ಕರ್ತವ್ಯಲೋಪ ಎಸಗಿದ ಅಳ್ಳೋಳ್ಳಿ ಗ್ರಾಮ ಪಂಚಾಯತ್ ಪಿಡಿಒ ದೇವಿಂದ್ರಪ್ಪ ಭಾಲ್ಕಿ ಅಮಾನತು: ಜಿಪಂ ಸಿಇಒ ಆದೇಶ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ತವ್ಯ ಪಾಲನೆ ಮಾಡುವಲ್ಲಿ ನಿರ್ಲಕ್ಷತನ, ಬೇಜವಾಬ್ದಾರಿತನ ಕಂಡುಬಂದಿರುವ ಪ್ರಯುಕ್ತ ಅಳ್ಳೋಳ್ಳಿ ಗ್ರಾಮ ಪಂಚಾಯತ ಪ್ರಭಾರಿ ಪಿಡಿಒ ದೇವಿಂದ್ರಪ್ಪ ಭಾಲ್ಕಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರಸಿಂಗ್ ಮೀನಾ ಆದೇಶಿಸಿದ್ದಾರೆ.
ಹಿನ್ನೆಲೆ: ಚಿತ್ತಾಪುರ ತಾಲೂಕಿನ ಸಂಯುಕ್ತ ಕರ್ನಾಟಕ ದಿನಪತ್ರಿಕೆ ವರದಿಗಾರ ನಾಗಯ್ಯ ಸ್ವಾಮಿ ಅಲ್ಲೂರ ಇವರು ಮಾರ್ಚ್ 1 ರಂದು ಅಳ್ಳೋಳ್ಳಿ ಗ್ರಾಮ ಪಂಚಾಯತ ಕಾರ್ಯಾಲಯಕ್ಕೆ ಭೇಟಿ ನೀಡಿ 15ನೇ ಹಣಕಾಸು ಯೋಜನೆಯಡಿಯಲ್ಲಿ ಖರ್ಚಾದ ಮಾಹಿತಿಯನ್ನು ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿ ಮಾಹಿತಿ ನೀಡುವಂತೆ ಕೋರಿರುತ್ತಾರೆ. ಆದರೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಯಾವುದೇ ಮಾಹಿತಿ ಒದಗಿಸಿರುವುದಿಲ್ಲ. ಮುಂದುವರೆದು, ಮಾರ್ಚ್ 5 ರಂದು ಮಧ್ಯಾಹ್ನ 1.53 ನಿಮಿಷಕ್ಕೆ ಪಂಚಾಯತ ಅಭಿವೃದ್ಧಿ ಅಧಿಕಾರಿ ದೇವಿಂದ್ರಪ್ಪ ಭಾಲ್ಕಿ ರವರು ಕರೆ ಮಾಡಿ, ಬ್ಲಾಕಮೇಲ್ ಮಾಡಲು ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಹಾಕಿದ್ದಿ, ನಿನ್ನನ್ನು ಪೋಲಿಸ್ ಕೇಸ್ ಮಾಡಿ ಒಳಗೆ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಸದರಿಯವರಿಗೆ ಬಿ.ಪಿ ಇದ್ದು ತುಂಬಾ ಭಯಗೊಂಡಿರುವುದಾಗಿ ಹಾಗೂ ಜೀವಕ್ಕೆ ಎನಾದರೂ ಹಾನಿಯಾದರೆ ಪಿ.ಡಿ.ಓ ರವರೇ ಜವಾಬ್ದಾರರಾಗಿರುತ್ತಾರೆ. ಸದರಿ ಪಿ.ಡಿ.ಓ ರವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುತ್ತಾರೆ.
ಸದರಿ ವಿಷಯವಾಗಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತ ಅಭಿವೃದ್ಧಿ ಅಧಿಕಾರಿಗೆ ಕಾರಣ ಕೇಳುವ ನೋಟಿಸ್ ಜಾರಿಗೊಳಿಸಿರುತ್ತಾರೆ, ಆದಾಗ್ಯೂ ಪಿ.ಡಿ.ಓ ರವರು ಸದರಿ ನೋಟಿಸ್ ಗಳಿಗೆ ಯಾವುದೇ ಸಮಜಾಯಿಷಿ ಸಲ್ಲಿಸಿರುವುದಿಲ್ಲ ಮತ್ತು ಮಾಹಿತಿ ಹಕ್ಕು ಅಧಿನಿಯಮಡಿ ಕೋರಿರುವ ಮಾಹಿತಿಯನ್ನು ಒದಗಿಸದೇ ಕರ್ತವ್ಯಲೋಪ ಎಸಗಿರುತ್ತಾರೆ ಎಂದು ಕೆ.ಸಿ.ಎಸ್(ಸಿ.ಸಿ.ಎ) ನಿಯಾಮಾವಳಿಗಳನ್ವಯ ಶಿಸ್ತು ಕ್ರಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಶಿಫಾರಸ್ಸು ಮಾಡಿರುತ್ತಾರೆ.
ಪ್ರಯುಕ್ತ ಈ ಮೇಲಿನ ಅಂಶಗಳ ಕುರಿತಂತೆ ಪರಿಶೀಲಿಸಲಾಗಿ ದೇವಿಂದ್ರಪ್ಪ ಭಾಲ್ಕಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ ಮೊಗಲಾ ಇವರು ತಮ್ಮ ಕರ್ತವ್ಯ ಪಾಲನೆ ಮಾಡುವಲ್ಲಿ ನಿರ್ಲಕ್ಷತನ, ಬೇಜವಾಬ್ದಾರಿತನ ತೋರಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಡೆತೆ ನಿಯಮಗಳು 2021ರಲ್ಲಿನ ನಿಯಮ 3(1) (11) (111) ಯನ್ನು ಸಾಮಾನ್ಯ ತತ್ವಗಳಲ್ಲಿ ಒಳಪಡುವ ಉಪ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿರುವುದರಿಂದ ಅವರ ಮೇಲೆ ಶಿಸ್ತುಕ್ರಮ ಜರುಗಿಸಲು ನಿರ್ಣಯಿಸಿ ದೇವೆಂದ್ರಪ್ಪಾ ಭಾಲ್ಕಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ ಅಳ್ಳೋಳ್ಳಿ (ಮೂಲ ಮೊಗಲಾ ಗ್ರಾಪಂ) ಇವರ ವಿರುದ್ಧ ಮಾಡಲಾದ ಆರೋಪಗಳ ಕುರಿತು ನಿಷ್ಪಕ್ಷಪಾತದಿಂದ ತನಿಖೆ ಕೈಗೊಳ್ಳಲು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಶಿಸ್ತು ಪ್ರಾಧಿಕಾರಿಯಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ನಾಗರಿಕ ಸೇವಾ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ರ ನಿಯಮ 10(1)(ಡಿ) ರನ್ನಯ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಕಲಬುರಗಿ ಜಿಲ್ಲಾ ಪಂಚಾಯತ್ ಶಿಸ್ತು ಪ್ರಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದೇಶಿಸಿದ್ದಾರೆ.
ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರಸ್ಥಾನವನ್ನು ಬಿಡತಕ್ಕದಲ್ಲ ಹಾಗೂ ಕರ್ನಾಟಕ ನಾಗರೀಕ ಸೇವಾ ನಿಯಮವಳಿ-1957ರ ನಿಯಮ 98 ರ ಅನುಸಾರ ಜೀವನ ನಿರ್ವಹಣೆ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ತಿಳಿಸಿದ್ದಾರೆ.