ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿ ಮಾಡುತ್ತಿದ್ದ ಮಣಿಕಂಠ ರಾಠೋಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಸ್ಲಿಂ ಸಮಾಜ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಳೆದ ಮೇ.31 ರಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಮಾತನಾಡಿ 15 ನಿಮಿಷ ಅವಕಾಶ ಮಾಡಿಕೊಟ್ಟರೆ ಮುಸ್ಲಿಂರನ್ನು ಮುಗಿಸುತ್ತೇವೆ ಎಂದು ವಿಡಿಯೋ ಫೇಸ್ ಬುಕ್ ನಲ್ಲಿ ಹರಿಬಿಟ್ಟಿದ್ದಾನೆ ಇತನಿಗೆ ಬುದ್ಧಿ ಭ್ರಮೆ ಆಗಿದೆ ಸ್ಥಿತಿ ಮಿತಿ ಕೆಟ್ಟಿದೆ ಹೀಗಾಗಿ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾನೆ. ಮುಸ್ಲಿಂ ಸಮಾಜದ ವಿರುದ್ಧ ಮತ್ತೊಂದು ಸಮಾಜವನ್ನು ಎತ್ತಿಕಟ್ಟುವ ಕೆಲಸ ಮಾಡುವ ಮೂಲಕ ಜಿಲ್ಲೆಯಲ್ಲಿ ಅಶಾಂತಿ ವಾತಾವರಣ ಸೃಷ್ಟಿ ಮಾಡುತ್ತಿದ್ದಾನೆ ಹೀಗಾಗಿ ಇತನ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್ ಆಗ್ರಹಿಸಿದರು.
ಪಟ್ಟಣದ ಕಿಂಗ್ ಪ್ಯಾಲೇಸ್ ನಲ್ಲಿ ಮುಸ್ಲಿಂ ಸಮಾಜದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ನಾಯಕರ ದೃಷ್ಟಿ ನನ್ನ ಕಡೆ ಬೀರಲಿ ಎನ್ನುವ ಉದ್ದೇಶದಿಂದ ಹಾಗೂ ಸದಾ ಪ್ರಚಾರದಲ್ಲಿ ಇರಲು ಮಣಿಕಂಠ ರಾಠೋಡ ಈ ರೀತಿ ಮುಸ್ಲಿಂ ಸಮಾಜದ ವಿರುದ್ಧ ಮಾತನಾಡುತ್ತಿದ್ದಾನೆ. ಇಂತಹ ಅಯೋಗ್ಯನಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ ಹಾಕಿದ ಚಿತ್ತಾಪುರ ಮತದಾರರು ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಹೇಳಿದರು. ಜಿಲ್ಲೆಯಲ್ಲಿ ಬಿಜೆಪಿ ದಿವಾಳಿಯಾಗಿದ್ದು ಮೂಲೆಗುಂಪಾಗಿದೆ ಹೀಗಾಗಿ ಬಿಜೆಪಿ ಮುಖಂಡರು ಮಣಿಕಂಠ ರಾಠೋಡನನ್ನು ಮುಂದೆ ಮಾಡಿ ಆತನಿಂದ ಮಾತನಾಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಭೇಟಿ ಪಡಾವ್ ಭೇಟಿ ಬಚಾವ್ ಎನ್ನುವ ಬಿಜೆಪಿಯವರು ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಮಧ್ಯಪ್ರದೇಶದ ಸಚಿವ ವಿಜಯ್ ಶಾ ವಿವಾದಾತ್ಮಕ ಹೇಳಿಕೆ ಹಾಗೂ ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ವಿರುದ್ಧ ಎಂಎಲ್ಸಿ ಎನ್.ರವಿಕುಮಾರ ಅವಹೇಳನಕಾರಿ ಹೇಳಿಕೆ ನೀಡಿ ಮಹಿಳೆಯರಿಗೆ ಅವಮಾನಿಸಿದ್ದಾರೆ ಮಹಿಳೆಯರಿಗೆ ಅಗೌರವ ತೋರಿಸುವುದೇ ಬಿಜೆಪಿ ಸಂಸ್ಕೃತಿ ಎಂದು ಟೀಕಿಸಿದರು.
ಬಂಜಾರ ಸಮಾಜದ ಬಾಲಕಿಯ ಅತ್ಯಾಚಾರ ಖಂಡನೀಯ ಆರೋಪಿಗೆ ಕಠಿಣ ಶಿಕ್ಷೆ ನೀಡಲಿ ಅದನ್ನು ಸ್ವಾಗತಿಸುತ್ತೇವೆ. ಮುಸ್ಲಿಂ ಸಮಾಜದ ಒಬ್ಬ ವ್ಯಕ್ತಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದರೆ ಅದಕ್ಕೆ ಇಡೀ ಮುಸ್ಲಿಂ ಸಮಾಜವನ್ನು ಗುರಿಪಡಿಸಿ ಮಾತನಾಡುವುದು ಸರಿಯಲ್ಲ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಪಾಶಾಮಿಯ್ಯಾ ಖುರೇಷಿ ಮಾತನಾಡಿ, ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಬರೀ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಮಾಜದ ಸ್ವಾಸ್ಥ್ಯ ಮತ್ತು ಶಾಂತಿ ಹಾಳು ಮಾಡಿದ್ದು ಅಲ್ಲದೇ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾನೆ ಕೂಡಲೇ ಇತನನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಸಮಾಜದ ಮುಖಂಡರಾದ ಎಂ.ಎ.ರಷೀದ್, ಅಹ್ಮದ್ ಸೇಟ್, ನಜೀರ್ ಆಡಕಿ, ಸಾಬೀರ್ ಸೇಟ್, ಅಫ್ಜಲ್ ಖುರೇಷಿ, ಯಕ್ಬಾಲ್ ತಂಬಾಕವಾಲೆ, ಶೇಖ್ ಬಬ್ಲು, ನಯೀಮ್, ಖಾಜಾ ಬಾದಲ್, ಗಫೂರ್ ಸೇಟ್, ರಹೇಮಾನ್ ಖುರೇಷಿ, ಸೀರಾಜ್ ಖಾಜಿ, ಮನಾನ್ ನಾಗಾವಿ, ಮುನ್ನಾ ಸೇರಿದಂತೆ ಇತರರು ಇದ್ದರು.
“ಕಲಬುರಗಿ ಮತ್ತು ಚಿತ್ತಾಪುರದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಹಾಗೂ ಅಶಾಂತಿ ವಾತಾವರಣ ಸೃಷ್ಟಿ ಮಾಡುವ ಮೂಲಕ ಮಂಗಳೂರು ರೀತಿ ಮಾಡುತ್ತಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡನನ್ನು ಗುಂಡಾ ಕಾಯ್ದೆಯಡಿ ಬಂಧಿಸಿ 5 ವರ್ಷಗಳ ಕಾಲ ಗಡಿಪಾರು ಮಾಡಬೇಕು”.-ಸಯ್ಯಾದ್ ಜಫಾರುಲ್ ಹಸನ್ ಪುರಸಭೆ ಮಾಜಿ ಸದಸ್ಯರು.