ಚಿತ್ತಾಪುರ ಈಡಿಗ ಸಮಾಜದ ಮುಖಂಡರ ನಿಯೋಗ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಭೇಟಿ, ಈಡಿಗ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಬದ್ದ: ಪ್ರಿಯಾಂಕ್ ಖರ್ಗೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದಲ್ಲಿ ಮಂಜೂರಾದ ಆರ್ಯ ಈಡಿಗ ಸಮಾಜದ ಸಮುದಾಯ ಭವನದ ಗುದ್ದಲಿ ಪೂಜೆ ಹಾಗೂ ವಿವಿಧ ವಿಷಯಗಳ ಕುರಿತು ಈಡಿಗ ಸಮಾಜದ ಮುಖಂಡರ ನಿಯೋಗ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಮತ್ತು ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಬೆಂಗಳೂರಿನ ಸಚಿವರ ಸರ್ಕಾರಿ ವಸತಿ ಗೃಹದಲ್ಲಿ ಭಾನುವಾರ ಭೇಟಿ ನೀಡಿ ಚರ್ಚಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಈಡಿಗ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಬದ್ಧನಾಗಿದ್ದು 1 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಭವನದ ನೀಲಿ ನಕ್ಷೆ ತಯಾರಿಸಿ, ಸುಸಜ್ಜಿತ ಭವ್ಯವಾದ ಭವನ ನಿರ್ಮಾಣ ಆಗಬೇಕು ಈ ನಿಟ್ಟಿನಲ್ಲಿ ಬೇರೆ ಕಡೆ ಇರುವ ಭವನಗಳ ಮಾದರಿ ನೋಡಿಕೊಂಡು ನಕ್ಷೆ ತಯಾರಿಸಿ ಎಂದು ಸಲಹೆ ನೀಡಿದರು. ಬರುವ ಹೊಸ ವರ್ಷದ ಜನವರಿ 3 ರಿಂದ 9 ದಿನಾಂಕದ ನಡುವೆ ಕಾರ್ಯಕ್ರಮ ನಿಗದಿ ಮಾಡಿ ನಾನು ಬರುತ್ತೇನೆ ಎಂದು ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಶಂಕರಗೌಡ ರಾವೂರಕರ್ ಲೀಡರ್, ಗೌರವಾಧ್ಯಕ್ಷ ಹಾಗೂ ಪುರಸಭೆ ಸದಸ್ಯ ವಿನೋದ ಗುತ್ತೇದಾರ, ಮುಖಂಡರಾದ ಕಾಶಿನಾಥ ಗುತ್ತೇದಾರ, ಹಣಮಯ್ಯ ಗುತ್ತೇದಾರ ಲಾಡ್ಲಾಪೂರ, ಮಲ್ಲಿಕಾರ್ಜುನ ಗುತ್ತೇದಾರ ಅಳ್ಳೋಳ್ಳಿ, ಯಲ್ಲಯ್ಯ ಕಲಾಲ್, ರಾಜೇಶ್ ಗುತ್ತೇದಾರ ನಾಲವಾರ ಸೇರಿದಂತೆ ಆನಂದ ಪೇಂಟರ್, ಕೃಷ್ಣಕಾಂತ್ ಸ್ಥಾವರಮಠ, ದತ್ತು ಹೈದ್ರಾಬಾದ್ ಇದ್ದರು.

