ಚಿತ್ತಾಪುರದಲ್ಲಿ ಎಐಡಿಎಸ್ಓ ಸಂಘಟನೆಯಿಂದ ಸುಭಾಷ್ ಚಂದ್ರ ಬೋಸ್ ರವರ 128ನೇ ಜನ್ಮದಿನಾಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಮಹಾತ್ಮಾ ಗಾಂಧೀಜಿ ಪ್ರೌಢಶಾಲೆಯಲ್ಲಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯಿಂದ ಶನಿವಾರ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 128ನೇ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಭಾಷಣಕಾರರಾಗಿ ಎಐಡಿಎಸ್ಓ ರಾಜ್ಯ ಉಪಾಧ್ಯಕ್ಷ ಹಣಮಂತ ಎಸ್.ಎಚ್ ಮಾತನಾಡಿ, ಇವತ್ತು ನಮ್ಮನ್ನು ಆಳುತ್ತಿರುವ ಪಕ್ಷಗಳು ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗಿಕರಣ ಮಾಡುತ್ತಿದೆ. 4,000 ಸರಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆದಿದೆ. ಬಡ ಮಕ್ಕಳಿಗೆ ಶಿಕ್ಷಣ ದೂರತಳ್ಳುತ್ತಿವೆ, ಮತ್ತೊಂದೆಡೆ ರೈತ ಕಾರ್ಮಿಕರ ವಿರೋಧಿ ನೀತಿಗಳನ್ನು ತಂದು ರೈತ ಕಾರ್ಮಿಕರನ್ನು ಸಂಕಷ್ಟದಲ್ಲಿ ಇರಿಸಿದೆ ಎಂದರು.
ಇವತ್ತು ಶಿಕ್ಷಣದಲ್ಲಿ ಕೋಮುವಾದಿ ಜಾತಿ, ಧರ್ಮ ವಿಷಯಗಳನ್ನು ಹರಡುಬಿಡುತ್ತಿದೆ. ಇನ್ನೊಂದೆಡೆ ಸಮಾಜದಲ್ಲಿ ಕುಸಿಯುತ್ತಿರುವ ನೈತಿಕ ಮೌಲ್ಯಗಳ ಕೊರತೆ ವಿದ್ಯಾರ್ಥಿ ಯುವಕರನ್ನು ನೈಜ ವಿಷಯಗಳಿಂದ ದಾರಿ ತಪ್ಪಿಸುತ್ತಿವೆ. ಇದರಿಂದ ಪ್ರತಿದಿನ ವಯಸ್ಸಿನ ಮಿತಿ ಇಲ್ಲದೆ ಸಣ್ಣ ಮಕ್ಕಳು ಹಿಡಿದು ವಯಸ್ಸಾದ ವೃದ್ಧರ ಮೇಲೆ ಅತ್ಯಾಚಾರ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರ ಸಂಘರ್ಷ ಭರಿತ ಜೀವನ ಹಾಗೂ ವಿಚಾರಗಳ ಅವಶ್ಯಕತೆ ಇದೆ ಎಂದು ಹೇಳಿದರು.
ಎಐಡಿಎಸ್ಓ ಜಿಲ್ಲಾ ಸಮಿತಿ ಸದಸ್ಯ ದೇವರಾಜ ರಾಜೋಳಕರ್ ಮಾತನಾಡಿ, ಇಂದಿನ ಮಕ್ಕಳು ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟದ ನೇತಾರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಬಹಳ ಅವಶ್ಯಕತೆಯಿದೆ. ಮಕ್ಕಳು ಮೊಬೈಲ್ ಗೀಳಿನಿಂದ ಹೊರ ಬರಬೇಕು. ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳುವುದು ಉತ್ತಮ. ಮಕ್ಕಳನ್ನು ಸಾಂಸ್ಕೃತಿಕವಾಗಿ, ನೈತಿಕವಾಗಿ ಸಾಗಲು ನಮ್ಮ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ಸದಾಕಾಲವೂ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು.
ಮಹಾತ್ಮಾ ಗಾಂಧೀಜಿ ಪ್ರೌಢಶಾಲೆ ಮುಖ್ಯ ಗುರು ರಮೇಶಬಾಬು ಎಂ. ಬಟಗೇರಿ ಮಾತನಾಡಿ, ವಿದ್ಯಾರ್ಥಿಗಳ ಮದ್ಯೆ ಇಂತಹ ಮಹಾನ್ ವ್ಯಕ್ತಿಗಳ ಕಾರ್ಯಕ್ರಮ ತೆಗೆದುಕೊಂಡು ಹೋಗುವುದು ಬಹಳ ಮುಖ್ಯವಾಗಿದೆ, ಎಲ್ಲಾ ವಿದ್ಯಾರ್ಥಿಗಳು ಅವರ ವಿಚಾರಗಳನ್ನು ತಮ್ಮ ಜೀವನದಲ್ಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಖಜಾಂಚಿ ವೆಂಕಟೇಶ ದೇವದುರ್ಗ, ಉಪಾಧ್ಯಕ್ಷ ಗೋವಿಂದ ಹೆಳವರ, ತಾಲೂಕು ಸಂಚಾಲಕಿ ಪ್ರೀತಿ ದೋಡ್ಡಮನಿ, ಶಿಕ್ಷಕ ರಂಗನಾಥ ದೊರೆ ಹಾಗೂ ನೂರಾರು ವಿದ್ಯಾರ್ಥಿಗಳು, ಯುವಜನರು ಉಪಸ್ಥಿತರಿದ್ದರು.