ಚಿತ್ತಾಪುರದಲ್ಲಿ ರಾಮಲಿಂಗ ಶ್ರೀ ಚೌಡೇಶ್ವರಿ ಜಾತ್ರೆ ಅದ್ದೂರಿಯಾಗಿ ಸಂಪನ್ನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಾರ್ವತಿ ದೇವಿಯ ಅವತಾರವೆಂದು ಭಕ್ತರು ನಂಬಿರುವ, ಹಟಗಾರ ಪಂಗಡದ ಕುಲದೇವಿಯಾಗಿ ಹಾಗೂ ದಕ್ಷಿಣ ಭಾರತದ ಹಲವೆಡೆ ಆರಾಧಿಸಲ್ಪಡುವ ಶಕ್ತಿದೇವತೆಯಾದ ಶ್ರೀ ಚೌಡೇಶ್ವರಿ ದೇವಿಯ ರಾಮಲಿಂಗ ಜಾತ್ರೆ ಪಟ್ಟಣದಲ್ಲಿ ಭಕ್ತಿಭಾವ, ಜನಪದ ಸಂಸ್ಕೃತಿ ಹಾಗೂ ಶಿಸ್ತಿನೊಂದಿಗೆ ಅದ್ಜದೂರಿಯಾಗಿ ಜರುಗಿತು.
ಬನದ ಹುಣ್ಣಿಮೆಯಂದು ನಡೆದ ಜಾತ್ರೆಗೆ ಬೆಳಗ್ಗೆ ದೇವಿಗೆ ವಿಶೇಷ ಅಭಿಷೇಕ ಹಾಗೂ ಅಲಂಕಾರ ನೆರವೇರಿಸಲಾಯಿತು. ನಂತರ ಭಕ್ತರು ನೈವೇದ್ಯ ಸಮರ್ಪಿಸಿ ದೇವಿಯ ಕೃಪೆಗೆ ಪಾತ್ರರಾದರು. ಜಾತ್ರೆಗೆ ಮುನ್ನಾದಿನ ದೇವಿ ಉಪಾಸಕರಾದ ರಾಜಶೇಖರ ಕಟ್ಟಿ ಅಳ್ಳೊಳ್ಳಿ ಹಾಗೂ ನಾಗಪ್ಪ ಅವರು ಶ್ರೀ ಚೌಡೇಶ್ವರಿ ದೇವಿಯ ಮುಖವಾಡ ಧರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತರಿಗೆ ದರ್ಶನ ನೀಡಿದರು. ಡೊಳ್ಳು–ತಮಟೆ ಹಾಗೂ ವಾದ್ಯಮೇಳಗಳ ನಾದದೊಂದಿಗೆ ನಡೆದ ಈ ಮೆರವಣಿಗೆ ಭಕ್ತರಲ್ಲಿ ವಿಶೇಷ ಉತ್ಸಾಹ ಮೂಡಿಸಿತು.
ಯುವಕರು, ಮಹಿಳೆಯರು ಸೇರಿದಂತೆ ವಿವಿಧ ಸಮಾಜಗಳ ಅಪಾರ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದರು. ಪಲ್ಲಕ್ಕಿಯಲ್ಲಿ ದೇವಿ ಪಟ್ಟಣದ ಬೀದಿಗಳಲ್ಲಿ ಸಂಚರಿಸಿದ ಸಂದರ್ಭದಲ್ಲಿ ಜನಪದ ಪರಂಪರೆ, ನಂಬಿಕೆ ಹಾಗೂ ಸಾಂಸ್ಕೃತಿಕ ವೈಭವ ಸ್ಪಷ್ಟವಾಗಿ ಅನಾವರಣಗೊಂಡಿತು.
ಇದೇ ಸಂದರ್ಭದಲ್ಲಿ ಶ್ರೀ ಚೌಡೇಶ್ವರಿ ದೇವಾಲಯ ಆವರಣದಲ್ಲಿ ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಡಿಸೆಂಬರ್ 28ರಿಂದ ಜನವರಿ 1ರವರೆಗೆ ಶ್ರೀ ಗುಡ್ಡಾಪೂರ ಧಾನಮ್ಮ ದೇವಿಯ ಪುರಾಣ ಕಾರ್ಯಕ್ರಮ ಹಾಗೂ ಶ್ರೀ ರಾಮಲಿಂಗ ಚೌಡೇಶ್ವರಿ ಮತ್ತು ಶ್ರೀ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಚರ್ಚಿಹಾಳದ ಪುಟ್ಟರಾಜ ಶಾಸ್ತ್ರಿಯವರು ಪುರಾಣ ವಾಚನ ನಡೆಸಿಕೊಟ್ಟರು. ಗವಾಯಿಗಳಾದ ಕಲ್ಯಾಣಕುಮಾರ ಕಲಬುರ್ಗಿ ಹಾಗೂ ಶಿವಕುಮಾರ ಕಟ್ಟಿಸಂಗಾವಿ ತಬಲಾ ಸಾಥ್ ನೀಡಿದರು. ಪೂಜ್ಯರ ಸಾನಿಧ್ಯದಲ್ಲಿ ಉಡಿ ತುಂಬುವ ಕಾರ್ಯಕ್ರಮ, ಸಹಸ್ರ ದೀಪೋತ್ಸವ, ಕುಂಭ ಮೆರವಣಿಗೆ, ಗಂಗಸ್ಥಳ ಕಾರ್ಯಕ್ರಮ, ಶ್ರೀ ಚೌಡೇಶ್ವರಿ ದೇವಿಯ ಮುಖದ ಮೆರವಣಿಗೆ, ಪುರುವಂತರ ಶಸ್ತ್ರಧಾರಣೆ, ಮುತ್ತೈದೆಯರ ಸೇವೆ, ಭಜನೆ, ಪಲ್ಲಕ್ಕಿ ಉತ್ಸವ ಹಾಗೂ ಅನ್ನದಾಸೋಹ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ಜಾತ್ರೆಯ ಯಶಸ್ಸಿಗೆ ಅಯ್ಯಣ್ಣ ಅಲ್ಲಂ, ರಾಜು ಮದಗುಂಟಿ, ಸುರೇಶ ಮದಗುಂಟಿ, ಶಿವು ಶೀಲವಂತ, ರಾಚಣ್ಣ ಕಾಳಗಿ, ರಾಚಣ್ಣ ವೈಕುಂಠ, ನಾಗರಾಜ ಕೊಳ್ಳಿ, ವಾಸುದೇವ ಗಂಜಿ, ಶಿವರಾಜ ವೈಕುಂಠ, ರಾಜಶೇಖರ ಶಿರಪಾ, ಅಯ್ಯಪ್ಪ ಗುರುಮಿಠಕಲ್, ಅನಿಲ್ ಸನ್ಮುಖ, ರಾಜಶೇಖರ ಬಳ್ಳಾ, ಬಸವರಾಜ ರಾಜೊಳ್ಳಿ, ಹಂಪಯ್ಯ ಆರಿ, ಸಿದ್ದು ಸ್ವಾಮಿ, ಮಲ್ಲಿಕಾರ್ಜುನ ಅಲ್ಲಂ, ವಿಶ್ವನಾಥ ಅಲ್ಲಂ, ರಮೇಶ ಶಿರ್ಪಾ, ಗುರಣ್ಣ ದಂಡೋತಿ, ಮಹಾದೇವ ಬೇಲಿ, ಶಿವಕುಮಾರ ಗಂಜಿ, ಶಿವಕುಮಾರ ಮಾರಡಗಿ, ಮಂಜು ಶಾಸ್ತ್ರಿ, ರೇವಣಸಿದ್ಧ ಗಂಜಿ, ಬಸವರಾಜ ಸಂಕನೂರ್, ಚೆನ್ನಪ್ಪ ಕೋಡ್ಲಿ, ರಾಜಶೇಖರ ಗೋಗಿ, ರಾಜಶೇಖರ ಕಟ್ಟಿ, ಮಲ್ಲಿಕಾರ್ಜುನ ಪಲ್ಲೇದ್, ರುದ್ರಪ್ಪ ತಾವರೆ ಸೇರಿದಂತೆ ಹಲವರು ಶ್ರಮಿಸಿದರು.
ಒಟ್ಟಾರೆ ರಾಮಲಿಂಗ ಶ್ರೀ ಚೌಡೇಶ್ವರಿ ಜಾತ್ರೆ ಧಾರ್ಮಿಕ ಶ್ರದ್ಧೆ, ಜನಪದ ಪರಂಪರೆ ಹಾಗೂ ಸಾಮಾಜಿಕ ಸೌಹಾರ್ದತೆಯ ಸಂದೇಶದೊಂದಿಗೆ ಐತಿಹಾಸಿಕವಾಗಿ ಕಾರ್ಯಕ್ರಮ ನಡೆಯಿತು.

