ಚಿತ್ತಾಪುರದಲ್ಲಿ ಅಕ್ರಮ ಗೋ ಸಾಗಾಣಿಕೆ ವಾಹನ ತಡೆದು ಪೊಲೀಸರಿಗೆ ಒಪ್ಪಿಸಿದ ವಿಎಚ್’ಪಿ ಕಾರ್ಯಕರ್ತರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಇದೇ ಜೂನ್ 6 ರಂದು ಬಕ್ರಿದ್ ಹಬ್ಬದ ಪ್ರಯುಕ್ತ ಅಕ್ರಮ ಗೋ ಸಾಗಾಣಿಕೆ ವಾಹನ ಹೋಗುತ್ತಿರುವುದನ್ನು ಗಮನಿಸಿದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪಟ್ಟಣದ ಒಂಟಿ ಕಮಾನ್ ಹತ್ತಿರ ತಡೆಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ನಾಲ್ಕು ಗೋವುಗಳು ಇರುವ ಟ್ರಕ್ ವಾಹನ ಸಂಕನೂರ ಗ್ರಾಮದಿಂದ ಚಿತ್ತಾಪುರ ಪಟ್ಟಣದ ಒಂಟಿ ಕಮಾನ್ ಮಾರ್ಗವಾಗಿ ಕಸಾಯಿಖಾನೆಗೆ ಹೋಗುತ್ತಿರುವಾಗ ನಮ್ಮ ಕಾರ್ಯಕರ್ತರು ತಡೆಹಿಡಿದು ಪೊಲೀಸರಿಗೆ ಮಾಹಿತಿ ನೀಡಿ ಅವರಿಗೆ ಒಪ್ಪಿಸಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ತಿನ ವಿಭಾಗೀಯ ಕಾರ್ಯದರ್ಶಿ ಅಂಬರೀಷ್ ಸುಲೇಗಾಂವ ತಿಳಿಸಿದ್ದಾರೆ.
ಈ ಕುರಿತು ಪಿಎಸ್ಐ ಶ್ರೀಶೈಲ್ ಅಂಬಾಟಿ ಅವರಿಗೆ ಸಂಪರ್ಕಿಸಿದಾಗ ಇದು ಅಕ್ರಮ ಗೋ ಸಾಗಾಣಿಕೆ ಅಲ್ಲ ಸಂಕನೂರ ಗ್ರಾಮದಿಂದ ಮೂರು ಹೋರಿ ಒಂದು ಹಸು ಸೇರಿದಂತೆ ಒಟ್ಟು ನಾಲ್ಕು ಗೋವುಗಳ ವಾಹನ ಮಳಖೇಡ ಸಂತೆಗೆ ಹೋಗುತ್ತಿದೆ, ಇದಕ್ಕೆ ಸಂಬಂಧಪಟ್ಟ ಎಲ್ಲಾ ಕಾಗದ ಪತ್ರಗಳನ್ನು ಪರೀಶೀಲನೆ ಮಾಡಲಾಗಿದೆ ಎಲ್ಲವೂ ಸರಿಯಾಗಿದೆ, ಪಶು ಸಂಗೋಪನಾ ಇಲಾಖೆಯ ವರದಿ ಬಂದ ನಂತರ ಅವುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ನಾಗಾವಿ ಎಕ್ಸಪ್ರೆಸ್ ಗೆ ತಿಳಿಸಿದ್ದಾರೆ.
ಇದೇ ಜೂನ್ 6 ರಂದು ಬಕ್ರಿದ್ ಹಬ್ಬದ ಪ್ರಯುಕ್ತ ತಾಲೂಕಿನಲ್ಲಿ ಅಕ್ರಮ ಗೋಹತ್ಯೆ ಹಾಗೂ ಗೋ ಸಾಗಾಣಿಕೆ ಎಗ್ಗಿಲ್ಲದೆ ನಡೆಯುತ್ತಿದೆ ಕೂಡಲೇ ಪೊಲೀಸ್ ಅಧಿಕಾರಿಗಳು ತಡೆಗಟ್ಟಬೇಕು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ, 2020 ರ ಪ್ರಕಾರ ಅಕ್ರಮ ಗೋವು ಸಾಗಾಟ ಕಂಡುಬಂದರೆ ಅವರನ್ನು ಬಂಧಿಸಿ, ವಾಹನಗಳನ್ನು ಜಪ್ತಿ ಮಾಡಿ, ಕಾನೂನಿನ ಅಡಿಯಲ್ಲಿ ಶಿಕ್ಷೆ ವಿಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ತಿನ ವಿಭಾಗೀಯ ಕಾರ್ಯದರ್ಶಿ ಅಂಬರೀಷ್ ಸುಲೇಗಾಂವ ಆಗ್ರಹಿಸಿದ್ದಾರೆ.