ಚಿತ್ತಾಪುರ ಪುರಸಭೆ ಸ್ಥಾಯಿ ಸಮಿತಿ ಸಭೆ, ಪಟ್ಟಣದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ: ಚವ್ಹಾಣ ಸೂಚನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದಲ್ಲಿ ಪರಿಸರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ ಚವ್ಹಾಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸ್ಥಾಯಿ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪುರಸಭೆ ಯಿಂದ ಸಿಗುವ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಚಾಚು ತಪ್ಪದೆ ತಲುಪಿಸುವ ಕೆಲಸ ಮಾಡಬೇಕು. ಪಟ್ಟಣದ ಅಭಿವೃದ್ಧಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಕಷ್ಟು ಅನುದಾನ ತಂದಿದ್ದಾರೆ ಅದನ್ನು ಅಧಿಕಾರಿಗಳು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.
ಚಿತ್ತಾಪುರ ಪಟ್ಟಣದ ಸ್ವಚ್ಛತೆಗೆ ಹಾಗೂ ಸುಂದರವಾಗಿ ಇಡಲು ಹಗಲಿರುಳು ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು, ಅವರಿಗೆ ಬೇಕಾಗಿರುವ ಸುರಕ್ಷತೆ ಪಾದರಕ್ಷೆಗಳು, ಕೈ ಕೈಗವಸುಗಳು ಸುರಕ್ಷತೆ ನಿಯಮದಿಂದ ಕೆಲಸವನ್ನು ಮಾಡಿಸಬೇಕು, ಅವರ ಜೊತೆಯಲ್ಲಿ ಅವರ ಸುಖ ದುಃಖದಲ್ಲಿ ನಾವು ಭಾಗಿ ಆಗಬೇಕು ಅವರನ್ನು ನಮ್ಮ ಕುಟುಂಬದ ಸದಸ್ಯರ ಹಾಗೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಬಾಕಿ ಇರುವ ತೆರಿಗೆ ವಸೂಲು ಮಾಡಿ ಚಿತ್ತಾಪುರ ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಸಮಯಕ್ಕೆ ಸರಿಯಾಗಿ ಕಾರ್ಯಾಲಯದಲ್ಲಿ ಹಾಜರಿದ್ದು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರವನ್ನು ಒದಗಿಸಿಕೊಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಅಧಿಕಾರಿಗಳಾದ ಶರಣಪ್ಪ, ವಿಠಲ್ ಹಾದಿಮನಿ, ಶಬಾನಾ, ಲೋಹಿತ್, ರಿಯಾಜೋದ್ದಿನ್, ಪರಿಮಳಾ, ರವಿಶಂಕರ, ಗಿರೀಶ್, ವಿಜಯಕುಮಾರ್, ರಾಜಕುಮಾರ್, ಮರಿಯಣ್ಣ, ಕ್ರಾಂತಿ ದೇವಿ, ಸಂತೋಷಿ ಮಾತಾ, ವೆಂಕಟೇಶ್, ಶರಣಕುಮಾರ, ಮುತ್ತಣ್ಣ ಭಂಡಾರಿ ಇದ್ದರು.