ಅಳ್ಳೋಳ್ಳಿ ಶ್ರೀ ಅಯ್ಯಪ್ಪಯ್ಯ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ಫೆ. 3 ರಿಂದ ಪ್ರಾರಂಭ: ನಾಗಪ್ಪಯ್ಯ ಮಹಾಸ್ವಾಮಿಗಳು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಅಳ್ಳೋಳ್ಳಿ ಮಹಾತ್ಮಾಪೀಠ ಗದ್ದಗಿಮಠದ ಶ್ರೀ ಅಯ್ಯಪ್ಪಯ್ಯ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ಫೆ. 3 ರಿಂದ ಪ್ರಾರಂಭವಾಗಿ ಫೆ. 27 ಕ್ಕೆ ಮುಕ್ತಾಯವಾಗಲಿದೆ ಎಂದು ಪೀಠಾಧಿಪತಿ ನಾಗಪ್ಪಯ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಫೆ.3 ರಂದು ಗಂಗಸ್ಥಳ, 4 ರಂದು ಮಹಾಪ್ರಸಾದ ಉಷಾ:ಕಾಲ ಕಾರಣಿಕ ಪೂಜೆ, 5 ರಂದು ಮಹಾಸೇವಾ ಹಾಗೂ ರಾತ್ರಿ 9 ಗಂಟೆಗೆ, ಪೂಜ್ಯ ಶ್ರೀ ನಾಗಪ್ಪಯ್ಯ ಮಹಾಸ್ವಾಮಿಗಳ ತುಲಾಭಾರ ಕಾರ್ಯಕ್ರಮ ಜರುಗುವುದು. 6 ರಂದು ಕೈ ಕುಸ್ತಿ, 7 ರಂದು ದಶಮಿ ಮೌನೇಶ್ವರ ಮಹಾಪ್ರಸಾದ, 8 ರಂದು ದಶಮಿ ಸೇವಾ, 12 ರಂದು ಹಾಲೋಕುಳಿ, 14 ರಂದು ಗಂಗಮ್ಮನ ಪೂಜೆ, 18 ರಂದು ತುರಕರ ಲಂಕಿ ಪ್ರಸಾದ, 26 ರಂದು ಶಿವರಾತ್ರಿ ಜಾಗರಣೆ, 27 ರಂದು ಶಿವರಾತ್ರಿ ಅಮಾವಾಸ್ಯೆ ಹೀಗೆ ವಿವಿಧ ಕಾರ್ಯಕ್ರಮಗಳು ಹಾಗೂ ಸೇವೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.
11ನೇ ಶತಮಾನದ ಧರ್ಮಕ್ರಾಂತಿಕಾರರು ಧಾರ್ಮಿಕ ಸಂಘರ್ಷಣೆಯಲ್ಲಿ ಭಾಗವಹಿಸಿ ಹಿಂದೂ ಧರ್ಮದ ಆರೂಢ ಮತವನ್ನು ಎತ್ತಿ ಹಿಡಿದಿದ್ದ ಶ್ರೀ ವಿರಾಟ ವಿಶ್ವಕರ್ಮ ಜಗದ್ಗುರು ಶ್ರೀ ಮೌನೇಶ್ವರರು ಕರ್ನಾಟಕದಲ್ಲೆಲ್ಲಾ ಅನೇಕ ಪವಾಡಗಳನ್ನು ಮಾಡಿದ ಮಹಾಯೋಗಿಗಳವರು ಅವರ ವರಪ್ರಸಾದಿಕರಾದ ಶ್ರೀ ಅಯ್ಯಪ್ಪಯ್ಯ ಮಹಾಸ್ವಾಮಿಗಳು ಮಹಾಮಹಿಮರಾಗಿದ್ದರು. ಇವರ ಪವಾಡಗಳು ಒಂದಲ್ಲ ಸಾವಿರಾರು ಪವಾಡಗಳಾಗಿವೆ. ಇವರ ತರುವಾಯ ಬಂದ ಮಠದ ಲೀಲಾ ಪುರುಷರು ಸರ್ವಧರ್ಮಗಳನ್ನು ಸಮನಾಗಿ ಕಂಡು ಜನರಲ್ಲಿ ಭಾವೈಕ್ಯತೆಯನ್ನುಂಟು ಮಾಡಿದ ಅಗ್ರಗಣ್ಯರು. ಇಂತಹ ಮಹಾತ್ಮರ ನಿಲುಮೆ ಈ ಅಳ್ಳೋಳ್ಳಿ ಗ್ರಾಮವಾಗಿದೆ ಎಂದು ಹೇಳಿದ್ದಾರೆ.
ಇಲ್ಲಿಯ ಕಾರಣಿಕ ಪೂಜೆಯು ತುಂಬಾ ಮಹತ್ವದಾಗಿದ್ದು, ದೇಶದ ಭವಿಷ್ಯ, ಮಳೆ, ಬೆಳೆ ಮತ್ತು ರಾಜಕೀಯ ಪರಿವರ್ತನೆಗಳನ್ನು ಸೂಚಿಸುವಂಥದ್ದಾಗಿದೆ. ಇಂತಹ ಪವಿತ್ರ ಕ್ಷೇತ್ರದ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಶಕೆ 1946 ಕ್ರೋಧಿನಾಮ ಸಂವತ್ಸರ ಮಾಘ ಶುದ್ದ 5 ಪಂಚಮಿಯಿಂದ ಬಹುಳ 30 ರ ವರೆಗೆ ಜರಗುವುದು. ಆದಕಾರಣ ಭಕ್ತಾದಿಗಳು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿ ಕ್ಷೇತ್ರಾಧಿಪತಿಗಳ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ.
ಫೆ.6 ರಿಂದ 10 ದಿನಗಳ ವರೆಗೆ ದನಗಳ ಜಾತ್ರೆ ಇರುತ್ತದೆ. ಕಾರಣ ರೈತರೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಫೆ.5 ರಿಂದ ಸತತ (4 ದಿನಗಳವರೆಗೆ) ಪ್ರತಿದಿನ ರಾತ್ರಿ 10.30 ಗಂಟೆಗೆ “ಎಚ್ಚರ ತಂಗಿ ಎಚ್ಚರ” ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶಿಸಲಾಗುವುದು. ಫೆ.5 ರಿಂದ 9 ರ ವರೆಗೆ ಯಾದಗಿರ, ಗುರುಮಠಕಲ್, ಕಲಬುರಗಿ, ಸೇಡಂ, ಚಿತ್ತಾಪೂರ ಡಿಪೋಗಳಿಂದ ಹೆಚ್ಚಿನ ಬಸ್ಸುಗಳ ಸೌಕರ್ಯ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
“ಅಳ್ಳೋಳ್ಳಿ ಸುಕ್ಷೇತ್ರದ ಗದ್ದಗಿಮಠ ಹಿಂದು ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದ್ದು, ಈ ಮಠಕ್ಕೆ 600 ವರ್ಷದ ಇತಿಹಾಸ ಇದೆ. ಕಷ್ಟ ಅಂತ, ಸಮಸ್ಯೆ ಅಂತ ಬಂದವರಿಗೆ ಪರಿಹರಿಸುವ ಅಯ್ಯಪ್ಪಸ್ವಾಮಿ, ಭಕ್ತಿಯಿಂದ ಬೇಡಿದ್ದನ್ನು ಕರುಣಿಸುವ ಆರಾಧ್ಯ ದೈವ ಆಗಿದ್ದಾರೆ, ಈಗಾಗಲೇ ನಾಗಪ್ಪಯ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಸಿದ್ದತೆ ಪೂರ್ಣಗೊಂಡಿದೆ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ”.-ರಾಜಣ್ಣ ಕರದಾಳ ಮಠದ ಪರಮ ಭಕ್ತರು ಹಾಗೂ ಅಧ್ಯಕ್ಷರು ಬಾಬು ಜಗಜೀವನರಾಮ್ ಸಮಿತಿ ಚಿತ್ತಾಪುರ.