ಮಾಡಬೂಳದಲ್ಲಿ ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನಾಚರಣೆ, ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸುವುದು ಅಗತ್ಯ: ಡಾ.ವಾಸುದೇವ ಸೇಡಂ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪ್ರಸ್ತುತ ಭ್ರಷ್ಟಾಚಾರ ವ್ಯಾಪಕವಾಗಿ ಎಲ್ಲಾಕಡೆ ಹರಡಿದೆ ಇದನ್ನು ನಿರ್ಮೂಲನೆ ಮಾಡಲು ಕೇವಲ ಲೋಕಾಯುಕ್ತ ಸಂಸ್ಥೆಯಿಂದ ಸಾಧ್ಯವಿಲ್ಲ ಇದನ್ನು ಬೇರು ಸಮೇತ ನಿರ್ಮೂಲನೆ ಆಗಬೇಕಾದರೆ ಎಲ್ಲರೂ ಕೈಜೋಡಿಸುವುದು ಅಗತ್ಯವಾಗಿದೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಹೇಳಿದರು
ಚಿತ್ತಾಪುರ ವಿಧಾನಸಭೆ ವ್ಯಾಪ್ತಿಯ ಮಾಡಬೂಳನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಲಬುರಗಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರದ ಲಾಲಸೆ, ಹಣದ ದುರಾಸೆ, ಐಶಾರಾಮಿ ಭೋಗದ ಜೀವನದ ಹಂಬಲದಂತಹ ಮುಂತಾದ ಕಾರಣಗಳಿಂದ ಲಂಚ ಪಡೆಯಲಾಗುತ್ತದೆ. ಲಂಚ ಪಡೆಯುವುದು ಹಾಗೂ ನೀಡುವುದು ಕಾನೂನಿನ ಪ್ರಕಾರ ಅಪರಾಧ. ಲೋಕಾಯುಕ್ತ, ಕೆಲವು ವ್ಯಕ್ತಿ ಹಾಗೂ ಸಂಸ್ಥೆಗಳಿಂದ ಮಾತ್ರ ಭ್ರಷ್ಟಾಚಾರ ನಿರ್ಮೂಲನೆಯಾಗುವುದಿಲ್ಲ. ಜೊತೆಗೆ ಎಲ್ಲರೂ ಕೈಜೋಡಿಸಬೇಕಾದದ್ದು ಅತ್ಯಗತ್ಯವಾಗಿದೆ ಎಂದು ಹೇಳಿದರು
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಭ್ರಷ್ಟಾಚಾರ ರಾಷ್ಟ್ರದ ಅಭಿವೃದ್ಧಿಗೆ ಮಾರಕ ಹಾಗೂ ಸಾಮಾಜಿಕ ಕಂಟಕ. ಇದರಿಂದ ಸಮಾಜದ ಮೇಲೆ ವಿವಿಧ ರೀತಿಯಲ್ಲಿ ದುಷ್ಪರಿಣಾಮಗಳಾಗುತ್ತಿವೆ. ಬಡ ಮತ್ತು ಮಧ್ಯಮ ವರ್ಗದ ಜನರು ಸಾಕಷ್ಟು ತೊಂದರೆ ಅನುಭವಿಸಬೇಕಾಗಿದೆ. ಆದ್ದರಿಂದ ಭ್ರಷ್ಟಾಚಾರ ಎಂಬ ಪಿಡುಗು ಬೇರು ಸಹಿತ ನಿರ್ಮೂಲನೆ ಮಾಡಲು ಪಣ ತೊಟ್ಟು ಕೆಲಸ ಮಾಡಬೇಕಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗಪ್ಪಾ ಎಸ್. ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಸಿದ್ದಮ್ಮ ಹೆಬ್ಬಾಳ, ಶಿಕ್ಷಕರಾದ ಲಕ್ಷ್ಮೀಪುತ್ರ ಪೂಜಾರಿ, ಭೀಮಾಶಂಕರ ಮಡಿವಾಳ, ಉಪನ್ಯಾಸಕ ವೆಂಕಟರಾವ ಪವಾರ, ನಿವೃತ್ತ ಉಪನ್ಯಾಸಕ ಅಲ್ಲಾಪಟೇಲ್ ಬಿರಾದಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.