ರಾಜ್ಯ ಬಜೆಟ್ನಲ್ಲಿ ಹಡಪದ ಅಪ್ಪಣ್ಣ ಸಮಾಜಕ್ಕೆ ಅನ್ಯಾಯ: ಮಲ್ಲಿಕಾರ್ಜುನ ಹಡಪದ ಸುಗೂರ ಆಕ್ರೋಶ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಪ್ರಸಕ್ತ 2025 ರ ಸಾಲಿನ ಈ ಬಜೆಟ್ ನಲ್ಲಿ ಹಡಪದ ಅಪ್ಪಣ್ಣ ಸಮಾಜಕ್ಕೆ ಅನ್ಯಾಯವಾಗಿದ್ದು ನಿರಾಶಾದಾಯಕವಾಗಿದೆ ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
12 ನೇ ಶತಮಾನದ ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿಗಳಾದ ಶರಣ ಹಡಪದ ಅಪ್ಪಣ್ಣ ಸಮಾಜಕ್ಕೆ ಅನ್ಯಾಯವಾಗಿದೆ. ಈ 2025 ರ ರಾಜ್ಯ ಬಜೆಟ್ ನಲ್ಲಿ ನಮ್ಮ ಸಮುದಾಯ ಇಟ್ಟುಕೊಂಡ ನಿರೀಕ್ಷೆ ಹುಸಿಯಾಗಿದೆ ಎಂದು ತಿಳಿಸಿದ್ದಾರೆ.
ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ದಿ ನಿಗಮ ಮಂಡಳಿ ಪೂರ್ಣಪ್ರಮಾಣದಲ್ಲಿ ಜಾರಿಗೆ ತರದೇ ಮತ್ತು ಈ ನಿಗಮಕ್ಕೆ ನಯಾ ಪೈಸೆ ಹಣ ನೀಡದೆ ಕಡೆಗಣಿಸಿದ್ದಾರೆ. ಮತ್ತು ಕಲಬುರಗಿ ಜಿಲ್ಲೆಯ ವಿಶ್ವ ವಿದ್ಯಾಲಯದಲ್ಲಿ ಇರುವ ಹಡಪದ ಅಪ್ಪಣ್ಣ ನವರ ಅಧ್ಯಯನ ಪೀಠದ ಪ್ರತ್ಯೇಕ ಕಟ್ಟಡಕ್ಕೆ ನಯಾ ಪೈಸೆ ಹಣ ನೀಡದೆ ಇದಕ್ಕೂ ಅನುದಾನ ಕೊಟ್ಟಿಲ್ಲ. ಹೆಸರಿಗೆ ಮಾತ್ರ ವಿವಿ ಹಡಪದ ಅಪ್ಪಣ್ಣ ಪೀಠದ ಸ್ಥಾನಮಾನ ಕೊಡಲಾಗಿದೆ, ಪೂರಕ ಅಗತ್ಯತೆಗಳೇ ಒದಗಿಸಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಇರುವ ಬಸವಣ್ಣನವರ ಅರಿವಿನ ಮನೆಯ (ಗವಿ) ಪಕ್ಕದಲ್ಲಿ ಶರಣ ಹಡಪದ ಅಪ್ಪಣ್ಣ ನವರ ಅರಿವಿನ ಮನೆ ಇದೆ ಈ ಗವಿಯನ್ನು ಸಹ ಅಭಿವೃದ್ಧಿ ಪಡಿಸಲು ಬಿ.ಕೆ.ಡಿ ಬಿ ಗೆ ಸೇರ್ಪಡೆ ಮಾಡಿ ಎಂದು ಮನವಿ ಪತ್ರ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಮತ್ತು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನಲ್ಲಿ ಬರುವ ಶರಣ ಹಡಪದ ಅಪ್ಪಣ್ಣ ನವರ ಜನ್ಮಸ್ಥಳ ಮಸಬಿನಾಳ ಗ್ರಾಮ ಹಾಗೂ ಹಡಪದ ಲಿಂಗಮ್ಮ ನವರ ದೇಗಿನಾಳ ಗ್ರಾಮವನ್ನು ಅಭಿವೃದ್ಧಿ ಪಡಿಸಲು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಸೇರಿಸಿಲು ನಿರಾಕರಣೆಯಾಗಿದೆ ಹಾಗೆ ಹಡಪದ ಅಪ್ಪಣ್ಣ ಸಮಾಜವನ್ನು ಎಸ್ಸಿ ಗೆ ಅಥವಾ ಎಸ್ಟಿಗೆ ಸೇರ್ಪಡೆ ಮಾಡಲು ಕಾಂಗ್ರೆಸ್ ಸರ್ಕಾರ ಸಹ ಹಿಂದೇಟು ಹಾಕಿದೆ. ಹಡಪದ ಅಪ್ಪಣ್ಣ ಸಮಾಜದ ಕಾಯಕ ಬಂಧುಗಳಿಗೆ ಜಾತಿ ನಿಂದನೆ ಮಾಡುವ ವ್ಯಕ್ತಿಗಳಿಗೆ ಕಾನೂನು ಪ್ರಕಾರ ಅಟ್ರಾಸಿಟಿ ಕಾನೂನು ಜಾರಿಗೆ ತರಲು ಸಹ ಹಿಂದೇಟು ಹಾಕಿದ್ದಾರೆ. ಈ ಹಡಪದ ಅಪ್ಪಣ್ಣ ಸಮಾಜದ ಸರ್ವ ಅಭಿವೃದ್ಧಿಗೋಸ್ಕರ ಬೆಂಗಳೂರು ನಗರದಲ್ಲಿ ಸಹ ಸಮುದಾಯಕ್ಕೆ ನಿವೇಶನ ನೀಡದೇ ಅನ್ಯಾಯ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾನತೆಯ ಹರಿಕಾರ ಎಂಬುದು ಈಗ ನಮ್ಮ ಸಮಾಜದ ಮಟ್ಟಿಗೆ ಹುಸಿಯಾಗಿದೆ ಎಂದು ಟೀಕಿಸಿದ್ದಾರೆ.