ಹೋಳಿ ಹಬ್ಬದ ಪ್ರಯುಕ್ತ ಶಾಂತಿ ಸಭೆ, ಹಾನಿಕಾರಕ ಬಣ್ಣ ಉಪಯೋಗಿಸದೆ ನೈಸರ್ಗಿಕ ಬಣ್ಣ ಉಪಯೋಗಿಸಿ: ಡಿವೈಎಸ್ಪಿ ಶಂಕರಗೌಡ ಪಾಟೀಲ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಆರೋಗ್ಯದ ಹಿತದೃಷ್ಟಿಯಿಂದ ರಾಸಾಯನಿಕ, ಹಾನಿಕಾರಕ ಬಣ್ಣ ಉಪಯೋಗಿಸದೆ ನೈಸರ್ಗಿಕ ಬಣ್ಣ ಉಪಯೋಗಿಸಿ ಎಲ್ಲರೂ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಮಂಗಳವಾರ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾರನ್ನು ಒತ್ತಾಯಪೂರ್ವಕವಾಗಿ ಬಣ್ಣ ಎರಚಬೇಡಿ, ನಾವು ಆಚರಿಸುವ ಹಬ್ಬ ಇತರರಿಗೆ ತೊಂದರೆ ಆಗಬಾರದು. ಹೋಳಿ ಹಬ್ಬದ ಜೊತೆಗೆ ಮುಸ್ಲಿಂರ ಪವಿತ್ರ ರಂಜಾನ್ ಹಬ್ಬ ಹಾಗೂ ಪಿಯು ದ್ವಿತೀಯ ವರ್ಷದ ಪರೀಕ್ಷೆ ಇರುವುದರಿಂದ ಯಾರಿಗೂ ತೊಂದರೆಯಾಗದಂತೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಎಂದು ಕರೆ ನೀಡಿದರು.
ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ, ಬಣ್ಣ ಆಡುವ ಮಾರ್ಗ ಹಾಗೂ ಹೆಚ್ಚು ಜನ ಸೇರುವ ಸ್ಥಳದಲ್ಲಿ ಪೊಲೀಸ್ ನಿಯೋಜನೆ ಮಾಡಿ ಶಾಂತಿ ಸುವ್ಯವಸ್ಥೆ ಕಾಪಾಡಿ, ಈ ನಿಟ್ಟಿನಲ್ಲಿ ಹೋಳಿ ಹಬ್ಬದ ಯಶಸ್ವಿಗೆ ಪಟ್ಟಣದ ಜನತೆ ಕೂಡ ಸಹಕರಿಸಬೇಕು ಎಂದು ಹೇಳಿದರು.
ಸಿಪಿಐ ಚಂದ್ರಶೇಖರ ತಿಗಡಿ ಮಾತನಾಡಿ, ಮಾ.13 ಕ್ಕೆ ಕಾಮದಹನ ದಿನದಂದು ಎಲ್ಲರೂ ಜಾಗೃತರಾಗಿ ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಮಾ.14 ದುಲಂಡಿ ದಿನದಂದು ಬೆಳಿಗ್ಗೆ ಯಿಂದ 12.30 ಗಂಟೆಯವರೆಗೆ ಬಣ್ಣವಾಡಲು ಅವಕಾಶ ನೀಡಲಾಗಿದೆ ಎಲ್ಲರೂ ನಿಗದಿತ ಅವಧಿಯಲ್ಲಿ ಬಣ್ಣದ ಆಟ ಮುಗಿಸಬೇಕು ಎಂದು ಕಿವಿಮಾತು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಮಾತನಾಡಿ, ಪಟ್ಟಣದ ಜನತೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪುರಸಭೆ ವತಿಯಿಂದ ಸಕಾಲದಲ್ಲಿ ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷರಾದ ನಾಗರಾಜ ಭಂಕಲಗಿ, ಮಲ್ಲಿಕಾರ್ಜುನ ಕಾಳಗಿ, ಸದಸ್ಯ ಜಗದೀಶ್ ಚವ್ಹಾಣ, ಮುಖಂಡರಾದ ಅಂಬರೀಷ್ ಸುಲೇಗಾಂವ, ವಿಠಲ್ ಕಟ್ಟಿಮನಿ ಮಾತನಾಡಿದರು.
ಅಗ್ನಿಶಾಮಕ ಅಧಿಕಾರಿ ನಾಗರಾಜ್, ಜೆಸ್ಕಾಂ ಎಇ ಮಡಿವಾಳ, ಪಿಎಸ್ಐ ಚಂದ್ರಾಮಪ್ಪ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಮುಖಂಡರಾದ ನಾಗರಾಜ ರೇಷ್ಮೆ, ಬಾಲಾಜಿ ಬುರಬುರೆ, ಎಂ.ಎ.ರಷೀದ್, ಮಹ್ಮದ್ ಯಕ್ಬಾಲ್, ಅಹ್ಮದ್ ಸೇಟ್, ಸುರೇಶ್ ಬೆನಕನಳ್ಳಿ, ಪ್ರಭು ಗಂಗಾಣಿ, ಆನಂದ ಪಾಟೀಲ ನರಿಬೋಳ, ಅನೀಲ ವಡ್ಡಡಗಿ, ಮಲ್ಲಿಕಾರ್ಜುನ ಬೆಣ್ಣೂರಕರ್, ರಾಜು ಕುಲಕರ್ಣಿ, ರಫೀಕ್ ಲಿಂಕ್, ಅಂಬಾದಾಸ್ ತಿರುಮಲ್, ಮಹಾದೇವ ಅಂಗಡಿ, ನಾಗೇಂದ್ರ ಬುರ್ಲಿ, ಪಿಸಿ ದತ್ತು ಜಾನೆ ಸೇರಿದಂತೆ ಇತರರು ಇದ್ದರು.
ಪಿಎಸ್ಐ ಶ್ರೀಶೈಲ್ ಅಂಬಾಟಿ ಸ್ವಾಗತಿಸಿದರು, ಪಿಸಿ ಮಹೇಶ್ ರುಮಾಲ್ ನಿರೂಪಿಸಿದರು.