ಚಿತ್ತಾಪುರ ವಕೀಲರ ಸಂಘದಿಂದ ಸರ್ಕಾರಕ್ಕೆ ಮನವಿ | ಕಾಳಗಿ ಸಿವಿಲ್ ನ್ಯಾಯವ್ಯಾಪ್ತಿ ರದ್ದುಗೊಳಿಸಲು ಒತ್ತಾಯ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಾಳಗಿ ತಾಲೂಕಿನ ಹಿರಿಯ ಸಿವಿಲ್ ವಿಭಾಗದ ಪ್ರಕರಣಗಳ ನ್ಯಾಯವ್ಯಾಪ್ತಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಮರುಪರಿಶೀಲಿಸಿ, ಚಿತ್ತಾಪುರದ ಮೂಲ ಹಿರಿಯ ಸಿವಿಲ್ ನ್ಯಾಯವ್ಯಾಪ್ತಿಯನ್ನು ಪುನಃಸ್ಥಾಪಿಸಬೇಕು ಎಂದು ಆಗ್ರಹಿಸಿ ಚಿತ್ತಾಪುರ ವಕೀಲರ ಸಂಘವು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಮನವಿ ಪತ್ರವನ್ನು ಮಂಗಳವಾರ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಿದರು.
ಕಾಳಗಿ ತಾಲೂಕಿನ ಹಿರಿಯ ಸಿವಿಲ್ ಪ್ರಕರಣಗಳ ನ್ಯಾಯವ್ಯಾಪ್ತಿಯಲ್ಲಿ ಮಾಡಿರುವ ಬದಲಾವಣೆ ಮತ್ತು ಪರಿಷ್ಕರಣೆಯು ಚಿತ್ತಾಪುರದ ಕಕ್ಷಿದಾರರು ಮತ್ತು ವಕೀಲರಿಗೆ ಅಂಗೀಕಾರಾರ್ಹವಾಗಿಲ್ಲ. ಈಗಾಗಲೇ ಈ ಅಧಿಸೂಚನೆಯ ವಿರುದ್ಧ ಸಂಘವು ಆಕ್ಷೇಪಣೆ ಸಲ್ಲಿಸಿದೆ. ದೀರ್ಘಕಾಲದಿಂದ ಚಿತ್ತಾಪುರ ಹಿರಿಯ ಸಿವಿಲ್ ನ್ಯಾಯಾಲಯದ ಮೂಲ ನ್ಯಾಯವ್ಯಾಪ್ತಿ ಜಾರಿಯಲ್ಲಿದ್ದು, ಕಕ್ಷಿದಾರರು ಅದೇ ವ್ಯವಸ್ಥೆಗೆ ರೂಢಿಯಾಗಿದ್ದಾರೆ. ಪ್ರಸ್ತುತ ಬದಲಾವಣೆಯಿಂದ ಕಕ್ಷಿದಾರರು ಮತ್ತು ವಕೀಲರಿಗೆ ತೀವ್ರ ಅನಾನುಕೂಲ ಉಂಟಾಗಿದೆ ಮತ್ತು ಅಸ್ತಿತ್ವದಲ್ಲಿರುವ ನ್ಯಾಯಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ ಎಂದು ಸಂಘದ ಪದಾಧಿಕಾರಿಗಳು ಮನವಿಯಲ್ಲಿ ತಿಳಿಸಿದ್ದಾರೆ.
ಕಾಳಗಿ ನ್ಯಾಯಾಲಯವನ್ನು ರದ್ದುಪಡಿಸುವುದು ಅಥವಾ ಮುಚ್ಚುವಂತೆ ನಾವು ಕೋರುತ್ತಿಲ್ಲ. ಚಿತ್ತಾಪುರದ ಮೂಲ ನ್ಯಾಯವ್ಯಾಪ್ತಿಯನ್ನು ಪುನಃಸ್ಥಾಪಿಸಬೇಕು. ಕಾಳಗಿ ಹಿರಿಯ ಸಿವಿಲ್ ನ್ಯಾಯವ್ಯಾಪ್ತಿಗೆ ಸಂಬಂಧಿಸಿದ ಸರ್ಕಾರದ ಹಿಂದಿನ ಅಧಿಸೂಚನೆಯನ್ನು ಮರುಪರಿಶೀಲಿಸಬೇಕು. ವಕೀಲರ ಸಂಘ ಈಗಾಗಲೇ ಸಲ್ಲಿಸಿರುವ ಆಕ್ಷೇಪಣೆಯನ್ನು ಪರಿಗಣಿಸಬೇಕು. ಕಾಳಗಿಗೆ ಸಂಬಂಧಿಸಿದ ಹಿರಿಯ ಸಿವಿಲ್ ಪ್ರಕರಣಗಳನ್ನು ಕಲಬುರಗಿ ನ್ಯಾಯಾಲಯದಿಂದ ಹಿಂಪಡೆಯಬೇಕು ಎಂದು ಮನವಿ ಮಾಡಿದ್ದಾರೆ.
ಮುಷ್ಕರದ ಎಚ್ಚರಿಕೆ: ನಮ್ಮ ನ್ಯಾಯಸಮ್ಮತ ಬೇಡಿಕೆಯನ್ನು ಸಮಂಜಸ ಅವಧಿಯಲ್ಲಿ ಪರಿಗಣಿಸಿ ಕ್ರಮ ಕೈಗೊಳ್ಳದಿದ್ದಲ್ಲಿ, ಚಿತ್ತಾಪುರ ವಕೀಲರ ಸಂಘವು ಕಾನೂನುಬದ್ಧ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನ್ಯಾಯಾಲಯ ಕಾರ್ಯದಿಂದ ದೂರವಿರುವುಧಲ್ಲದೆ, ಮುಷ್ಕರ ನಡೆಸುವುದು ಸೇರಿದಂತೆ ಮುಂದಿನ ಹೋರಾಟದ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಕರದಳ್ಳಿ, ಪ್ರಧಾನ ಕಾರ್ಯದರ್ಶಿ ಬಿ.ಎಲ್.ವಾಡಿ, ನ್ಯಾಯವಾದಿಗಳಾದ ಶರಣಗೌಡ ಪಾಟೀಲ, ಎಸ್.ಎಂ.ಹೋಳಿ, ಬಿ.ಬಿ.ದೊಡ್ಡಮನಿ, ಎಸ್.ಪಿ.ಸಾತನೂರಕರ್, ಎ.ಟಿ.ರಾಠೋಡ, ಎಲ್.ಎ.ಪಾಪೀಲ, ಎಸ್.ಇ.ಅನ್ವರಕರ್, ಅಶ್ವಥ್ ರಾಠೋಡ ಸೇರಿದಂತೆ ಇತರರು ಇದ್ದರು.

