ಬಾಕಿ ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಅತಿಥಿ ಶಿಕ್ಷಕರು ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರುಗಡೆ ಅನಿರ್ದಿಷ್ಟ ಧರಣಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: 2023-2024ನೇ ಸಾಲಿನ ಅತಿಥಿ ಶಿಕ್ಷಕರ 2 ತಿಂಗಳ ವೇತನ ಕೂಡಲೇ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ ತಾಲೂಕು ಶಾಖೆಯ ನೇತೃತ್ವದಲ್ಲಿ ಅತಿಥಿ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಎದುರುಗಡೆ ಮಂಗಳವಾರ ಅನಿರ್ದಿಷ್ಟ ಧರಣಿ ಕುಳಿತಿದ್ದಾರೆ.
2023-2024ನೇ ಸಾಲಿನ ಅತಿಥಿ ಶಿಕ್ಷಕರ ಫೆಬ್ರವರಿ ಮತ್ತು ಮಾರ್ಚ (2 ತಿಂಗಳ ವೇತನ ) 249 ಜನರ ಒಟ್ಟು ವೇತನ ರೂ.30,83,283 ವೇತನ ಬಾಕಿ ಇದ್ದು ಇದರ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಮಾಹಿತಿ ಕೇಳಿದರು ಅವರಿಂದ ಬಂದ ಉತ್ತರ ಬರುತ್ತೇ, ಸ್ವಲ್ಪ ತಡವಾಗುತ್ತದೆ ಎಂ ಹಾರಿಕೆ ಉತ್ತರ ನೀಡಿ ಕಳೆದ ವರ್ಷ ಮಾರ್ಚ ತಿಂಗಳಿಂದ ಇಲ್ಲಿಯವರೆಗೂ ನಮ್ಮ ವೇತನ ಬಿಡುಗಡೆಗೊಳಿಸುವಲ್ಲಿ ನಿರ್ಲಕ್ಷ ತೋರಿದ್ದಾರೆ ಎಂದು ಅತಿಥಿ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಮತ್ತು ಪಿಎಸ್ಐ ಶ್ರೀಶೈಲ್ ಅಂಬಾಟಿ ಅವರು ಧರಣಿ ನಿರತ ಅತಿಥಿ ಶಿಕ್ಷಕರ ಮನವೋಲಿಸುವ ಪ್ರಯತ್ನ ಮಾಡಿದರೂ ಧರಣಿ ಮುಂದುವರಿಸಿದ್ದಾರೆ. ಡಿಡಿಪಿಐ ಬರುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಧರಣಿಯಲ್ಲಿ ಚಿಕ್ಕ ಮಕ್ಕಳ ಜೊತೆ ಮಹಿಳಾ ಅತಿಥಿ ಶಿಕ್ಷಕರು ಭಾಗವಹಿಸಿದ್ದಾರೆ.
ತಾಲೂಕು ಅತಿಥಿ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಜಗದೇವ ಕುಂಬಾರ, ಅಧ್ಯಕ್ಷ ಸೋಮಪ್ಪ, ಪ್ರಧಾನ ಕಾರ್ಯದರ್ಶಿ ಬಸವರಾಜ.ಬಿ.ಎಮ್ ಸೇರಿದಂತೆ ಅನೇಕ ಅತಿಥಿ ಶಿಕ್ಷಕರು ಇದ್ದರು.