Oplus_0

ಎಂ.ಎನ್. ದೇಸಾಯಿ ಕಾಲೇಜಿನಲ್ಲಿ ಅರಣ್ಯ ದಿನಾಚರಣೆ, ಅರಣ್ಯ ಪ್ರದೇಶ ಹೆಚ್ಚಳಕ್ಕೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ: ಚಿನಿವಾರ್

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಪ್ರಸ್ತುತ ಸಂದರ್ಭದಲ್ಲಿ ಪರಿಸರ ಹಾನಿಯಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಲು ಅರಣ್ಯ ಪ್ರದೇಶವು ಹೆಚ್ಚಳವಾಗಬೇಕು. ಆ ದಿಸೆಯಲ್ಲಿ ಸರ್ಕಾರಿ ಇಲಾಖೆಗಳೊಂದಿಗೆ ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಬಸವರಾಜ್ ಚಿನಿವಾರ್ ಹೇಳಿದರು.

ನಗರದ ಹೊಸ ಜೇವರ್ಗಿ ರಸ್ತೆಯಲ್ಲಿರುವ ಎಂ.ಎನ್. ದೇಸಾಯಿ ಪದವಿ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡ ವಿಶ್ವ ಅರಣ್ಯ ದಿನಾಚರಣೆ ಕಾರ್ಯಕ್ರಮವನ್ನು ಸಸಿಯೊಂದಕ್ಕೆ ನೀರು ಉಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಲ್ಲಿ ಬೇಸಿಗೆಯ ಬಿಸಿಲಿನಿಂದ ಜನರು ತತ್ತರಿಸುತ್ತಿದ್ದಾರೆ. ಇಂತಹ ತಾಪಮಾನವನ್ನು ತಗ್ಗಿಸಲು ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ಬೆಳೆಸುವುದು ಅಗತ್ಯವಾಗಿದೆ ಎಂದರು.

ಕಲ್ಯಾಣ ಕರ್ನಾಟಕದಲ್ಲಿ, ಅದರಲ್ಲಿಯೂ ಸಹ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಶೇ. 3 ರಷ್ಟು ಇರುವ ಅರಣ್ಯ ಪ್ರದೇಶವನ್ನು ಹೆಚ್ಚಿಸಬೇಕು. ಆ ದಿಸೆಯಲ್ಲಿ ಅರಣ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದರೆ ಸಾಕಷ್ಟು ಅರಣ್ಯ ಪ್ರದೇಶ ವೃದ್ಧಿಯಾಗುತ್ತಿತ್ತು. ಆ ಕೆಲಸವು ಸಂಬಂಧಿಸಿದ ಇಲಾಖೆಗಳಿಂದ ಆಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಂಘ, ಸಂಸ್ಥೆಗಳು ಹಾಗೂ ಪ್ರತಿಯೊಬ್ಬರೂ ಸಹ ಅರಣ್ಯ ಬೆಳೆಸುವ ಕೆಲಸವನ್ನು ಮನೆಯಿಂದಲೇ ಮಾಡಬೇಕು. ದೈನಂದಿನ ಬದುಕಿನಲ್ಲಿ ಬರುವ ಶುಭ ಹಾಗೂ ಅಶುಭ ಕಾರ್ಯಕ್ರಮಗಳಲ್ಲಿಯೂ ಸಹ ಸಸಿ ನೆಡುವ ಮೂಲಕ ಸಾರ್ಥಕತೆಯನ್ನು ಮೆರೆಯಬೇಕು. ಮದುವೆ, ಮುಂಜುವೆ, ಹಬ್ಬಗಳಲ್ಲಿ ಹಾಗೂ ಸಾವು, ನೋವಿನ ಸಂದರ್ಭದಲ್ಲಿಯೂ ಸಹ ಸಸಿಗಳನ್ನು ನೆಟ್ಟರೆ ಅದರಿಂದ ಉತ್ತಮ ಪರಿಸರದೊಂದಿಗೆ ಉತ್ತಮ ಜೀವನ ಮಾಡಲು ಸಹ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಎಂ.ಎನ್. ದೇಸಾಯಿ ಕಾಲೇಜು ಆಡಳಿತ ಮಂಡಳಿಯು ಪರಿಸರ ಪ್ರಜ್ಞೆಯನ್ನು ಹೊಂದಿದೆ. ಪ್ರತಿ ಕಾರ್ಯಕ್ರಮದಲ್ಲಿಯೂ ಸಹ ಅತಿಥಿಗಳಿಗೆ ಸಸಿಗಳನ್ನು ಕೊಡಲಾಗುತ್ತಿದೆ. ಇಂತಹ ಸಸಿಗಳನ್ನು ನಾನು ಎರಡು ಬಾರಿ ತೆಗೆದುಕೊಂಡಿದ್ದೆ. ಒಮ್ಮೆ ನನ್ನ ತಂದೆ ನಿಧನರಾದಾಗ ಹಾಗೂ ಇನ್ನೊಮ್ಮೆ ನನ್ನ ತಾಯಿ ತೀರಿಕೊಂಡಾಗ. ಈ ಎರಡೂ ಸಂದರ್ಭದಲ್ಲಿ ನಾನು ತೆಗೆದುಕೊಂಡ ಎರಡೂ ಸಸಿಗಳನ್ನು ಕಲಬುರ್ಗಿಯ ಬಸ್ ನಿಲ್ದಾಣದ ಎದುರು ಇರುವ ಸವಿತಾ ಲಾಡ್ಜ್ ಮುಂದುಗಡೆ ನೆಡಿಸಿರುವೆ. ಆ ಎರಡೂ ಗಿಡಗಳು ಉತ್ತಮವಾಗಿ ಬೆಳೆಯುತ್ತಿವೆ. ಇಂತಹ ಕೆಲಸ ಎಲ್ಲರಿಂದಲೂ ಆಗಬೇಕು ಎಂದು ಅವರು ತಿಳಿಸಿದರು.

ಹಿರಿಯ ಪತ್ರಕರ್ತ ದಿ. ಕೆ.ಎನ್. ರೆಡ್ಡಿಯವರು ಸಹ ಪರಿಸರ ಕುರಿತು ಕಾಳಜಿ ಹೊಂದಿದ್ದರು. ತಮ್ಮ ಮನೆಯ ಪರಿಸರದಲ್ಲಿಯೇ ಸಾವಿರಾರು ಗಿಡಗಳನ್ನು ಅವರು ಬೆಳೆಸಿದರು. ಮಹಾನಗರ ಪಾಲಿಕೆಯವರು ನೀರುಣಿಸುವ ಕೆಲಸವನ್ನು ಮಾಡದೇ ಇದ್ದುದರಿಂದ ಸ್ವತ: ಟ್ಯಾಂಕರ್ ಮೂಲಕ ಗಿಡಗಳಿಗೆ ನೀರು ಒದಗಿಸಿದರು. ಅವರಿಗೆ ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆಯವರು ಸಮರ್ಪಕವಾಗಿ ಬೆಂಬಲಿಸಿದ್ದರೆ ಇನ್ನೂ ಹೆಚ್ಚು ಗಿಡಗಳನ್ನು ಬೆಳೆಸಲು ಸಾಧ್ಯವಿತ್ತು. ಅಂತಹ ಪತ್ರಕರ್ತ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡರು. ಅಂತಹ ಪರಿಸರ ಕಾಳಜಿ ಇರುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದರೆ ಅದು ನಮ್ಮ ವ್ಯವಸ್ಥೆಯಲ್ಲಿನ ಲೋಪ ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದರು.

ನಾವು ಹಾಗೂ ನಮ್ಮ ಪರಿಸರವನ್ನು ನಾವು ಉಳಿಸಿ ಬೆಳೆಸಬೇಕು. ಇದರಿಂದ ಎಲ್ಲರಿಗೂ ಉಪಯೋಗ ಆಗುತ್ತದೆ. ಪರಿಸರ ಪ್ರಜ್ಞೆಯೊಂದಿಗೆ ಗಿಡ, ಮರಗಳನ್ನು ಬೆಳೆಸಬೇಕು. ಮನೆಯ ಮುಂದೆ ಆಗದೇ ಹೋದರೆ ಉದ್ಯಾನವನಗಳಲ್ಲಿಯೂ ಸಹ ಗಿಡಗಳನ್ನು ಬೆಳೆಸಬೇಕು ಎಂದು ಅವರು ಸಲಹೆ ಮಾಡಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಂದೀಪ್ ದೇಸಾಯಿ ಅವರು ವಹಿಸಿದ್ದರು. ವಿದ್ಯಾರ್ಥಿ ವೀರೇಶ್ ಸಹ ಅರಣ್ಯ ದಿನಾಚರಣೆ ಕುರಿತು ಮಾತನಾಡಿದರು.

ನಾಗರಾಜ್ ಪಟ್ಟಣಕರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ರೇಷ್ಮಾ ರಾಠೋಡ್ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಶ್ರೀದೇವಿ ಹಿರೇಮಠ್, ರಶ್ಮಿ ಪಾಟೀಲ್, ಕು. ಗುರುಬಾಯಿ ವಾಡಿ, ಶ್ರೀಮತಿ ಶಿಲ್ಪಾ ಚೆಟ್ಟಿ, ಶ್ರೀಮತಿ ಗೀತಾ ಇಂಗಿನ್, ಕು. ಮೇಘಾ, ಕು. ಪ್ರಿಯಾ, ಶ್ರೀಮತಿ ಶೃತಿ ನಾಚವಾರ್, ಡಾ. ನಾಗಮ್ಮ, ಶ್ರೀಮತಿ ಅಶ್ವಿನಿ ಹೊಸಮನಿ, ಮಂಜುನಾಥ್, ಶಿವಶರಣಪ್ಪ ಪೂಜಾರಿ, ಅಮರ, ಮುಂತಾದ ಬೋಧಕ, ಬೋಧಕೇತರರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!