ಸರಳ ವಿವಾಹವಾದ ರಘು ಪವಾರ ಮತ್ತು ರೇಣುಕಾ ಜೋಡಿ: ಅಕ್ಷತೆ, ಮಾಂಗಲ್ಯ, ಮಂತ್ರೋಪಚಾರ, ವಾದ್ಯ, ಉಡುಗೊರೆ ಇಲ್ಲದ ಸರಳ ವಿವಾಹ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ವಿಶೇಷವಾಗಿ ಎಐಡಿವೈಓ ನಗರ ಅಧ್ಯಕ್ಷ ರಘು ಪವಾರ ಮತ್ತು ರೇಣುಕಾ ರವರ ವಿವಾಹ ಯಾವುದೇ ಆಡಂಬರ ಇಲ್ಲದೆ ಸರಳ ರೀತಿಯಲ್ಲಿ ಜರುಗಿತು.
ಇಲ್ಲಿ ತಾಳಿ ಕಟ್ಟಲಿಲ್ಲ, ಮಂತ್ರ ಪಠಿಸಲಿಲ್ಲ, ಮಂಗಳ ವಾದ್ಯಗಳಿಲ್ಲ, ಚಪ್ಪರ, ಹಸಿರು ತಳಿರು ತೋರಣಗಳಿಲ್ಲ, ಅದ್ಧೂರಿ ಮೆರವಣಿಗೆ ನಿಷಿದ್ಧ, ವಿವಾಹಕ್ಕೆ ಬಂದವರು ಎಲ್ಲರೂ ಆತ್ಮೀಯರೇ, ಪ್ರತಿಷ್ಠೆ, ವಿಜೃಂಭಣೆಯ ಲವಲೇಷವೂ ಕಾಣಸಿಗದು, ಆರ್ಕೆಸ್ಟ್ರಾ, ಸಂಗೀತ ಸಂಜೆ, ರಿಸೆಪ್ಷನ್, ಮಂಗಳ ವಾದ್ಯದ ಅಬ್ಬರ ಹತ್ತಿರವೂ ಇಲ್ಲ, ಎರಡು ಸಾದಾ ಹಾರ ಮಾತ್ರ ವಧು ವರರು ಹಾಕಿಕೊಂಡಿದ್ದರು.
ಇನ್ನೂ ಇಲ್ಲಿ ಅಕ್ಷತೆಯ ಕಾಳು, ಮಾಂಗಲ್ಯ, ಸಣ್ಣಪುಟ್ಟ ಪೂಜಾ ಸಾಮಗ್ರಿಗಳು, ಹಣ್ಣುಗಳು, ಹೂವುಗಳು ಮದುವೆ ಅಂಗಳದಲ್ಲಿ ಮರೆಯಾಗಿದ್ದವು ಮತ್ತು ವಿಶೇಷವಾಗಿ ಬಂದು ಮಿತ್ರರಿಂದ ಉಡುಗೊರೆಗಳನ್ನು ಸ್ವೀಕರಿಸಲಿಲ್ಲ ಆದರೆ ಅವರ ಆಶೀರ್ವಾದ ಮತ್ತು ಶುಭಾಶಯಗಳನ್ನ ಮಾತ್ರ ಸ್ವೀಕರಿಸಲಾಯಿತು.
ಸರಳ ವಿವಾಹಕ್ಕೆ ಆಗಮಿಸಿದ್ದ ವಧು-ವರರ ಅವರ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು, ಚಪಾತಿ, ಒಂದು ಥರದ ಪಲ್ಯ, ಒಂದು ಥರದ ಸಿಹಿತಿಂಡಿ, ಅನ್ನ, ಸಾಂಬಾರ್ ರುಚಿ ವಿವರಿಸಲು ಭೂರಿ ಭೋಜನ ಏರ್ಪಾಡಾಗಿರಲಿಲ್ಲ, ಎಲ್ಲವೂ ಸರಳ ಸಹಜವಾಗಿತ್ತು.
ಮದುವೆಗೆ ಮನತುಂಬಿ ಹಾರೈಸಲು ದಸಂಸ ರಾಜ್ಯ ಸಂಘಟನಾ ಸಂಚಾಲಕರ ಮರಿಯಪ್ಪ ಹಳ್ಳಿ, ಎಐಡಿವೈಓ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಚಿತ್ತಾಪುರ ತಾಲೂಕು ಪತ್ರಕರ್ತದ ಸಂಘದ ಅಧ್ಯಕ್ಷ ಸಿದ್ದರಾಜ ಮಲ್ಕಂಡಿ, ಗಿರಿಮಲ್ಲಪ ವಳಸಂಗ, ಬಿ. ಭಗವಾನರೆಡ್ಡಿ, ವಿ ಜಿ ದೇಸಾಯಿ, ಬಾಬು ಪವಾರ, ರವಿ ಬೊಂಬೆ, ಸತೀಶ್ ಎಂ ಜಿ, ಡಾ.ಸವಿತಾ ಜಿಂಗಾಡೆ, ಗುಂಡಮ್ಮ ಮಡಿವಾಳ, ಶಿಕ್ಷಕಿ ರೇವಮ್ಮ, ಸತೀಶ ಎಂ.ಜಿ, ಜಗನ್ನಾಥ ಎಸಹೆಚ, ಆರ್ ಕೆ ವೀರಭದ್ರಪ್ಪ, ಗಣಪತರಾವ್ ಮಾನೆ, ರಾಮಣ್ಣ ಇಬ್ರಾಹಿಂಪುರ್, ರಾಘವೇಂದ್ರ ಎಂ ಜಿ, ಹಾಗೂ ಪತ್ರಕರ್ತರು, ಹೋರಾಟಗಾರರು, ಶಿಕ್ಷಕರು ಸೇರಿದಂತೆ ಕುಟುಂಬದವರು, ಆತ್ಮೀಯರು ನೂರಾರು ಜನ ಬಂದು ಬಾಂಧವರು ಸಂತೋಷ ಕೂಟದಲ್ಲಿ ಭಾಗವಹಿಸಿದ್ದರು.
“ಆಶ್ಚರ್ಯ ಮತ್ತು ವಿಚಿತ್ರ ಮದುವೆ ಎಂದು ಅನಿಸರಬಹುದು ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಸರಳ ಮತ್ತು ಯಾವುದೇ ಆಡಂಬರ, ವರದಕ್ಷಿಣೆ, ಬಂಗಾರ ಪಡಿಯದೆ, ಸಾಲ ಮಾಡಿಕೊಳ್ಳದೆ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡುವುದು ನಿಜವಾದ ಮದುವೆಯಾಗಿದೆ”.-ಮರಿಯಪ್ಪ ಹಳ್ಳಿ, ದಸಂಸ ರಾಜ್ಯ ಸಂ. ಸಂಚಾಲಕರು.
“ಪ್ರಜಾತಾಂತ್ರಿಕ ಹಾಗೂ ಸ್ತ್ರೀ ಪುರುಷರು ಸಮಾನರು ಎಂದು ಸಮಾಜಕ್ಕೆ ಸಂದೇಶ ನೀಡುವಂತಹ ಆದರ್ಶ ಮದುವೆ ಇದಾಗಿದೆ”.-ಸಿದ್ದಲಿಂಗ ಬಾಗೇವಾಡಿ ರಾಜ್ಯ ಕಾರ್ಯದರ್ಶಿ ಎಐಡಿವೈಓ.
“ಇಂತಹ ಮಾದರಿಯ ಮದುವೆಗಳು ಹೆಚ್ಚು ನಡೆಯಬೇಕು ಇದಕ್ಕೆ ಪಾಲಕರು ಮತ್ತು ಸಂಬಂಧಿಕರು ಪ್ರೋತ್ಸಾಹಿಸಬೇಕು”.-ಡಾ. ಸವಿತಾ ಜಿಂಗಾಡೆ ಶಹಾಬಾದ.