ನಾಗಾವಿ ಎಕ್ಸಪ್ರೆಸ್ ವರದಿಗೆ ಸ್ಪಂದನೆ | ಚಿತ್ತಾಪುರ ಮಾನಸಿಕ ವಿಕಲಾಂಗ ಮಕ್ಕಳಿಗೆ ಆಸರೆಯಾದ ಚಂದ್ರಶೇಖರ ಕಾಶಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಖಾಜಿಪುರ ಏರಿಯಾದಲ್ಲಿರುವ ಖಾಜಿ ನಜೀಮೊದ್ದಿನ್ (ಅಂಜುಮ್) ಅವರ ಇಬ್ಬರ ಮಕ್ಕಳಿಗೆ ಕಳೆದ ಮೂರು ತಿಂಗಳಿಂದ ಮಾಸಾಶನ ಹಣ ಬರದೇ ಇರುವುದರಿಂದ ಸಂಕಷ್ಟಕ್ಕೆ ಸಿಲುಕಿದ ಕುಟುಂಬಕ್ಕೆ ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ ವೈಯಕ್ತಿಕ 10 ಸಾವಿರ ಸಹಾಯ ಮಾಡುವ ಮಾನವೀಯತೆ ಮೆರೆದಿದ್ದಾರೆ.
ಚಿತ್ತಾಪುರ ಮಾನಸಿಕ ವಿಕಲಾಂಗ ಮಕ್ಕಳ 3 ತಿಂಗಳ ಮಾಸಾಶನ ಸ್ಥಗಿತ, ಸಂಕಷ್ಟದಲ್ಲಿ ಸಿಲುಕಿದ ಕುಟುಂಬ ಎಂಬ ವರದಿ ಜೂ.21 ರಂದು ನಾಗಾವಿ ಎಕ್ಸಪ್ರೆಸ್ ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಚಂದ್ರಶೇಖರ ಕಾಶಿ ಅವರು ತಂದೆ ಮತ್ತು ಬುದ್ಧಿಮಾಂದ್ಯ ಮಕ್ಕಳನ್ನು ಶುಕ್ರವಾರ ತಮ್ಮ ಕಚೇರಿಗೆ ಕರೆಯಿಸಿ ಕೆಲ ಹೊತ್ತು ಅವರೊಂದಿಗೆ ಚರ್ಚಿಸಿ ಅವರ ನೋವು ನಲಿವುಗಳನ್ನು ಆಲಿಸಿದರು.
ಖಾಜಿ ನಜಿಮೊದ್ದಿನ್ ಮಾತನಾಡಿ, ನಾನು ಈ ಹಿಂದೆ ಪತ್ರಿಕಾ ವಿತರಕರಾಗಿ ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ ಈಗ ನನಗೆ ವಯಸ್ಸಾದ ಕಾರಣ ಪತ್ರಿಕಾ ವಿತರಕ ಕೆಲಸ ಬಿಟ್ಟು ಮನೆ ಹತ್ತಿರ ಸಣ್ಣ ಅಂಗಡಿಯನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದೇನೆ. ಕೊರೊನಾ ಸಮಯದಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದು, ನನಗೆ ಇಬ್ಬರು ಮಾನಸಿಕ ವಿಕಾಲಾಂಗ ಮಕ್ಕಳಿದ್ದು ಅವರು ಫ್ರೌಡಾವಸ್ಥೆಗೆ ಬಂದರೂ ಲೋಕ ಜ್ಞಾನ ಇಲ್ಲಾ, ನಾನು ಊಟ ಮಾಡಿಸಿದರೆ ಮಾಡಬೇಕು ಇಲ್ಲದಿದ್ದರೆ ಉಪವಾಸ ಇರುತ್ತಾರೆ ಇಂತಹ ಪರಿಸ್ಥಿತಿಯಲ್ಲಿ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದೇನೆ ಎಂದು ಹೇಳಿದರು.
ಪತ್ರಿಕೆಯಲ್ಲಿ ಬಂದ ಸುದ್ದಿ ನೋಡಿದ ತಹಸೀಲ್ದಾರ್ ಕಚೇರಿ ಸಿಬ್ಬಂದಿಗಳು ಮನೆಗೆ ಭೇಟಿ ನೀಡಿ ಸ್ಥಗಿತಗೊಂಡ ಮಾಸಾಶನ ಬಿಡುಗಡೆಗೆ ಕ್ರಮ ಕೈಗೊಂಡಿದ್ದಾರೆ. ಚಂದ್ರಶೇಖರ ಕಾಶಿ ಅವರು 10 ಸಾವಿರ ಸಹಾಯ ಮಾಡಿದ್ದಾರೆ, ಯಾರಾದರೂ ಸಹಾಯ ಮಾಡುವುದಾದರೆ ಮಾಡಬಹುದು ಎಂದು ತಿಳಿಸಿದ್ದಾರೆ.
“ಅಂಜುಮ್ ಖಾಜಿ ತನ್ನ ಇಬ್ಬರು ಬುದ್ದಿಮಾಂದ್ಯ ಮಕ್ಕಳ ಮೂರು ತಿಂಗಳಿಂದ ಮಾಸಾಶನ ಸ್ಥಗಿತಗೊಂಡಿದ್ದರಿಂದ ಮಕ್ಕಳ ಲಾಲನೆ ಪಾಲನೆ ತುಂಬಾ ಕಷ್ಟಪಡುತ್ತಿರುವುದನ್ನು ನೋಡಿ ನನ್ನ ಕೈಲಾದ 10 ಸಾವಿರ ಸಹಾಯಧನ ಮಾಡಿದ್ದೇನೆ, ಅಧಿಕಾರಿಗಳು ಇಂತಹ ಮಕ್ಕಳ ಮಾಸಾಶನ ಪ್ರತಿ ತಿಂಗಳು ಸಿಗುವಂತೆ ಮಾಡಬೇಕು”.-ಚಂದ್ರಶೇಖರ ಕಾಶಿ ಪುರಸಭೆ ಮಾಜಿ ಅಧ್ಯಕ್ಷರು.

