ಚಿತ್ತಾಪುರ ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತ | ಸಚಿವ ಪ್ರಿಯಾಂಕ್ ಖರ್ಗೆ ಆರ್.ಎಸ್.ಎಸ್ ಜಪ ಮಾಡುವುದು ಬಿಟ್ಟು ಅಭಿವೃದ್ಧಿ ಕಡೆ ಗಮನ ಹರಿಸಲಿ: ಸಜ್ಜನಶೆಟ್ಟಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರ್.ಎಸ್.ಎಸ್ ಜಪ ಮಾಡುವುದು ಬಿಟ್ಟು ಅಭಿವೃದ್ಧಿ ಕಡೆ ಗಮನ ಹರಿಸಲಿ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಟಾಂಗ್ ನೀಡಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಚಿತ್ತಾಪುರ ಕ್ಷೇತ್ರದ ಕಡೆ ಗಮನ ಹರಿಸದೆ ಬರೀ ಇಪ್ಪತ್ನಾಲ್ಕು ತಾಸು ಆರ್.ಎಸ್.ಎಸ್ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ಚಿತ್ತಾಪುರ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಇಲ್ಲದೆ ಕಾಮಗಾರಿಗಳು ಸ್ಥಗಿತಗೊಂಡಿವೆ, ಅನುದಾನ ಇದ್ದರೂ ಕಾಮಗಾರಿಗಳು ಪೂರ್ಣಗೊಂಡಿಲ್ಲ, ಕಾಮಗಾರಿಗಳು ಆದರೂ ಗುಣಮಟ್ಟದಿಂದ ಆಗಿಲ್ಲ ಕಳಪೆ ಮಟ್ಟದಲ್ಲಿ ನಡೆದಿದ್ದು ಸರ್ಕಾರದ ಅನುದಾನ ದುರುಪಯೋಗ ಆಗಿದೆ. ಇದರ ಕುರಿತು ಗಮನ ಹರಿಸದ ಸಚಿವರು ಆರ್.ಎಸ್.ಎಸ್ ಬಗ್ಗೆ ಮಾತನಾಡುತ್ತಾರೆ ಎಂದರು.
ಪಟ್ಟಣದಲ್ಲಿ ಯುಜಿಡಿ ಕಾಮಗಾರಿಗೆ 30 ಕೋಟಿ ಅನುದಾನ ಅನುಮೋದನೆಗೊಂಡಿದೆ ಆದರೆ ಕಾಮಗಾರಿ ಮಾತ್ರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕೊಳಚೆ ನೀರು ಯುಜಿಡಿ ಘಟಕಕ್ಕೆ ಹೋಗದೆ ಕಾಗಿಣಾ ನದಿಗೆ ಸೇರುತ್ತಿದೆ ಇದರಿಂದ ಪಟ್ಟಣಕ್ಕೆ ಕಲುಷಿತ ನೀರು ಪೂರೈಕೆ ಆಗುತ್ತಿದೆ ಎಂದು ಆರೋಪಿಸಿದರು.
2025-26 ನೇ ಅಮೃತ ಯೋಜನೆಯಡಿ 24×7 ಕುಡಿಯುವ ನೀರಿನ ಯೋಜನೆಗೆ 47 ಕೋಟಿ ಅನುದಾನ ಮಂಜೂರಾಗಿದೆ, ಪಟ್ಟಣದ ಎಲ್ಲಾ ವಾರ್ಡ್ ಗಳಲ್ಲಿ ಬೇಕಾಬಿಟ್ಟಿ ಪೈಪ್ ಲೈನ್ ಗಾಗಿ ರಸ್ತೆ ಅಗೆದು ಕಾಮಗಾರಿ ಪೂರ್ಣಗೊಳಿಸದೆ ಬಿಹಾರ ಮೂಲದ ಏಜೆನ್ಸಿ ಅವರು ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಇದರಿಂದ ಸಮರ್ಪಕ ಕುಡಿಯುವ ನೀರೂ ಇಲ್ಲ ಇತ್ತಕಡೆ ರಸ್ತೆಗಳು ಪೂರ್ಣ ಹಾಳಾಗಿವೆ ಎಂದು ಹೇಳಿದರು.
ಎಸ್ಸಿಪಿ ಎಸ್ಟಿಪಿ ಯೋಜನೆಯಡಿಯಲ್ಲಿ ಕೆಕೆಆರ್’ಡಿಬಿಯ 45 ಲಕ್ಷ ಅನುದಾನದಲ್ಲಿ ಶಿವರಾವ್ ಪಾಟೀಲ ಮನೆಯಿಂದ ಜನತಾ ವೃತ್ತ (ವ್ಹಾಯಾ ಅಂಬೇಡ್ಕರ್ ವೃತ್ತ, ಭುವನೇಶ್ವರಿ ವೃತ್ತ) ರಸ್ತೆ ಕಾಮಗಾರಿ ಮೂರು ವರ್ಷಗಳಿಂದ ಅರ್ಧಕ್ಕೆ ನಿಲ್ಲಿಸಿದ್ದಾರೆ. ಎಸ್ಸಿ ಜನಾಂಗವಿಲ್ಲದ ಏರಿಯಾದಲ್ಲಿ ಕಾಮಗಾರಿ ಕೈಗೊಂಡು ನಿಯಮ ಉಲ್ಲಂಘಿಸಿ ಹಣ ದುರುಪಯೋಗದ ಮಾಡಿದ್ದಾರೆ ಎಂದು ಆರೋಪಿಸಿದರು.
ನಗರೋತ್ಥಾನ 4 ನೇ ಹಂತದ 5 ಕೋಟಿ ಮೊತ್ತದಲ್ಲಿ ಚಿತ್ತಾವಲಿ ವೃತ್ತದಿಂದ ಹೊಸ ಕೋರ್ಟ್ ವರೆಗೆ ರಸ್ತೆ, ಬಸವ ನಗರದ ಬ್ರಿಜ್ ಕಾಮಗಾರಿ, ಸ್ಟೇಷನ್ ತಾಂಡಾದಲ್ಲಿ ಬಿಟಿ ರಸ್ತೆ ಕಾಮಗಾರಿ ನೆನೆಗುದಿಯಲ್ಲಿವೆ. 2023-24 ನೇ ಸಾಲಿನ 15 ನೇ ಹಣಕಾಸು ಯೋಜನೆಯಡಿಯಲ್ಲಿ 2.32 ಕೋಟಿ ಕ್ರಿಯಾಯೋಜನೆ ಅನುಮೋದನೆಗೊಂಡಿದೆ ಶೇ.70 ಕಾಮಗಾರಿ ಪೂರ್ಣಗೊಂಡಿದ್ದು ಇನ್ನೂಳಿದ 30 ಪ್ರತಿಶತ ಕಾಮಗಾರಿ ಹಣವಿಲ್ಲದೆ ಸ್ಥಗಿತಗೊಂಡಿದೆ ಈ ಕಾಮಗಾರಿಯಲ್ಲಿ ಗುತ್ತಿಗೆದಾರನಿಗೆ ಕೇವಲ ಶೇ.50 ಬಿಲ್ ಮಂಜೂರಾಗಿದೆ.
2025-26 ನೇ ಸಾಲಿನ 15 ನೇ ಹಣಕಾಸು ಯೋಜನೆಯಡಿಯಲ್ಲಿ 2.37 ಕೋಟಿ ಕ್ರಿಯಾಯೋಜನೆ ಅನುಮೋದನೆಗೊಂಡಿದೆ ಇಲ್ಲಿಯವರೆಗೆ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ. 2026-27 ನೇ ಸಾಲಿನ 16 ನೇ ಹಣಕಾಸು ಯೋಜನೆಯಡಿಯಲ್ಲಿ 4 ಕೋಟಿಗೂ ಅಧಿಕ ಅನುದಾನ ಹಂಚಿಕೆಯಾಗಿದ್ದು ಇಲ್ಲಿವರೆಗೆ ಯಾವುದೇ ಕ್ರಿಯಾಯೋಜನೆ ರೂಪಿಸಿರುವುದಿಲ್ಲ. ಸರ್ಕಾರದಲ್ಲಿ ಹಣ ಇಲ್ಲ ಹೀಗಾಗಿ ಕಾಮಗಾರಿಗಳು ನೆನೆಗುದಿಯಲ್ಲಿವೆ ಎಂದು ಸಜ್ಜನಶೆಟ್ಟಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ಪುರಸಭೆ ಮಾಜಿ ಸದಸ್ಯರಾದ ನಾಗರಾಜ ಭಂಕಲಗಿ, ರಮೇಶ್ ಬೊಮ್ಮನಳ್ಳಿ, ಪ್ರಭು ಗಂಗಾಣಿ, ಶಾಮಣ್ಣ ಮೇಧಾ, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸುರಕರ್, ನಗರ ಯುವ ಅಧ್ಯಕ್ಷ ಸಂಗಮೇಶ ಪಾಟೀಲ ಸೇರಿದಂತೆ ಇತರರು ಇದ್ದರು.

