ಚಿತ್ತಾಪುರ-ಕಲಬುರಗಿ ಸಾರಿಗೆ ಬಸ್ಸುಗಳ ವ್ಯವಸ್ಥೆ ಮಾಡಲು ನೌಕರರ ಸಂಘ ಒತ್ತಾಯ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸರ್ಕಾರಿ ನೌಕರರ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಚಿತ್ತಾಪುರ ದಿಂದ ಕಲಬುರಗಿ ಹಾಗೂ ಕಲಬುರಗಿ ಯಿಂದ ಚಿತ್ತಾಪುರ ಕ್ಕೆ ಹೋಗಿ ಬರಲು ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್ಸುಗಳ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ನೌಕರರ ಸಂಘ ತಾಲೂಕು ಅಧ್ಯಕ್ಷ ಅರುಣಕುಮಾರ ಎಸ್. ಚಿಂಚನಸೂರ ಅವರು ಬುಧವಾರ ಬಸ್ ಘಟಕದ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.
ಚಿತ್ತಾಪುರ ತಾಲೂಕಿನಲ್ಲಿ ನೌಕರಿ ಮಾಡುವವರ ಸಂಖ್ಯೆ ಸುಮಾರು 400 ದಿಂದ 500 ಆಗಿರುತ್ತದೆ. ಸದರಿ ನೌಕರರು ದಿನನಿತ್ಯ ಕಲಬುರಗಿಯಿಂದ ಚಿತ್ತಾಪುರಕ್ಕೆ ಸೇವೆ ಸಲ್ಲಿಸಲು ಬರುವುದರಿಂದ ಕಲಬುರಗಿಯಿಂದ ಚಿತ್ತಾಪುರವರೆಗೆ ಬರಲು ತೊಂದರೆಯಾಗುತ್ತಿದೆ ಹಾಗೂ ಸಾಯಂಕಾಲ ಚಿತ್ತಾಪುರದಿಂದ ಕಲಬುರಗಿಗೆ ತೆರಳಲು ತೊಂದರೆಯಾಗುತ್ತಿದೆ ಎಂದು ತಿಳಿಸಿದರು.
ಆದ್ದರಿಂದ ಬೆಳಿಗ್ಗೆ 8 ರಿಂದ 9 ರ ಒಳಗಾಗಿ ಸುಮಾರು 5 ಬಸ್ಸುಗಳು ಹಾಗೂ ಚಿತ್ತಾಪುರದಿಂದ ಕಲಬುರಗಿ ತೆರಳಲು ಸಾಯಂಕಾಲ 5.30 ರಿಂದ 6.30ರ ಒಳಗೆ 5 ಬಸ್ಸುಗಳು ವ್ಯವಸ್ಥೆ ಮಾಡಿಕೊಟ್ಟು ಸರ್ಕಾರಿ ನೌಕರರಿಗೆ ಸಕಾಲಕ್ಕೆ ಸೇವೆ ಸಲ್ಲಿಸಲು ಅನುಕೂಲ ಮಾಡಿಕೊಡಲು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸದಾಶಿವ ಡಿ. ದೊಡ್ಡಮನಿ, ಕೋಶಾಧ್ಯಕ್ಷ ಶರಣಪ್ಪ ವಾಯ್, ಕಟ್ಟಿ, ನಿವೃತ್ತ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರೇವಣಸಿದ್ದಪ್ಪ ರೋಣದ್ ಇದ್ದರು.

