ಶಹಾಬಾದ ತಾಲೂಕಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕೈ ಬಿಟ್ಟ ಶಿಕ್ಷಣ ಆಯುಕ್ತರ ಕ್ರಮಕ್ಕೆ ಮುಖಂಡರು ಆಕ್ರೋಶ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಕಲಬುರಗಿ ಜಿಲ್ಲೆಯ ಹೊಸ ನಾಲ್ಕು ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರಾರಂಭಿಸುವ ಕುರಿತು ಶಿಕ್ಷಣ ಆಯುಕ್ತರು ಶಹಾಬಾದ ತಾಲೂಕನ್ನು ಶಿಫಾರಸ್ಸಿನಲ್ಲಿ ಕೈಬಿಟ್ಟಿರುವ ಕ್ರಮವನ್ನು ಮುಖಂಡರು ಪಕ್ಷಬೇಧ ಮರೆತು ಸಾರ್ವತ್ರಿಕವಾಗಿ ಖಂಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶಹಾಬಾದ ಅಭಿವೃದ್ದಿ ಹೋರಾಟ ಸಮಿತಿ ಅಧ್ಯಕ್ಷ ಮ.ಉಬೇದುಲ್ಲಾ ಅಧ್ಯಕ್ಷತೆಯಲ್ಲಿ ಕರೆದ ಸಭೆಯಲ್ಲಿ, ನಗರದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡು ಹೊರ ತಾಲೂಕಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ನೀಡುವಲ್ಲಿ ಶಿಕ್ಷಣ ಆಯುಕ್ತರ ಕ್ರಮ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಶಹಾಬಾದ ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರಾರಂಭಿಸಬೇಕೆಂದು ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರು ಬರೆದ ಪತ್ರಕ್ಕೂ ಕಿಮ್ಮತ್ತು ನೀಡದೆ ಅಧಿಕಾರಿಗಳು ಶಹಾಬಾದಕ್ಕೆ ಮಲತಾಯಿ ಧೋರಣೆ ತೋರಿದ್ದಾರೆ ಎಂದು ಸಭೆಯಲ್ಲಿ ಸಾರ್ವತ್ರಿಕವಾಗಿ ಆಕ್ರೋಶ ಹೊರಹಾಕಿದರು.
ಈ ಕುರಿತು ನಡೆದ ಚರ್ಚೆಯ ನಂತರ ಶಹಾಬಾದ ತಾಲೂಕು ಕೇಂದ್ರ ಕೈ ಬಿಟ್ಟ ಕುರಿತು ಆಯುಕ್ತರಿಂದ ಮಾಹಿತಿ ಹಕ್ಕು ಕಾಯ್ದೆ ಅನ್ವಯ ವಿವರಣೆ ಪಡೆದು, ಸ್ಥಳೀಯ ಶಾಸಕ ಬಸವರಾಜ ಮತ್ತಿಮಡು, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ತಂದು, ಆಯುಕ್ತರು ತಮ್ಮ ಶಿಫಾರಸ್ಸನ್ನು ಮರು ಪರಿಶೀಲಿಸಿ, ಶಹಾಬಾದ ತಾಲೂಕು ಕೇಂದ್ರಕ್ಕಾಗಿ ಮತ್ತೊಮ್ಮೆ ಶಿಫಾರಸ್ಸು ಮಾಡಲು ಒತ್ತಡ ತರಬೇಕೆಂದು ನಿರ್ಣಯಿಸಲಾಯಿತು. ಅವಶ್ಯಕತೆ ಅನಿಸಿದರೆ ಎಲ್ಲಾ ರೀತಿಯ ನ್ಯಾಯಬದ್ದ ಹೋರಾಟ ನಡೆಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಬಿಸಿಸಿ ಹಾಗೂ ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ, ಮುಖಂಡರಾದ ಅಣವೀರ ಇಂಗಿನಶೆಟ್ಟಿ, ಹಾಶಮ್ ಖಾನ್, ಅರುಣ ಪಟ್ಟಣಕರ್, ಪೀರಪಾಶಾ, ಡಾ.ಅಹ್ಮದ ಪಟೇಲ, ಮುನ್ನಾ ಪಟೇಲ, ಬಸವರಾಜ ಮದ್ರಕಿ, ರಾಜ ಮಹ್ಮದ ರಾಜಾ, ಅನೀಲ ಹೀಬಾರೆ, ಫಜಲ್ ಪಟೇಲ್, ರಾಜೇಶ ಯನಗುಂಟಿಕರ್, ಸುಭಾಷ ಸಾಕ್ರೆ ಸೇರಿದಂತೆ ಅನೇಕರು ಇದ್ದರು. ರಮೇಶ ಭಟ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು, ನಿಂಗಣ್ಣ ಜಂಬಗಿ ವಂದಿಸಿದರು.

