ಬರ ಘೋಷಣೆ ವಿಫಲವಾದ ಸರ್ಕಾರ, ಜಿಲ್ಲಾಡಳಿತ ವಿರುದ್ಧ ಸರ್ವ ಸಂಘಟನೆಗಳ ಹೋರಾಟ ಸಮಿತಿಯಿಂದ ಸೆ.7ಕ್ಕೆ ಯಾದಗಿರಿ ಬಂದ್ಗೆ ಕರೆ: ಮಲ್ಲಿಕಾರ್ಜುನ ರಾಮಸಮುದ್ರ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಜಿಲ್ಲೆಯ 5 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡುವಲ್ಲಿ ವಿಫಲವಾದ ಜಿಲ್ಲಾಡಳಿತ ಹಾಗೂ ಸರ್ಕಾರದ ಧೋರಣೆಯನ್ನು ಖಂಡಿಸಿ ಸೆ.7 ಕ್ಕೆ ಜಿಲ್ಲೆ ಬಂದ್ ಮಾಡಲು ನಿರ್ಣಯಿಸಲಾಗಿದೆ ಎಂದು ಸರ್ವ ಸಂಘಟನೆಗಳ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ರಾಮಸಮುದ್ರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಪೀಡಿತ ಜಿಲ್ಲೆಗಳೆಂದು ಘೋಷಣೆ ಮಾಡಿದ ಸರ್ಕಾರ ಅತ್ಯಂತ ಬರ ಪೀಡಿತ ಯಾದಗಿರಿ ಜಿಲ್ಲೆಯನ್ನು ಪೂರ್ಣ ಪ್ರಮಾಣ ಘೋಷಣೆ ಮಾಡದೇ ಶಹಾಪೂರ ತಾಲೂಕು ಮಾತ್ರ ಘೋಷಣೆ ಮಾಡಿದ್ದು, ಇನ್ನೂಳಿದ 5 ತಾಲೂಕುಗಳಾದ ಯಾದಗಿರಿ, ಗುರುಮಠಕಲ್, ವಡಗೇರಾ, ಸುರಪುರ, ಹುಣಸಗಿ ಈ ತಾಲೂಕುಗಳನ್ನು ಘೋಷಣೆ ಮಾಡದಿರುವುದು ಜಿಲ್ಲೆಗೆ ಮಾಡಿದ ಮೋಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇವಲ ಶಹಾಪೂರ ತಾಲೂಕು ಮಾತ್ರ ಘೋಷಣೆ ಮಾಡಿ, ಉಳಿದ ತಾಲೂಕುಗಳು ಘೋಷಣೆ ಮಾಡದಿರುವುದು ರೈತರ ಜೀವದ ಜೊತೆ ಸರ್ಕಾರ ಮತ್ತು ಜಿಲ್ಲಾಡಳಿತ ಹಾಗೂ ಈ ಭಾಗದ ಶಾಸಕರುಗಳು ಈ ಕ್ಷೇತ್ರಗಳ ಬಗ್ಗೆ ಧ್ವನಿ ಎತ್ತದೇ ಹಾಗೂ ಜಿಲ್ಲಾಡಳಿತ, ಅಧಿಕಾರಿಗಳು ಬರಗಾಲದ ವಾಸ್ತವದ ಸ್ಥಿತಿಯನ್ನು ಮನವರಿಕೆ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆಪಾದಿಸಿದರು.
ವಾಲ್ಮೀಕಿ ನಾಯಕ ಸಮಾಜದ ಉತ್ತರ ಕರ್ನಾಟಕ ಅಧ್ಯಕ್ಷ ಮರೆಪ್ಪ ನಾಯಕ ಮೊಗದಂಪುರ ಮಾತನಾಡಿ, ಈಗಾಗಲೇ ಕಲ್ಯಾಣ ಕರ್ನಾಟಕದ ರೈತಾಪಿ ವರ್ಗದ ಜನರಿಗೆ ಮಳೆ, ಬೆಳೆ ಇಲ್ಲದೇ, ಅಂತರ್ಜಲ ಭತ್ತಿದ್ದು, ಕುಡಿಯುವ ನೀರಿಗಾಗಿ ಹಾಹಾಕಾರವಾಗಿದ್ದು, ಜನ-ಜಾನುವಾರುಗಳಿಗೆ ತುಂಬಾ ತೊಂದರೆ ಆಗಿದೆ. ಯಾದಗಿರಿ ಜಿಲ್ಲೆ ಬರಗಾಲ ಇರುವುದರಿಂದ ಈ ಭಾಗದ ರೈತ, ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಹೊಟ್ಟೆ ಪಾಡಿಗಾಗಿ ದಿನನಿತ್ಯೆ ಸಾವಿರಾರು ಜನರು ಬೆಂಗಳೂರು ಮತ್ತು ಮುಂಬೈ ಮಹಾನಗರಗಳಿಗೆ ಗುಳೆ ಹಾಗೂ ವಲಸೆ ಹೋಗುತ್ತಿದ್ದಾರೆ ಎಂದು ತಿಳಿಸಿದರು.
ಬರಗಾಲ ವಾಸ್ತವ ಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡುವಲ್ಲಿ ಈ ಭಾಗದ ಶಾಸಕರುಗಳು ಮತ್ತು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಇದನ್ನು ಖಂಡಿಸಿ ಸೆ.7 ರಂದು ಯಾದಗಿರಿ ಜಿಲ್ಲಾ ಕೇಂದ್ರವನ್ನು ಸಂಪೂರ್ಣ ಬಂದ್ ಮಾಡಲು ತೀರ್ಮಾನಿಸಿ, ಸರ್ವ ಸಂಘಟನೆ ಹೋರಾಟ ಸಮಿತಿ ವತಿಯಿಂದ ಬಂದ್ ಗೆ ಕರೆ ಕೊಡಲಾಗಿದೆ ಎಂದು ತಿಳಿಸಿದರು.
ಸಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಮಾತನಾಡಿ, ರೈತರು ಸಂಕಷ್ಟ ಸ್ಥಿತಿಯಲ್ಲಿ ಇರುವಾಗ ನಾವೆಲ್ಲರೂ ಅವರ ಕಣ್ಣೀರಿನ ಜೊತೆಯಲ್ಲಿ ನಿಲ್ಲುವುದು ನಮ್ಮ ಪ್ರಜ್ಞಾವಂತರ ಕರ್ತವ್ಯವಾಗಿದೆ ಈ ಹೋರಾಟಕ್ಕೆ ಸರ್ವರೂ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಯಾದಗಿರಿ ಜಿಲ್ಲಾ ಕೇಂದ್ರದಲ್ಲಿರುವ ವ್ಯಾಪಾರಸ್ಥರು, ಕೃಷಿ ಮಾರುಕಟ್ಟೆ ವರ್ತಕರ ಸಂಘ, ರೈತ ಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ಬಾರ್ ರೆಸ್ಟೊರೆಂಟ್, ಕಿರಾಣಿ, ಹೊಟೇಲ್ ಮಾಲೀಕರ ಸಂಘಗಳು, ಪ್ರಗತಿಪರ ಸಂಘಟನೆಗಳು, ವಿವಿಧ ಸರ್ವ ಸಮಾಜದ ಸಂಘಟನೆಗಳು ಬಂದ್ ಕರೆಗೆ ಬೆಂಬಲ ನೀಡಿ ರೈತರ ಹಿತದೃಷ್ಠಿಯಿಂದ ಜಿಲ್ಲೆಯನ್ನು ಒಂದು ದಿನದ ಮಟ್ಟಿಗೆ ಸಂಪೂರ್ಣ ಬಂದ್ ಮಾಡಲು ಸರ್ವ ಸಂಘಟನೆ ಹೋರಾಟ ಸಮಿತಿ ವತಿಯಿಂದ ವಿನಂತಿಸಿಕೊಂಡರು.
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿಗಳ ಸಂಘದ ಉಪಾದ್ಯಕ್ಷ ದೇವಿಂದ್ರಪ್ಪ, ಕನ್ನಡ ಪರ ಹೋರಾಟಗಾರ ರವಿ.ಕೆ.ಮುದ್ನಾಳ, ಭೀಮಾಶಂಕರ ಆಲ್ದಾಳ, ಶರಣಪ್ಪ ಜಾಕನಹಳ್ಳಿ, ಖಾಸಿಮಸಾಬ್ ಗಡ್ಡೆಸೂಗೂರು, ಬಂಗಾರು ಜೆ.ಬಿ. ರಾಠೋಡ, ವಿಜಯ ಭಾರತ, ಭೀಮು ಪೂಜಾರಿ, ಭೀಮರಾಯ ಭಂಡಾರಿ, ಎಂ.ಆರ್.ಪಿ. ಜಿಲ್ಲಾಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ, ಭೀಮರಾಯ ಯಲ್ಹೇರಿ, ಅಶೋಕ ಐಕೂರ, ಎಸ್.ನಿಜಲಿಂಗಪ್ಪ ಪೂಜಾರಿ, ಸಾಬಣ್ಣ ಹೊರುಂಚಾ, ಹೊನ್ನಪ್ಪ ಮುಷ್ಟೂರು, ಮಲ್ಲಿಕಾಜುನ ಮಂಜುನಾಥ ಬಾಚವಾರ, ಶ್ರೀಮತಿ ಚಂದ್ರಕಲಾ ಗುತ್ತೇದಾರ, ಬಸ್ಸುಗೌಡ ಚಟ್ನಳ್ಳಿ, ಸೈದಪ್ಪ ಕೂಲೂರಕರ್, ರಾಜಶೇಖರ ಎದುರುಮನಿ, ಚಂದಪ್ಪ ನಾಯಕ ರಾಮಸಮುದ್ರ, ಶಂಕರಗೌಡ ಯಲ್ಸತ್ತಿ, ಪೋಲಪ್ಪ ನಾರಾಯಣೋರ್, ದೊಡ್ಡಯ್ಯ ಹಳಿಗೇರಿ, ವಿಕ್ರಮ ಚವ್ಹಾಣ ಸೇರಿದಂತೆ ಅನೇಕ ಮುಖಂಡರು ಇದ್ದರು.
