ಚಿತ್ತಾಪುರ ಎಂ.ಬಿ.ಪಾಟೀಲ ಶಾಲೆಯ 15 ನೇ ವಾರ್ಷಿಕೋತ್ಸವ, ಜೀವನದಲ್ಲಿ ಸಾಧಿಸುವ ಛಲ ಇದ್ದಾಗ ಯಶಸ್ಸು ಸಿಗಲು ಸಾಧ್ಯ: ರಾವೂರ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಜೀವನದಲ್ಲಿ ಸಾಧಿಸುವ ಛಲ ಇರಬೇಕು ಅಂದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂದು ರಾವೂರ ಸಿದ್ದಲಿಂಗೇಶ್ವರ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಮಳಖೇಡ ರಸ್ತೆಯಲ್ಲಿರುವ ವಿಶ್ವ ಗುರು ಶಿಕ್ಷಣ ಹಾಗೂ ಕಲ್ಯಾಣ ಸಂಸ್ಥೆಯ ಮಹಾದೇವಮ್ಮ ಬಿ. ಪಾಟೀಲ್ ಸ್ಮಾರಕ ಸಿಬಿಎಸ್ಇ ಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜಿನ 15 ನೇ ಶಾಲಾ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ವಿಧ್ಯಾರ್ಥಿಗಳು ಯಾವತ್ತೂ ಆಶಾವಾದಿಗಳು, ಕ್ರಿಯಾಶೀಲರು ಹಾಗೂ ಉತ್ಸಾಹಿಗಳು ಆಗಿರಬೇಕು ಹೊರತು ನಿರಾಶೆ ಹಾಗೂ ಹತಾಶೆಗೆ ಒಳಗಾಗಬಾರದು ಎಂದು ಕಿವಿಮಾತು ಹೇಳಿದರು.
ಜೀವನದಲ್ಲಿದ್ದ ಕೀಳರಿಮೆಯನ್ನು ಮೊದಲು ತೆಗೆದು ಹಾಕಬೇಕು, ಸಕಾರಾತ್ಮಕ ಆಲೋಚನೆ ಇರಬೇಕು ನಕಾರಾತ್ಮಕ ವಿಚಾರಗಳಿಗೆ ಅವಕಾಶ ನೀಡಬೇಡಿ ಎಂದು ಹೇಳಿದರು.
ಎಲ್ಲಾ ದೀಕ್ಷೆಗಿಂತ ಅಕ್ಷರ ದೀಕ್ಷೆ ಶ್ರೇಷ್ಠ ಅಂತಹ ಕಾರ್ಯ ಮಾಡುತ್ತಿರುವ ನಾಗರೆಡ್ಡಿ ಪಾಟೀಲರು ಸಮಾಜದ ವಿವಿಧ ರಂಗದ ಸಮಸ್ಯೆಗಳಿಗೆ ಪರಿಹಾರ ನೀಡುವ ಛಾತಿ ಉಳ್ಳವರು ಅವರ ಸೇವೆ ಶ್ಲಾಘನೀಯ ಎಂದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಆರ್.ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಶಿವಶರಣಪ್ಪ ಬಿರಾದಾರ ಮಾತನಾಡಿ, ಎಂ.ಬಿ ಪಾಟೀಲ ಸಂಸ್ಥೆ ಯಲ್ಲಿ ಪ್ರತಿಭಾವಂತ ಮಕ್ಕಳಿಗೆ ಉಚಿತ ಪ್ರವೇಶ ಪ್ರವೇಶ ಸಂತೋಷದ ಸಂಗತಿ, ಇಲ್ಲಿನ ಶಿಕ್ಷಕರಿಗೂ ತರಬೇತಿ ನೀಡುತ್ತಿರುವ ಕಾರ್ಯ ಶ್ಲಾಘನೀಯ. ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಪೈಪೋಟಿ ಹಾಗೂ ಸ್ಪರ್ಧೆ ಇದೆ ಇದನ್ನು ವಿದ್ಯಾರ್ಥಿಗಳು ಅರಿತುಕೊಂಡು ಅದರಂತೆ ಅಭ್ಯಾಸ ಮಾಡಬೇಕು ಹಾಗೂ ಹೆಚ್ಚು ಓದಿನ ಕಡೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ಪಾಲಕರು ಮಕ್ಕಳಿಗಾಗಿ ಸಮಯ ತೆಗೆಯಬೇಕು. ಅವರ ಪ್ರತಿ ದಿನದ ಶಾಲಾ ಚಟುವಟಿಕೆಗಳ ಮಾಹಿತಿ ಪಡೆಯಬೇಕು ಈ ನಿಟ್ಟಿನಲ್ಲಿ ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರಕ್ಕಿಂತ ಪಾಲಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿ ನಿವೃತ್ತ ಪ್ರಾಚಾರ್ಯ ಜಯಂತ ಕುಲಕರ್ಣಿ ಮಾಲಗತ್ತಿ ಮಾತನಾಡಿದರು. ವೇದಿಕೆಯಲ್ಲಿ ಅತಿಥಿಗಳಾದ ಆಡಳಿತ ಮಂಡಳಿ ಸದಸ್ಯರಾದ ಪ್ರಕಾಶ್ ಜೈನ ಮಾಲಗತ್ತಿ ಇದ್ದರು. ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ವಿಶಾಲ ವೇದಿಕೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವಿಶ್ವಾರಾಧ್ಯ ಪಾಟೀಲ ಸ್ವಾಗತಿಸಿದರು, ಪ್ರಾಚಾರ್ಯ ಡಾ. ಜಯಶ್ರೀ ರೆಡ್ಡಿ ವಾರ್ಷಿಕ ವರದಿ ವಾಚನ ಮಾಡಿದರು. ಶಿಕ್ಷಕರಾದ ಶರಣಗೌಡ ಪಾಟೀಲ, ತ್ರಿವೇಣಿ ಪಾಟೀಲ, ಮುನಿಯಪ್ಪ ಕಡಬೂರ, ದತ್ತಾತ್ರೇಯ ಸೂರೆ, ಖಾಜಾ ಹುಸೇನ್, ಶಿವಕುಮಾರ್ ಕಲಶೆಟ್ಟಿ, ಲಾಲಪ್ಪ ಬಂಡಿ, ಬಸವರಾಜ್ ಪೂಜಾರಿ ಸೇರಿದಂತೆ ಸಂಸ್ಥೆಯ ಶಿಕ್ಷಕ ವೃಂದದವರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು, ಪಾಲಕರು ಇದ್ದರು.