ಶಾಸಕ ಎಂ.ವೈ.ಪಾಟೀಲ ಪುತ್ರ ಡಾ.ಸಂಜೀವಕುಮಾರ ಕ್ಷಮೆ ಯಾಚನೆಗೆ ಆಗ್ರಹ | ಈಡಿಗ ಸಮಾಜಕ್ಕೆ ಅವಹೇಳನ ಗುತ್ತೇದಾರ ಆಕ್ರೋಶ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಈಡಿಗ ಸಮಾಜದ ಬಗ್ಗೆ ಹಗುರವಾಗಿ ಹಾಗೂ ಅವಹೇಳನಕಾರಿಯಾಗಿ ಮಾತನಾಡಿರುವ ಅಫಜಲಪುರ ಶಾಸಕ ಎಂ. ವೈ. ಪಾಟೀಲ ಪುತ್ರ ಡಾ. ಸಂಜೀವಕುಮಾರ ಪಾಟೀಲ ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಈಡಿಗ ಸಮಾಜದ ತಾಲೂಕು ಅಧ್ಯಕ್ಷ ನಾಗಯ್ಯ ಗುತ್ತೇದಾರ ಕರದಾಳ ಆಗ್ರಹಿಸಿದ್ದಾರೆ.
ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಒಂದು ವೇಳೆ ಕ್ಷಮೆ ಕೋರದೇ ಇದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಹಿರಿಯ ಸಹೋದರ ಈಗಿನ ಎನ್ಈಕೆಆರ್’ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ ಈಡಿಗ ಸಮಾಜದ ಬಗ್ಗೆ ಕೀಳಾಗಿ ಮಾತನಾಡಿ ಅವಹೇಳನ ಮಾಡಿದ್ದರು. ಆಗ ಈಡಿಗ ಸಮಾಜದ ವತಿಯಿಂದ ಉಗ್ರ ಹೋರಾಟ ಮಾಡಲಾಗಿತ್ತು ಆದರೂ ಪೊಲೀಸರು ಪ್ರಕರಣ ದಾಖಲು ಮಾಡಿರಲಿಲ್ಲ. ಈಗ ಅವರ ಕಿರಿಯ ಸಹೋದರ ಅದರಲ್ಲೂ ವೈದ್ಯರಾಗಿರುವ ಡಾ.ಸಂಜೀವಕುಮಾರ್ ಪಾಟೀಲ ತಮ್ಮ ವೃತ್ತಿ ಬದ್ಧತೆ ಹಾಗೂ ವ್ಯಕ್ತಿತ್ವ ಮರೆತು ಜಾತಿ ನಿಂದನೆ ಮಾಡಿರುವುದು ನೋಡಿದರೆ ಅವರಲ್ಲಿ ಅಧಿಕಾರದ ದರ್ಪ ಮತ್ತು ಅಹಂಕಾರ ಎದ್ದು ತೋರಿಸುತ್ತದೆ. ಈ ಕೂಡಲೇ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಅಫಜಲಪುರ ಕ್ಷೇತ್ರದಲ್ಲಿ ಈಡಿಗ ಸಮಾಜದ ಜನಸಂಖ್ಯೆ ಕಡಿಮೆ ಇರಬಹುದು ಆದರೆ ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಹಾಗೂ ಈಗಿನ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಈಡಿಗ ಸಮಾಜದವರಾಗಿದ್ದಾರೆ ಇದು ಅರ್ಥ ಮಾಡಿಕೊಳ್ಳಬೇಕು. ಒಂದು ಸಾಮಾಜದ ಬಗ್ಗೆ ಕೀಳಾಗಿ ಕಾಣುವುದು ಹಾಗೂ ಮಾತನಾಡುವುದು ಮೊದಲು ಬಿಟ್ಟು ಬಿಡಿ, ಇದು ಜಾತ್ಯಾತೀತ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿದೆ ಇಲ್ಲಿ ನನ್ನ ಜಾತಿ ಶ್ರೇಷ್ಠ ಇತರ ಜಾತಿ ಕನಿಷ್ಠ ಎಂದು ಭಾವಿಸಿ ಹಿಯ್ಯಾಳಿಸಿ ಮಾತನಾಡುವುದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದ್ದಾರೆ.

