ವಾಡಿ ಬಿಜೆಪಿ ಕಚೇರಿಯಲ್ಲಿ ನಾರಾಯಣ ಗುರು ಜಯಂತಿ ಆಚರಣೆ | ಸಂತರ ಸಂದೇಶಗಳನ್ನು ಮೈಗೂಡಿಸಿಕೊಳ್ಳುವುದೇ ಸನ್ಮಾರ್ಗಕ್ಕೆ ದಾರಿ: ವೀರಣ್ಣ ಯಾರಿ
ನಾಗಾವಿ ಎಕ್ಸಪ್ರೆಸ್
ವಾಡಿ: ಶ್ರೀ ನಾರಾಯಣ ಗುರುಗಳನ್ನು ಪೂಜಿಸುವುದರ ಜೊತೆಗೆ, ಅವರ ಮಹೋನ್ನತ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮೈಗೂಡಿಸಿಕೊಂಡಾಗ ಮಾತ್ರ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ, ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ, ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಶ್ರೀ ನಾರಾಯಣ ಗುರುಗಳು ಸಮಾಜದಲ್ಲಿದ್ದ ದುಷ್ಟ ಪದ್ಧತಿಗಳಿಂದ ಜನರನ್ನು ಮುಕ್ತಗೊಳಿಸಿ, ಅವರ ಉದ್ಧಾರಕ್ಕಾಗಿ ಜೀವನದ ಕೊನೆಯವರೆಗೂ ನಿಸ್ವಾರ್ಥವಾಗಿ ಶ್ರಮಿಸಿದ್ದಾರೆ. ಅವರು ತಂದ ಅನೇಕ ಸಾಮಾಜಿಕ ಸುಧಾರಣೆಗಳು ನಮ್ಮ ಧರ್ಮ ಹಾಗೂ ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಸಾಧ್ಯವಾದಷ್ಟು ಗುರುಗಳು ತೋರಿಸಿಕೊಟ್ಟ ಶಾಂತಿ ಪಥದಲ್ಲಿ ನಡೆದು ನಾವೆಲ್ಲರೂ ಕೃತಾರ್ಥರಾಗಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಇಂತಹ ಮಹಾತ್ಮರ ಪುಣ್ಯ ಕಾರ್ಯಗಳಿಂದಾಗಿಯೇ ನಮ್ಮ ಹಿಂದೂ ಸಮಾಜ ಇಂದಿಗೂ ಬಲಿಷ್ಠವಾಗಿ ಉಳಿದುಕೊಂಡಿದೆ. ಆದ್ದರಿಂದ ನಾವೆಲ್ಲರೂ ಗುರುಗಳ ತತ್ವ, ಸಿದ್ಧಾಂತ ಮತ್ತು ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಗುರುಗಳು ಕೇವಲ ಒಂದು ನಿರ್ದಿಷ್ಟ ಜನಾಂಗಕ್ಕೆ ಸೀಮಿತವಾದವರಲ್ಲ, ಅವರು ಇಡೀ ಮಾನವ ಜನಾಂಗದ ಗುರು, ವಿಶ್ವ ಮಾನವ ಗುರು ಹಾಗೂ ಸಾಮಾಜಿಕ ಕ್ರಾಂತಿಗೆ ಜೀವ ತುಂಬಿದ ಹರಿಕಾರು ಎಂದು ಬಣ್ಣಿಸಿದರು.
ಈಡಿಗ ಸಮಾಜದ ಯುವ ಮುಖಂಡ ಸಂತೋಷ ಗುತ್ತೇದಾರ ಮಾತನಾಡಿ, ಬುದ್ಧ, ಬಸವಣ್ಣರಂತೆ ಸಮಾನತೆಯ ವಿಶ್ವ ಮಾನವತಾ ಸಂದೇಶದೊಂದಿಗೆ ಜನರೊಳಗೆ ಸಂಸ್ಕಾರ ಜಾಗೃತಗೊಳಿಸಿದ ನಾರಾಯಣ ಗುರು ದೇಗುಲ, ಶಿಕ್ಷಣ ಸಂಸ್ಥೆಗಳ ಸ್ಥಾಪನೆಯೊಂದಿಗೆ ಸ್ವಾವಲಂಬಿ ಉದ್ಯೋಗ ಸಷ್ಟಿಗೆ ಒತ್ತು ನೀಡಿ ಆರ್ಥಿಕತೆಯ ಬೆಳವಣಿಗೆಯ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದರು ಎಂದರು.
ಈ ಸಂಧರ್ಭದಲ್ಲಿ ಯುವ ಮುಖಂಡ ವಿಠಲ್ ನಾಯಕ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್ ಸಿ ಮೋರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್ ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ, ಅರ್ಜುನ ಕಾಳೇಕರ, ಹರಿ ಗಲಾಂಡೆ, ಅಂಬದಾಸ ಜಾಧವ, ಯಂಕಮ್ಮ ಗೌಡಗಾಂವ, ಈಡಿಗ ಸಮಾಜದ ಮುಖಂಡರಾದ ಸೂರ್ಯಕಾಂತ ಗಢಕರ್, ಮಲ್ಲಿಕಾರ್ಜುನ ಸಾತಖೇಡ, ಸಂತೋಷ ಗುತ್ತೇದಾರ, ದೀಪಕ ಸಾತಖೇಡ, ಬಾಬು ಗುತ್ತೇದಾರ, ಸುರೇಶ ಗುತ್ತೇದಾರ ಸೇರಿದಂತೆ ಇತರರು ಇದ್ದರು.

