ಬೀದರ್ ಜಿಲ್ಲೆಯ ಗುತ್ತಿಗೆದಾರ ಸಚಿನ್ ಪಾಂಚಾಳ ಸಾವಿಗೆ ಕಾರಣಾದವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಜ.1 ರಂದು ಕಲಬುರ್ಗಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಿಶ್ವಕರ್ಮ ಸಮಾಜದವರು ಭಾಗವಹಿಸಲು ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬೀದರ್ ಜಿಲ್ಲೆಯ ಗುತ್ತಿಗೆದಾರ ಸಚಿನ್ ಪಾಂಚಾಳ ಸಾವಿಗೆ ಕಾರಣಾದವರನ್ನು ಕೂಡಲೇ ಬಂಧಿಸಬೇಕು ಹಾಗೂ ಪರೋಕ್ಷವಾಗಿ ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಜನವರಿ 1 ರಂದು ಕಲಬುರಗಿಯಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ತಾಲೂಕಿನ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಪ್ರಲ್ಹಾದ ವಿಶ್ವಕರ್ಮ ಹಾಗೂ ಕಾರ್ಯದರ್ಶಿ ಮೋನಯ್ಯ ಪಾಂಚಾಳ ಮನವಿ ಅವರು ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಡೀ ಪ್ರಕರಣದಲ್ಲಿ ಅಮಾಯಕ ಯುವಕನ ಮೇಲೆ ಒತ್ತಡ ಹಾಕಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿಗೆ ದೂಡಲಾಗಿದೆ. ಗುತ್ತಿಗೆ ಕಾಮಗಾರಿ ಕೊಡಲು ಒಂದು ಕೋಟಿ ರೂಪಾಯಿ ಬೇಡಿಕೆ ಇಟ್ಟಿರುವ ರಾಜು ಕಪನೂರ ಹಾಗೂ ಸಹಚರರನ್ನು ಕೂಡಲೇ ಬಂಧಿಸಬೇಕು. ಸಚಿನ್ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು. ಸಚಿನ ಕುಟುಂಬದ ಒಬ್ಬರಿಗೆ ಸರಕಾರಿ ನೌಕರಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಒಂದು ವೇಳೆ ಸಚಿನ್ ಕುಟುಂಬಕ್ಕೆ ನ್ಯಾಯ ಹಾಗೂ ಪರಿಹಾರ ಕೊಡಲು ಸರಕಾರ ವಿಳಂಬ ಮಾಡಿದರೆ ಇಡೀ ರಾಜ್ಯಾದ್ಯಂತ ವಿಶ್ವಕರ್ಮ ಸಮಾಜದವರು ಬೀದಿಗೆ ಇಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ರಮೇಶ ಭಕ್ತಿ, ವೀರಣ್ಣ ಶಿಲ್ಪಿ, ದೇವು ವಿಶ್ವಕರ್ಮ, ಕಾಳಪ್ಪ ವಿಶ್ವಕರ್ಮ ಭಂಕಲಗಿ, ಕಲ್ಯಾಣರಾವ ಭಕ್ತಿ, ಮೌನೇಶ ದಂಡೋತಿ, ಶಂಭುಲಿಂಗಪ್ಪ ಕರದಾಳ, ಶ್ರೀಧರ ನಾಲವಾರ ಸೇರಿದಂತೆ ಇತರರು ಇದ್ದರು.