ಜೀ ಕನ್ನಡ ನ್ಯೂಸ್ ರಿಯಲ್ ಸ್ಟಾರ್ಸ್ ಅವಾರ್ಡ್ಸ್ 2025 ಪ್ರದಾನ, ಕನ್ನಡಕ್ಕಾಗಿ ಜೀವ ಕೊಡಲು ಸಿದ್ಧ: ನಟ ಶಿವರಾಜಕುಮಾರ್
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಕನ್ನಡ ಎಂದರೆ ನನ್ನೆದೆ ಕುಣಿದಾಡುತ್ತದೆ. ಶ್ವಾಸ ಹಿಗ್ಗುತ್ತದೆ. ಹಿರಿಯ ನಟರಾದ ಕಮಲ ಹಾಸನ್ ಅವರಿಂದ ಭಾಷಾ ಅವಹೇಳನ ನಿರೀಕ್ಷಿಸಿರಲಿಲ್ಲ. ಕನ್ನಡಕ್ಕಾಗಿ ಹೋರಾಡಲು ಸಿದ್ಧ, ಜೀವ ಕೊಡಲು ಸಿದ್ಧ ಎಂದು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಹೇಳಿದರು.
ಬೆಂಗಳೂರಿನ ಪ್ರತಿಷ್ಠಿತ ಅಶೋಕ್ ಹೋಟೆಲ್ನಲ್ಲಿ ಕನ್ನಡಿಗರ ಮೆಚ್ಚಿನ ಜೀ ಕನ್ನಡ ನ್ಯೂಸ್ ವಾಹಿನಿಯು ಹಮ್ಮಿಕೊಂಡಿದ್ದ ರಾಜ್ಯದ ವಿವಿಧ ಕ್ಷೇತ್ರಗಳ ಗಣ್ಯರನ್ನು ಗುರ್ತಿಸಿ ಕೊಡುವ ರಿಯಲ್ ಸ್ಟಾರ್ಸ್ ಅವಾರ್ಡ್ಸ್ 2025 ಪ್ರದಾನ ಮಾಡಿ ಮಾತನಾಡಿದರು.
ಕನ್ನಡಿಗರ ಮನಮೆಚ್ಚಿನ ಜೀ ಕನ್ನಡ ನ್ಯೂಸ್ ವಾಹಿನಿಯು ರಾಜ್ಯದ ವಿವಿಧ ಕ್ಷೇತ್ರಗಳ ಗಣ್ಯರನ್ನು ಗುರ್ತಿಸಿ ರಿಯಲ್ ಸ್ಟಾರ್ಸ್ ಅವಾರ್ಡ್ಸ್ 2025 ಕೊಡುತ್ತಿದ್ದು 35 ಸಾಧಕರೂ ನಾಡಿನ ಹೆಮ್ಮೆ ಎಂದು ಗೌರವಿಸಿ ಸನ್ಮಾನಿಸಿದರು.
ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಕೃಷಿ, ಸಮಾಜ ಸೇವೆ, ರಾಜಕಾರಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸುತ್ತಿರುವ ಸಾಧಕರನ್ನು ಅಭಿನಂದಿಸಲಾಯಿತು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಘನ ಉಪಸ್ಥಿತಿ ವಹಿಸಿ ರಿಯಲ್ ಸ್ಟಾರ್ಸ್ ಅವರ ಸೇವೆಯನ್ನು ಕೊಂಡಾಡಿದರು.
ಪ್ರತಿ ವರ್ಷವೂ ಜೀ ಕನ್ನಡ ನ್ಯೂಸ್ ವಾಹಿನಿಯು ರಾಜ್ಯದ ಉದ್ದಗಲದ ಎಲೆ ಮರೆಯ ಕಾಯಂತಿರೋ ಅಸಲಿ ಸ್ಟಾರ್ಸ್ ಅವರನ್ನ ಗುರ್ತಿಸಿದ್ದಾರೆ. ಶಾಲು, ಹಾರವನ್ನ ಮೈಮೇಲೆ ಹಾಕಿದ ಮಾತ್ರಕ್ಕೆ ನಿಮ್ಮ ಸೇವೆ ಮುಗಿಯಲ್ಲ. ಇನ್ನೂ ಬಹಳ, ಅಗಾಧ ಸಮಾಜಮುಖಿ ಕಾರ್ಯಗಳಿಗೆ ಅಡಿಗಲ್ಲು ಆಗಲಿ ಅಂತ ಆಶೀರ್ವದಿಸಿದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಜೀ ಕನ್ನಡ ನ್ಯೂಸ್ ವಾಹಿನಿಯ ಜನಪರ ಕಾಳಜಿ, ರೈತಪರ ಕಾಳಜಿ ಗುಣಗಾನ ಮಾಡಿದರು.
ಇದೇ ವೇಳೆ ಕನ್ನಡ ಭಾಷೆಯ ವಿಚಾರದಲ್ಲಿ ಕಮಲ್ ಹಾಸನ್ ನೀಡಿರುವ ಹೇಳಿಕೆಯನ್ನ ಖಂಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಚಿತ್ರರಂಗದ ಹಿರಿಯರಿಗೆ ಹಾಗೂ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆಯಲಿದ್ದೇನೆ. ಹಿರಿಯ ನಟ ಕಮಲ್ ಹಾಸನ್ ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ, ಡಾ. ರಾಜಕುಮಾರ್ ಅವರು ಕನ್ನಡಕ್ಕಾಗಿ ಗೋಕಾಕ್ ಚಳವಳಿ ನಡೆಸಿದವರು. ಕನ್ನಡ ಭಾಷೆ ವಿಚಾರದಲ್ಲಿ ದೊಡ್ಮನೆ ಸದಾ ಮುಂದಿರಲಿದೆ. ಶಿವಣ್ಣ ಸಮ್ಮುಖದಲ್ಲಿ ಕನ್ನಡ ಭಾಷೆಯ ಇತಿಹಾಸ ಕೆದಕಿರುವುದು ಸರಿಯಲ್ಲ. ಕನ್ನಡಿಗರು ಸೌಮ್ಯವಾದಿಗಳು, ಭಾಷಾ ಸಹಿಷ್ಣುಗಳು. ನಟ ಶಿವರಾಜ್ ಕುಮಾರ್ ತಕ್ಕ ಉತ್ತರ ಕೊಡ್ತಾರೆ ಅಂತಲೂ ಸಚಿವರು ಎಚ್ಚರಿಕೆ ನೀಡಿದರು.
ಮಲ್ಲೇಶ್ವರ ಬಿಜೆಪಿ ಶಾಸಕ ಹಾಗೂ ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು ಕೂಡ ವೇದಿಕೆಯಲ್ಲಿದ್ದು ಸಾಧಕರ ಮುಕುಟಕ್ಕೆ ಗರಿ ಮೂಡಿಸಿ ಅಭಿನಂದಿಸಿದರು. ವೇದಿಕೆ ಮೇಲೆ ಹಿರಿಯ ನಟಿ ತಾರಾ ಅನುರಾಧ, ನಿರ್ಮಾಪಕಿ ಗೀತಾ ಶಿವರಾಜಕುಮಾರ್ ಉಪಸ್ಥಿತರಿದ್ದರು.
ಕೊನೆಯದಾಗಿ ಜೀ ಕನ್ನಡ ನ್ಯೂಸ್ ಸಂಪಾದಕ ರವಿ.ಎಸ್ ಅವರು ಸಮಾರೋಪ ಭಾಷಣದಲ್ಲಿ ಎಲ್ಲಾ 35 ಅವಾರ್ಡಿಗಳ ಸಾಧನೆ ಕೊಂಡಾಡಿದರು. ಪ್ರತಿಭೆವುಳ್ಳ ಕನ್ನಡದ ಮಣ್ಣಿನ ಮಕ್ಕಳನ್ನ ರಾಜ್ಯಕ್ಕೆ ಪರಿಚಯಿಸಿದ್ದೇವೆ ಅವಾರ್ಡಿಗಳನ್ನ ಅಭಿನಂದಿಸಿದರು. ಮುಂದಿನ ಕಾರ್ಯಕ್ರಮದಲ್ಲಿ ಎಲೆಮರೆಯ ಕಾಯಿಯಂತಿರೋ ಮತ್ತಷ್ಟು ದೇಸಿ ಸಾಧಕರನ್ನ ಗುರ್ತಿಸಿ ಗೌರವಿಸಲಾಗುವುದು. ಈ ನಿಟ್ಟಿನಲ್ಲಿ ನಮ್ಮ ತಂಡ ಕಾರ್ಯೋನ್ಮುಖವಾಗಿದೆ ಅಂತಲೂ ರವಿ ಎಸ್ ಅವರು ಹೇಳಿದರು. ಜೊತೆಗೆ ಜೀ ಕನ್ನಡ ನ್ಯೂಸ್ ಸಿಬ್ಬಂದಿಯ ಪರಿಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು.
ಪ್ರಶಸ್ತಿ ಸ್ವೀಕರಿಸಿದ ಗಣ್ಯರು:
ಡಾ. ಎ.ಎಸ್. ಕಿರಣ್ ಕುಮಾರ್ – ಇಸ್ರೋ ಮಾಜಿ ಅಧ್ಯಕ್ಷರು, ಕಿರಣ್ಕುಮಾರ್ ತಿಪ್ಪಾರೆಡ್ಡಿ – ಸಮಾಜ ಸೇವಕರು, ಮಹಾಂತೇಶ್ ಸಿದಗೊಂಡ ಬಡಚಿ – ಶಿಕ್ಷಣ ತಜ್ಞ, ಎ.ಸಿ. ಶ್ರೀನಿವಾಸ್ – ಪುಲಿಕೇಶಿ ನಗರ ಶಾಸಕರು & ಸಮಾಜ ಸೇವಕರು, ಡಾ. ಬಿ.ಆರ್. ಸುಪ್ರೀತ್ – ಶಿಕ್ಷಣ ತಜ್ಞ, ಪೂಜ್ಯ ಶ್ರೀ ಗುರುಮೂರ್ತಿ ಗುರೂಜಿ – ಆಧ್ಯಾತ್ಮಿಕ ಸಂತರು, ಯೋಗಾನಂದ ಮೂರ್ತಿ – ಪ್ರಗತಿಪರ ಕೃಷಿಕರು ಮತ್ತು ಮರಳು ಸಂರಕ್ಷಣಾ ಹೋರಾಟಗಾರರು, ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ – ಸಮಾಜ ಸೇವಕರು, ಲೋಕೇಶ್ ತಾಳಿಕಟ್ಟೆ – ಶಿಕ್ಷಣ ತಜ್ಞ , ಎಸ್.ಎನ್. ಸಿದ್ದರಾಮಪ್ಪ – ನಿವೃತ್ತ ಪೊಲೀಸ್ ಅಧಿಕಾರಿ & ಸಮಾಜ ಸೇವಕರು, ಮಹೇಶ್ ಕುಮಾರ್ – ಮಹಾವೀರ್ ಪ್ರಾಜೆಕ್ಟ್ಸ್ ಸೇಲ್ಸ್ ಹೆಡ್, ಡಾ. ಬಿ. ಮಂಜುನಾಥ್ – ಶಿಕ್ಷಣ ತಜ್ಞ, ಎಸ್.ಎಲ್.ವೆಂಕಟೇಶ್ (ಬಾಬು) – ಸಮಾಜ ಸೇವಕರು, ಶಶಿ ದೇಶಪಾಂಡೆ – ಕಲಾವಿದರು, ರವೀಶ್ ಕೆ.ಪಿ. – ಉದ್ಯಮಿ, ಡಾ. ಪ್ರಹ್ಲಾದ್ ರಾಮರಾವ್ – ಡಿಆರ್ಡಿಒ ವಿಜ್ಞಾನಿ, ಡಾ. ಎಂ. ರಾಮಚಂದ್ರಪ್ಪ (ಹೂಡಿ ಚಿನ್ನಿ) – ಹೋರಾಟಗಾರರು, ಬಿ.ಹೆಚ್. ಅನಿಲ್ ಕುಮಾರ್ – ನಿವೃತ್ತ ಐಎಎಸ್ ಅಧಿಕಾರಿ & ಸಮಾಜ ಸೇವಕರು, ಡಾ. ಆರ್.ಎನ್.ಎಂ. ರಮೇಶ್ – ಪ್ರಗತಿಪರ ಚಿಂತಕ ಹಾಗೂ ಹೋರಾಟಗಾರ, ಸಿ.ಕೆ. ಪ್ರಕಾಶ್ – ಸಮಾಜ ಸೇವಕರು & ಪ್ರಗತಿಪರ ರೈತ, ಡಾ. ನಾಗಭೂಷಣ್ – ಮಕ್ಕಳ ತಜ್ಞರು, ಉತ್ತಮ್ ರಾವ್ ಸಾಹೇಬ್ ಪಾಟೀಲ್ – ಯುವ ಮುಖಂಡರು, ದೊಡ್ಡ ಗಣೇಶ್ – ಮಾಜಿ ಕ್ರಿಕೆಟಿಗ, ಎಂ.ಎ.ಆನಂದ್ – ಶಿಕ್ಷಣ ತಜ್ಞರು ಹಾಗೂ ಕೃಷಿಕ, ಡಾ. ಬಿ.ಎಸ್. ಪ್ರಹ್ಲಾದ್ – ಚೀಫ್ ಇಂಜಿನಿಯರ್ ಬಿಬಿಎಂಪಿ, ಕೆಂಪರಾಜು ಕೆಂಪೇಗೌಡ – ಸಮಾಜ ಸೇವಕರು, ಹನುಮಯ್ಯ ಭೀಮಯ್ಯ ಗುತ್ತೇದಾರ್ – ಯುವ ಮುಖಂಡರು, ಡಾ. ಸಲ್ಮಾನ್ ಪಟೇಲ್ – ತಜ್ಞ ವೈದ್ಯರು & ವ್ಯವಸ್ಥಾಪಕ ನಿರ್ದೇಶಕರು, ಸನ್ ರೈಸ್ ಹಾಸ್ಪಿಟಲ್ ಕಲಬುರಗಿ, ಗೌರವ ಕುಮಾರ ದೇಶ್ಮುಖ – ಸಮಾಜ ಸೇವಕರು, ಕೃಷ್ಣಗೌಡ ವಿ. ಹುಲಕೋಟಿ – ಪ್ರಗತಿಪರ ರೈತ, ಎಸ್.ವೈ. ಚಿಕ್ಕಟ್ಟಿ – ಶಿಕ್ಷಣ ತಜ್ಞ, ವಿಶ್ವನಾಥ್ – ಪ್ರಗತಿಪರ ರೈತ, ಖಾಜಾ ಹುಸೇನ್ ಗುಳಗುಂದಿ – ಕೃಷಿ ಉದ್ಯಮಿ, ರಾಜೇಶ್ವರಿ ಮಂಜುನಾಥ ಪವಾಡಿ – ಕಾಮಧೇನು ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘ, ಕಬ್ಬೆನೂರು, ಲಕ್ಷ್ಮಣ್ ಎಲ್. – ರೈತ ಮುಖಂಡ.