Oplus_0

ಆಂದೋಲಾ ಶ್ರೀಗಳ ವಿರುದ್ಧ ದಂಡಗುಂಡ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕೆಂಡಾಮಂಡಲ: ಕಾವಿ ಬಿಚ್ಚಿ ರಾಜಕಾರಣ ಮಾಡಲು ಒತ್ತಾಯ

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಚಿತ್ತಾಪುರ ತಾಲೂಕಿನ ದಂಡಗುಂಡ ಬಸವೇಶ್ವರ ದೇವಸ್ಥಾನ, ಸಂಗಮೇಶ್ವರ ಮಠ ಮತ್ತು ದೇವಸ್ಥಾನದ ಟ್ರಸ್ಟ್ ಕುರಿತು ಸರಿಯಾದ ಮಾಹಿತಿಯಿಲ್ಲದೇ ರಾಜಕೀಯ ಪ್ರೇರಿತ ಹೇಳಿಕೆಯನ್ನು ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ನೀಡಿದ್ದು ಖಂಡನಾರ್ಹ. ಕೂಡಲೇ ಸ್ವಾಮೀಜಿ ಕಾವಿ ಕಳಚಿ ರಾಜಕೀಯಕ್ಕೆ ಬರಬೇಕು ಎಂದು ಶ್ರೀ ದಂಡಗುಂಡ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬಾಗಣಗೌಡ ಸಂಕನೂರ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಮೇಲೆ ಕಾವಿ ಬಟ್ಟೆ ಹೊದ್ದುಕೊಂಡು ಬಾಯಿಯಲ್ಲಿ ಕೇವಲ ರಾಜಕೀಯ ಮಾತನಾಡುವ ಸ್ವಾಮೀಜಿ ಕಾವಿ ಬಟ್ಟೆ ಕಳಚಿ ರಾಜಕೀಯಕ್ಕೆ ಬರಲಿ ಎಂದು ಒತ್ತಾಯಿಸಿದರು.

ಸಮಾಜಕ್ಕೆ ಸರಿಯಾದ ಸಂಸ್ಕಾರ, ಸಂಸ್ಕೃತಿ, ಧಾರ್ಮಿಕ, ಆಧ್ಯಾತ್ಮಿಕವಾಗಿ ಮಾರ್ಗದರ್ಶನ ಮಾಡದೇ ಸಮಾಜದಲ್ಲಿ ದ್ವೇಷ ಹರಡುವ, ಸಮಾಜದ ವ್ಯವಸ್ಥೆ ಕಲುಷಿತಗೊಳಿಸುವ ತಪ್ಪು ಸಂದೇಶ ಹರಡುತ್ತ ಪರೋಕ್ಷವಾಗಿ ರಾಜಕೀಯ ಮಾಡುತ್ತಿದ್ದಾರೆ. ರಾಜಕಾರಣ ಅಷ್ಟೊಂದು ಇಷ್ಟವಾಗಿದ್ದರೆ ಬಹಿರಂಗ ರಾಜಕೀಯಕ್ಕೆ ಇಳಿಯಲಿ ಎಂದು ಅವರು ಸವಾಲು ಹಾಕಿದರು.

ದೇವಸ್ಥಾನದ ಟ್ರಸ್ಟಿಗಳು ಸಚಿವ ಪ್ರಿಯಾಂಕ್ ಖರ್ಗೆ ಅವರ ಬಾಲಬಡುಕರು, ಹಿಂಬಾಲಕರು ಎಂದು ಹೇಳಿರುವ ಸ್ವಾಮೀಜಿ ತಮ್ಮ ನಾಲಿಗೆಯ ನೀಚತನ ತೋರಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ನ್ಯಾಯವಾದಿ ಚಂದ್ರಶೇಖರ್ ಅವಂಟಿ ಅವರು ಬಿಜೆಪಿ ಮುಖಂಡರಾಗಿದ್ದಾರೆ. ಈ ಕುರಿತು ಸಾಮಾನ್ಯ ಜ್ಞಾನವಿಲ್ಲದೇ ಆರೋಪಿಸಿದ್ದು, ರಾಜಕೀಯ ಪರಿಜ್ಞಾನವಿಲ್ಲದೇ ಮಾತನಾಡುವ ಚಟ ಬೆಳೆಸಿಕೊಂಡಿದ್ದಾರೆ. ದೇವಸ್ಥಾನದ ಹಣ ಬಳಸಿಕೊಂಡು ಬದುಕುವ ದುಸ್ಥಿತಿ ಯಾವ ಟ್ರಸ್ಟಿಗಳಿಗೂ ಇಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕಳಂಕ ಹಚ್ಚುವ ಭರದಲ್ಲಿ ಸುಳ್ಳು ಹೇಳಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದರು.

ಕಳೆದ 1985 ರಲ್ಲಿ ದಂಡಗುಂಡ ದೇವಸ್ಥಾನದಲ್ಲಿ ಸಂಗಮೇಶ್ವರ ಸಂಸ್ಥಾನ ಮಠದ ಶಿವಾಚಾರ್ಯರ ನೇತೃತ್ವದಲ್ಲಿ ಟ್ರಸ್ಟ್ ಅಧಿಕೃತವಾಗಿ ನೊಂದಣಿ ಮಾಡಲಾಗಿದೆ. ಪಕ್ಷಾತೀತವಾಗಿ ಟ್ರಸ್ಟ್ ರಚಿಸಿ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಅದರ ಅರಿವಿಲ್ಲದ ಸ್ವಾಮೀಜಿ ಅನಧಿಕೃತ ಟ್ರಸ್ಟ್ ಎಂದು ಆರೋಪಿಸಿದ್ದು ಸರಿಯಲ್ಲ. ಯಾವುದೇ ಲೂಟಿ, ಅವ್ಯವಹಾರ ಮಾಡಿಲ್ಲ. ಪ್ರತಿ ವರ್ಷದ ಲೆಕ್ಕಪತ್ರದ ದಾಖಲೆಯಿದೆ. ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸದೇ ವಿರೋಧಿಸುತ್ತಿರುವ ಸಂಗಮೇಶ್ವರ ಮಠದ ಮಠಾಧೀಶರು ಸನ್ಯಾಸಿ ಮಠವನ್ನು ಸಂಸಾರದ ಮಠವನ್ನಾಗಿ ಮಾಡುತ್ತಿದ್ದರು. ಅವರ ವ್ಯಕ್ತಿತ್ವದ ಸ್ವಲ್ಪವೂ ಅರಿವಿಲ್ಲದೇ ಸ್ವಾಮೀಜಿ ಮಾಧ್ಯಮದ ಮೂಲಕ ಸಮಾಜದಲ್ಲಿ ತಪ್ಪು ಸಂದೇಶ ಹರಡಿಸಿದ್ದಾರೆ ಎಂದು ಅವರು ಆರೋಪಿಸಿದರು.

ದೇವಸ್ಥಾನದ ಅಭಿವೃದ್ಧಿ ದೃಷ್ಟಿಯಿಂದ ದೇವಸ್ಥಾನಕ್ಕೆ ಎದುರಾಗಿ ಇರುವ ಹಳೆ ಮಠ ತೆರವು ಮಾಡಿ ಹೊಸ ಮಠದ ಕಟ್ಟಡ ಕಟ್ಟಿಕೊಡುತ್ತೇವೆ ಎಂದು ಹೇಳಲಾಗಿದೆ. ಮಠದಲ್ಲಿ ಮಠಾಧೀಶರು ತಮ್ಮ ಕುಟುಂಬಸ್ಥರನ್ನು ಸೇರಿಸಿಕೊಂಡು ಮಠದ ಸಂಪ್ರದಾಯ ಹಾಳು ಮಾಡಿದರು. ಗ್ರಾಮಸ್ಥರು ಇದರಿಂದ ಆಕ್ರೋಶಗೊಂಡಿದ್ದರಿಂದ ಶ್ರೀಗಳು ಮಠದಿಂದ ದೂರ ಉಳಿದು ಸುಳ್ಳು ಹೇಳುತ್ತ ಟ್ರಸ್ಟ್ ಕುರಿತು ಆರೋಪ ಮಾಡುತ್ತ ತಪ್ಪು ಸಂದೇಶ ಹರಡುತ್ತಿದ್ದಾರೆ. ಗುರು ಶಿಷ್ಯ ಪರಂಪರೆಗೆ ಮಠಾಧೀಶರೆ ಕೊನೆ ಮಾಡಿದ್ದಾರೆ. ಸತ್ಯ ಮರೆಮಾಚಿ ಮಾತನಾಡಿದ್ದು ಸಿದ್ಧಲಿಂಗ ಸ್ವಾಮೀಜಿಯವರಿಗೆ ಶೋಭೆ ತರುವುದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಯಾಲಯದ ನಿರ್ದೇಶನದಂತೆ ಕಂದಾಯ ಇಲಾಖೆ ಅಧಿಕಾರಿಗಳು ದೇವಸ್ಥಾನದಲ್ಲಿ ಟ್ರಸ್ಟ್ ಕುರಿತು ದಂಡಗುಂಡ ಗ್ರಾಮಸ್ಥರ ಸಭೆ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ದೇವಸ್ಥಾನ ಸರ್ಕಾರದ ಅಧೀನಕ್ಕೆ ಕೊಡದೇ ನೂತನ ದೇವಸ್ಥಾನ ಕಟ್ಟಡ ನಿರ್ಮಾಣ ಹಾಗೂ ಸರಿಯಾಗಿ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ಮಾಡುತ್ತಿರುವ ಟ್ರಸ್ಟಿಗೆ ವಹಿಸಿಕೊಡಬೇಕು ಎಂದು ಆಗ್ರಹಿಸಿದ ಅವರು, ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಕೊಡಲು ಮುಂದಾದರೆ ಕಾನೂನು ಹೋರಾಟದೊಂದಿಗೆ ಉಗ್ರ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಸಿದರು.

ಗ್ರಾಮಸ್ಥರ ಭಾವನೆಗಳಿಗೆ ಗೌರವಿಸಿ ಕ್ಷೇತ್ರದ ಶಾಸಕರೂ ಆದ ಸಚಿವ ಪ್ರಿಯಾಂಕ್ ಖರ್ಗೆ ಅವರು ಪತ್ರ ಬರೆದಿದ್ದಾರೆಯೇ ಹೊರತು ಅವರಿಗೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರು ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ಆಡಳಿತ ಮಾಡುತ್ತಿರುವುದು ಆಂದೋಲಾ ಸ್ವಾಮೀಜಿ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಸಾಮಾಜಿಕ ನ್ಯಾಯ, ಸಮ ಸಮಾಜ, ಸಮಬಾಳು ನಿರ್ಮಾಣ ಮಾಡುವ ಖರ್ಗೆ ಅವರ ರಾಜಕೀಯ ನಡೆಯಿಂದ ಅಸೂಯೆಗೊಂಡು ಜನರಿಗೆ ದಾರಿ ತಪ್ಪಿಸುವ ಕೆಲಸ ಸ್ವಾಮೀಜಿಯೇ ಬಹಿರಂಗವಾಗಿ ಮಾಡುತ್ತಿರುವುದು ಸಮಾಜದ ದುರಂತ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ನಾನು ತೊಗರಿ ಮಂಡಳಿಯ ಅಧ್ಯಕ್ಷರಾಗಿದ್ದಾಗಲೂ ಆಂದೋಲಾ ಸ್ವಾಮೀಜಿ ಸುಳ್ಳು ಆರೋಪಗಳನ್ನು ಮಾಡಿದ್ದರು. ಈಗಲೂ ಸಹ ಅದನ್ನೇ ಮುಂದುವರೆಸಿದ್ದಾರೆ. ಹಾಗಾಗಿ ಅವರು ಕಾವಿ ಕಳಚಿ ರಾಜಕೀಯಕ್ಕೆ ಬರಬೇಕು ಎಂದು ಅವರು ಒತ್ತಾಯಿಸಿದರು.

ಟ್ರಸ್ಟ್ನವರು ಭಕ್ತರ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನು ತಳ್ಳಿ ಹಾಕಿದ ಅವರು, ರಥ ಎಳೆಯಲು ಸ್ಥಳ ಬೇಕಾಗಿತ್ತು. ಆ ಸ್ಥಳ ಖರೀದಿಗೆ 12 ಲಕ್ಷ ರೂ.ಗಳನ್ನು ಕೊಟ್ಟು ಖರೀದಿಸಲಾಗಿದೆ. 2 ಲಕ್ಷ ರೂ.ಗಳಲ್ಲಿ ಸ್ಥಳ ಖರೀದಿಸಬೇಕಿತ್ತು ಎಂಬುದು ಸರಿಯಲ್ಲ. ಗ್ರಾಮದಲ್ಲಿಯೇ ಒಬ್ಬರು 12 ಲಕ್ಷ ರೂ.ಗಳನ್ನು ಕೊಟ್ಟು ಜಮೀನು ಖರೀದಿಸಿದ್ದು, ಅದೇ ಮಾದರಿಯ ದರವನ್ನು ಮಾಲಿಕರು ಕೇಳಿದ್ದರಿಂದ 12 ಲಕ್ಷ ರೂ.ಗಳನ್ನು ಭರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷರೂ ಆದ ರಾಜ್ಯ ವಿಧಾನ ಪರಿಷತ್ ಸದಸ್ಯ ಡಾ. ಬಿ.ಜಿ. ಪಾಟೀಲ, ಕಾರ್ಯದರ್ಶಿ ಚಂದ್ರಶೇಖರ ಅವಂಟಿ, ಸದಸ್ಯರಾದ ಬಸವರೆಡ್ಡಿ ಗುರಪ್ಪ ಇಟಗಿ, ರಾಜಶೇಖರ ಸಂಗಣ್ಣಗೌಡ ಪಾಟೀಲ, ಭೀಮರಾವ್ ಗುರುಣಗೌಡ ಪಾಟೀಲ, ಭೀಮಣ್ಣ ಸಾಲಿ, ಮಹಾಂತಗೌಡ ಮಾಲಿಪಾಟೀಲ, ಶರಣಬಸಪ್ಪ ಶಿವಲಿಂಗಪ್ಪಗೌಡ, ಡಾ. ಪ್ರಭುರಾಜ್ ಬಸವಣ್ಣಪ್ಪ ಕಾಂತಾ, ಕಲ್ಯಾಣಕುಮಾರ್ ಶಿವಶರಣಪ್ಪ ಮುಂತಾದವರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!