ದೇವದುರ್ಗದ ಹಗಲುವೇಷ ಕಲಾವಿದ ಈರಣ್ಣ ರುದ್ರಾಕ್ಷಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲು ಬುಡ್ಗ ಜಂಗಮ ಸಮಾಜ ಸರ್ಕಾರಕ್ಕೆ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬಯಲಾಟ, ಹಗಲುವೇಷ ಬಹುಮುಖ ಪ್ರತಿಭೆಯುಳ್ಳ ಕಲಾವಿದರಾದ ಈರಣ್ಣ ರುದ್ರಾಕ್ಷಿ ಅವರ ಸಾಧನೆ ಪರಿಗಣಿಸಿ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಬುಡ್ಗ ಜಂಗಮ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಶಿರವಾಟಿ ಸರ್ಕಾರಕ್ಕೆ ಮನವಿ ಮಾಡಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಾಳೆಗಡ್ಡೆ ಗ್ರಾಮದ ಈರಣ್ಣ ರುದ್ರಾಕ್ಷಿ ಬಯಲಾಟ, ಹಗಲುವೇಷದಲ್ಲಿ ಅನೇಕ ಬಹುಮುಖ ಪ್ರತಿಭೆಯುಳ್ಳ ಕಲಾವಿದರಾಗಿದ್ದು ಇವರು ಸುಮಾರು 50ಕ್ಕೂ ಅಧಿಕ ವರ್ಷಗಳಿಂದ ಅನೇಕ ಹಳ್ಳಿಗಳಲ್ಲಿ ತಿರುಗಿ ಹಗಲುವೇಷದ ಮೂಲಕ ಸಂಗೊಳ್ಳಿ ರಾಯಣ್ಣ, ಸಿಂದೂರ ಲಕ್ಷ್ಮಣ, ಜಕಾಸುರನವದೆ ಮುಂತಾದ ಆಟಗಳನ್ನು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ರಾಜ್ಯೋತ್ಸವ, ಹಂಪಿ ಉತ್ಸವ, ಮೈಸೂರು ದಸರಾ ವಿಶ್ವ ಕನ್ನಡ ಸಮ್ಮೇಳನ ಹೀಗೆ ಅನೇಕ ಕಾರ್ಯಕ್ರಮಗಳನ್ನು ನೀಡಿರುವ ಇವರ ಸೇವೆಯನ್ನು ಗುರುತಿಸಿ 2025-26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದರು.
ಅಲೆಮಾರಿ ಬುಡ್ಗ ಜಂಗಮ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವರಾಜ್ ರುದ್ರಾಕ್ಷಿ ಮಾತನಾಡಿ, ಈರಣ್ಣ ಅವರು ದೇಶದ ಸುಮಾರು ರಾಜ್ಯಗಳಲ್ಲಿ ಸುತ್ತಾಡಿ ಕಟ್ಟ ಕಡೆಯ ಬುಡಗ ಜಂಗಮರ ಬಯಲಾಟ, ಹಗಲುವೇಷದ ಮೂಲಕ ಈ ದೇಶದ ಕಲೆ, ಸಂಸ್ಕೃತಿ ಎತ್ತಿ ಹಿಡಿದಿದ್ದರಿಂದ ರುದ್ರಾಕ್ಷಿ ಅವರಿಗೆ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಹೀಗೆ ಸುಮಾರು 40ಕ್ಕೂ ಅಧಿಕ ಪ್ರಶಸ್ತಿಗಳು ಸಂದಿದ್ದರೂ ರಾಜ್ಯೋತ್ಸವ ಪ್ರಶಸ್ತಿ ದೊರೆತಿಲ್ಲ. ಅವರು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಸ್ವಭಾವದವರೂ ಅಲ್ಲ. ಅವರ ಸಾಧನೆಯನ್ನು ಗಮನಿಸಿ ಸರ್ಕಾರವೇ 2025–26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಕೋರಿದರು.
“ನಾನು ಮೂಲತಃ ಹಗಲುವೇಷ (ಬುಡ್ಗ ಜಂಗಮ) ಸಮುದಾಯದ ಆಲೆಮಾರಿಗಳಾಗಿದ್ದರೂ, ದೇಶದ ಐತಿಹಾಸಿಕ ಹಿನ್ನೆಲೆ ಹಾಗೂ ಪ್ರಾಚೀನ ಕಾಲದಿಂದಲೂ ಜನಮನದಲ್ಲಿ ಸದಾ ಅಚ್ಚು ಉಳಿಯುವಂತಿರುವ ಹಗಲುವೇಷ ಕಲಾ ಪ್ರದರ್ಶನ ಉಳಿಯಬೇಕು ಎಂಬ ಹಿತದೃಷ್ಟಿಯಿಂದ ಭೀಮಾಂಜನೇಯ ಯುದ್ಧ, ಮೋಹಿನಿ ಭಸ್ಮಾಸೂರ, ಜಟಾಶೂರ ವಧೆ, ಕಂಸನ ವಧೆ, ಸುಂದ-ಉಪಸುಂದ, ರಾಮಾಯಣ, ಮಹಾಭಾರತ ಪೌರಾಣಿಕ ಪ್ರದರ್ಶನ ಸೇರಿದಂತೆ ಐತಿಹಾಸಿಕ, ಸಾಮಾಜಿಕ ಹಿನ್ನೆಲೆಯುಳ್ಳ ಸಿಂಧೂರ ಲಕ್ಷ್ಮಣ, ವೀರ ಸಂಗೊಳ್ಳಿ ರಾಯಣ್ಣದಂತಹ ಪ್ರದರ್ಶನಗಳಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸಿರುವೇ ನನ್ನ ಸಾಧನೆ ಸರ್ಕಾರ ಗುರುತಿಸಲಿ”.- ಈರಣ್ಣ ರುದ್ರಾಕ್ಷಿ ಬಯಲಾಟ, ಹಗಲುವೇಷ ಕಲಾವಿದರು.

