ಕಾಳಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿಗಳ ವೀಕ್ಷಣೆ, ಗಡಿಕೇಶ್ವರ ಶಾಲೆಯಲ್ಲಿ ಮಕ್ಕಳೊಂದಿಗೆ ಬಿಸಿಯೂಟ ಸೇವಿಸಿದ ಜಿಪಂ ಸಿಇಒ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ತಾಲೂಕಿನ ವಿವಿಧ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಜೆಜೆಎಂ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಕೊಡ್ಲಿ ತಾಂಡಾ, ಪಸ್ತಾಪೂರ, ಹೊಸಳ್ಳಿ ಎಚ್, ತೇಗಲತಿಪ್ಪಿ, ಗಡಿಕೇಶ್ವರ ಗ್ರಾಮಗಳಲ್ಲಿನ ಜೆಜೆಎಂ ಕಾಮಗಾರಿಗಳ ವೀಕ್ಷಣೆ ಮಾಡಿದರು. ಗಡಿಕೇಶ್ವರ ಮತ್ತು ಪಸ್ತಾಪೂರ ಗ್ರಾಮಗಳಲ್ಲಿನ ಜೆಜೆಎಂ ಕಳಪೆ ಕಾಮಗಾರಿಗೆ ಕೂಡಲೇ ಜೆಇ ಅಮಾನತಿಗೆ ಪ್ರಸ್ತಾವನೆ ಸಲ್ಲಿಸಿ ಎಂದು ಸ್ಥಳದಲ್ಲಿದ್ದ ತಾಪಂ ಇಓ ಗೆ ಸೂಚಿಸಿದರು.
ಬಿಸಿಯೂಟ ಸೇವಿಸಿದ ಸಿಇಒ: ಗಡಿಕೇಶ್ವರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದ ಸಿಇಓ ಭಂವರ್ ಸಿಂಗ್ ಮೀನಾ ಅವರು ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸೇವಿಸಿದರು.
ನಂತರ ಮಾತನಾಡಿದ ಅವರು, ಬಿಸಿಯೂಟ ತಯಾರಿಸುವ ಕೋಣೆಯ ಸ್ವಚ್ಛತೆ ಹಾಗೂ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಕಾಳಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಸಲಿಂಗಪ್ಪ ಡಿಗ್ಗಿ, ಪಿಡಿಒಗಳಾದ ಮಹಾನಂದ ಗುತ್ತೇದಾರ, ಸೋಮಶೇಖರ, ಜೆಇ ಯುವರಾಜ್ ರಾಠೋಡ ಸೇರಿದಂತೆ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

