ಅಶೋಕ್ ವೆಂಕಯ್ಯ ಗುತ್ತೇದಾರ್ ಸ್ಮರಣಾರ್ಥ ನಾಳೆ ಉಚಿತ ಆರೋಗ್ಯ ಶಿಬಿರ: ಜಮುನಾ ಗುತ್ತೇದಾರ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಅಶೋಕ್ ವೆಂಕಯ್ಯ ಗುತ್ತೇದಾರ ಅವರ 16 ನೇ ಪುಣ್ಯಸ್ಮರಣಾರ್ಥ ನಾಳೆ ಮಂಗಳವಾರ ( ಮಾರ್ಚ್ 3 ರಂದು) ಅಫಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪುರದಲ್ಲಿ ಕಣ್ಣಿನ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ ಜೀವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ದಿ. ಅಶೋಕ್ ಗುತ್ತೇದಾರ್ ಅವರ ಪತ್ನಿ ಜಮುನಾ ಗುತ್ತೇದಾರ ತಿಳಿಸಿದ್ದಾರೆ.
ಜಿಲ್ಲೆಯ ಸ್ಟೇಷನ್ ಗಾಣಗಾಪುರದ ವೆಂಕಯ್ಯ ಕೂಸಯ್ಯ ಗುತ್ತೇದಾರ ಸಮಾಧಿ ಆವರಣದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಆರೋಗ್ಯ ಶಿಬಿರ ನಡೆಯಲಿದೆ. ಅನುಗ್ರಹ ಕಣ್ಣಿನ ಆಸ್ಪತ್ರೆಯ ತಜ್ಞರಾದ ಡಾ. ಪ್ರಭುಗೌಡ ಪಾಟೀಲ್ ಬಿ ಎಲ್, ಡಾ. ಮಾಲಿನಿ ಪಿ.ಎಲ್, ಸ್ಟೇಷನ್ ಗಾಣಗಾಪುರದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಸಂಗೋಳಕರ್ ಡಾ. ಅಮರ್ ದೀಪ ಪವಾರ್, ಜೀವಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಅಜಯ್ ಗುತ್ತೇದಾರ್, ಡಾ. ಶಿಫಾಲಿ ಎ. ಗುತ್ತೇದಾರ್ ಹಾಗೂ ಡಾ. ದಿವ್ಯಶ್ರೀ ಎಸ್ ಗುತ್ತೇದಾರ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅಗತ್ಯವಿರುವ ರೋಗಿಗಳಿಗೆ ಕಲಬುರಗಿಯಲ್ಲಿ ಸೂಕ್ತ ಚಿಕಿತ್ಸಾ ವ್ಯವಸ್ಥೆಯನ್ನು ಮಾಡಲಾಗುವುದು. ಶಿಬಿರಕ್ಕೆ ಬರುವವರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಚುನಾವಣಾ ಗುರುತು ಪತ್ರ ಅಥವಾ ಎಸ್ಬಿಐ ಕಾರ್ಡ್ ಯಾವುದಾದರೂ ಒಂದು ದಾಖಲೆಯ ಪ್ರತಿಯೊಂದು ತರಬೇಕು ಎಂದು ಜಮುನಾ ಗುತ್ತೇದಾರ್ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬಡದಾಳ ತೇರಿನ ಮಠದ ಶ್ರೀ ಚನ್ನಮಲ್ಲ ಶಿವಾಚಾರ್ಯರು, ಚೌಡಾಪುರದ ಚಿಣಮಗೇರದ ಶ್ರೀ ಮಹಾಂತ ಶಿವಾಚಾರ್ಯರು ಹಾಗೂ ವಿಕೆಜಿ ಕುಟುಂಬದ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
