ಆಟವಾಡುವ ಆಸಕ್ತಿ ಮಕ್ಕಳಲ್ಲಿ ಕಡಿಮೆ ಆಗುತ್ತಿರುವುದು ಖೇದದ ಸಂಗತಿ: ಸಿದ್ದಲಿಂಗ ಬಾಳಿ ಬೇಸರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಆಟಗಳು ಎಂದರೆ ಉತ್ಸಾಹದಿಂದ ಕುಣಿಯುವಂತಹ ಮಕ್ಕಳು ಇಂದು ಉತ್ತಮ ಆರೋಗ್ಯ ಹಾಗೂ ಅಪೌಷ್ಟಿಕತೆಯ ಕಾರಣದಿಂದಾಗಿ ಮತ್ತು ಮೊಬೈಲ್ ಗಳಿಂದ ಆಟವಾಡುವ ಆಸಕ್ತಿ ಮಕ್ಕಳಲ್ಲಿ ಕಡಿಮೆ ಆಗುತ್ತಿರುವುದು ಖೇದದ ಸಂಗತಿ ಎಂದು ಶಿಕ್ಷಕ ಸಿದ್ದಲಿಂಗ ಬಾಳಿ ಬೇಸರ ವ್ಯಕ್ತಪಡಿಸಿದರು.
ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ನೆಹರು ಯುವ ಕೇಂದ್ರ, ಶ್ಯಾಮಸುಂದರ್ ಶಿಕ್ಷಣ ಮಹಾವಿದ್ಯಾಲಯ ಹಾಗೂ ಸಮೃದ್ಧಿ ಯುವತಿಯರ ಸ್ವಸಹಾಯ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕ ಮಟ್ಟದ ಕ್ರೀಡಾಕೂಟದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾಠಗಳ ಜೊತೆಗೆ ಆಟಗಳು ಬೇಕು. ಪ್ರಸ್ತುತ ದಿನಗಳಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿದೆ. ಮಕ್ಕಳಲ್ಲಿ ಕಡಿಮೆಯಾಗುತ್ತಿರುವ ಕ್ರೀಡಾ ಒಲವು, ದೈಹಿಕ ಶಿಕ್ಷಕರ ಕೊರತೆ, ಮೈದಾನದ ಕೊರತೆ ಹೀಗೆ ನಾನಾ ಕಾರಣಗಳಿಂದ ಕ್ರೀಡೆಗಳಿಂದ ಮಕ್ಕಳು ದೂರ ಉಳಿಯುತ್ತಿದ್ದಾರೆ. ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ ಪಡೆಯಲು ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ನೆಹರು ಯುವ ಕೇಂದ್ರದ ಸ್ವಯಂ ಸೇವಕಿ ಮಾಣಿಕಮ್ಮ ಜಮಾದಾರ ಕ್ರೀಡಾಕೂಟದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಲೋ ಸೈಕ್ಲಿoಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅರ್ಚನಾ, ದ್ವಿತೀಯ ಸ್ಥಾನ ಪಡೆದ ಶಮ್ಮಾ, ತೃತೀಯ ಸ್ಥಾನ ಪಡೆದ ಭಾಗ್ಯಶ್ರೀ ಯನ್ನು ಪ್ರಮಾಣ ಪತ್ರ ಸ್ಮರಣಿಕೆ ಮತ್ತು ಮೆಡಲ್ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಶಿವಕುಮಾರ ಸರಡಗಿ, ಶಿಕ್ಷಕರಾದ ಈಶ್ವರಗೌಡ ಪಾಟೀಲ, ಶ್ಯಾಮಸುಂದರ್ ದೊಡ್ಡಮನಿ, ಬಸವರಾಜ ರಾಠೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.