ಭಂಕಲಗಿ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ, ಕಾರ ಹುಣ್ಣಿಮೆ ಹಬ್ಬ ಗ್ರಾಮೀಣ ಸೊಗಡು ಮತ್ತು ಸಂಸ್ಕೃತಿಯ ಸಂಕೇತ: ಮೌನೇಶ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಭಂಕಲಗಿ ಗ್ರಾಮದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಊರ ಅಗಸಿಯಲ್ಲಿ ಶ್ರೀನಿವಾಸ ರೆಡ್ಡಿ ಮಾಲಿ ಪಾಟೀಲ್ ಅವರು ಕರಿ ಹರಿಯುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಎತ್ತುಗಳಿಗೆ ಅಲಂಕರಿಸಿ ಹಲಗಿ ಮುಖಾಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಗ್ರಾಮದ ರೈತರಾದ ಮೌನೇಶ್ ಭಂಕಲಗಿ, ಮಲ್ಲಿಕಾರ್ಜುನ್ ಮಲಬೋ ಪ್ರದೀಪ ರೆಡ್ಡಿ ಗುರಡ್ಡಿ, ಭೀಮರಾವ್ ಸುಬೇದಾರ್, ದೊಡ್ಡಪ್ಪ ನಾಮರ್, ಮಲ್ಲಣ್ಣ ಡೋಣಗಾಂವ, ಶರಣಪ್ಪ ಬೆಳಗೇರಿ ಸೇರಿದಂತೆ ಇತರರು ಇದ್ದರು.
ರೈತ ಸಂಘದ ತಾಲೂಕು ಅಧ್ಯಕ್ಷ ಮೌನೇಶ್ ಭಂಕಲಗಿ ಮಾತನಾಡಿ, ಮುಂಗಾರು ಮಳೆಯ ಆಗಮನದ ಹಿನ್ನೆಲೆಯಲ್ಲಿ ರೈತರ ಮೊದಲ ಹಬ್ಬವಾಗಿ ಆಚರಿಸಲ್ಪಡುವ ಕಾರ ಹುಣ್ಣಿಮೆ. ಗ್ರಾಮೀಣ ಸೊಗಡು ಮತ್ತು ಸಂಸ್ಕೃತಿಯ ಸಂಕೇತವಾಗಿರುವ ಕಾರ ಹುಣ್ಣಿಮೆ ಹಬ್ಬ ರೈತರ ಬದುಕನ್ನು ಹಸನಾಗಿಸುವ ಮತ್ತು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸುವ ರೈತರ ಅಚ್ಚುಮೆಚ್ಚಿನ ಹಬ್ಬವಾಗಿದೆ ಎಂದು ಹೇಳಿದರು.
ದೇಶಕ್ಕೆ ರೈತ ಬೆನ್ನೆಲುಬಾದರೆ, ರೈತರಿಗೆ ಎತ್ತುಗಳೇ ಬೆನ್ನೆಲುಬು. ಎತ್ತುಗಳು ರೈತರ ಬೆನ್ನೆಲುಬಾಗಿ ಕೃಷಿ ಭೂಮಿಯಲ್ಲಿ ದುಡಿಯುತ್ತವೆ. ಯಂತ್ರಗಳು ಇರಲಿ ಇಲ್ಲದಿರಲಿ. ರೈತರ ಜಮೀನಿನಲ್ಲಿ ಅತಿ ಹೆಚ್ಚು ದುಡಿಯುವುದು ಎತ್ತುಗಳು. ಇತ್ತೀಚೆಗೆ ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಾಗುತ್ತಿದೆ. ಆದರೂ, ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಕೃಷಿಗೆ ಎತ್ತುಗಳೇ ಆಧಾರ. ಹೀಗಾಗಿ ರೈತರು ಎತ್ತುಗಳನ್ನು ಪೂಜನೀಯ ಭಾವದಿಂದ ಕಾಣುತ್ತಾರೆ ಎಂದು ಹೇಳಿದರು.