯ ಹಾಗೂ ರೈತ ಸಂಪರ್ಕ ಕೇಂದ್ರಗಳಿಂದ ಸೂಕ್ತ ಮಾರ್ಗದರ್ಶನ ಪಡೆಯುವ ಮೂಲಕ ರೈತರು ಕೃಷಿ ಚಟುವಟಿಕೆಗಳು ಕೈಗೊಳ್ಳಬೇಕು ಎಂದು ಹೇಳಿದರು.
ಕೃಷಿ ಇಲಾಖೆಯ ವತಿಯಿಂದ ರೈತರಿಗೋಸ್ಕರ ಸರ್ಕಾರ ಅನೇಕ ಸೌಲಭ್ಯಗಳು ಹಾಗೂ ಯೋಜನೆಗಳು ಜಾರಿಗೆ ತಂದಿದೆ, ಹೀಗಾಗಿ ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರೆ ಮಾತನಾಡಿ, ಈ ಯೋಜನೆಯು ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸುವುದು ಹಾಗೂ ರಾಜ್ಯವನ್ನು ಈ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ನಮ್ಮ ತಾಲೂಕಿನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೋಳಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ದೇವಿಂದ್ರ ಅರಣಕಲ್, ಕೃಷಿಕ ಸಮಾಜದ ನಿರ್ದೇಶಕರಾದ ನಿಂಗಣ್ಣ ಹೆಗಲೇರಿ, ಶರಣಗೌಡ ಪಾಟೀಲ, ಶಿವಶರಣರೆಡ್ಡಿ ಸಿದ್ದಾರೆಡ್ಡಿ ಭಂಕಲಗಿ, ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ ಹೊನ್ನಪುರ, ಶರಣಪ್ಪ ಹೊನ್ನಪುರ, ಅಶೋಕ ಬಾನರ, ಶಿವಶರಣ ಮೆಂಗಾ, ಕಾಶಪ್ಪ ಹಲಕರ್ಟಿ, ಶರಣು ಡೋಣಗಾಂವ ಯೋಜನೆಯ ತಾಲೂಕು ನೋಡಲ್ ಅಧಿಕಾರಿ ಜುಲೈಕರ್ ಅಹಮದ್, ಕೃಷಿ ಅಧಿಕಾರಿಗಳಾದ ಅಬ್ದುಲ್ ಕರಿಂ, ರವಿಂದ್ರಕುಮಾರ, ಸಚಿನಕುಮಾರ ಸೇರಿದಂತೆ ಡೋಣಗಾಂವ ಗ್ರಾಮದ ರೈತರು ಉಪಸ್ಥಿತರಿದ್ದರು.

